ತೆಲಂಗಾಣ: ಶಿವಲಿಂಗ ಹುಡುಕಲು ಹೈವೇ ಅಗೆದು ಹಾಳುಗೆಡವಿದ ಜನ
ಯುವನೊಬ್ಬನ ಮಾತನ್ನು ನಂಬಿ ವಾರಂಗಲ್- ಹೈದರಾಬಾದ್ ಹೈವೇಯನ್ನು ಅಗೆದ ತೆಲಂಗಾಣದ ಗ್ರಾಮಸ್ಥರು. ಕನಸಿನಲ್ಲಿ ಹೈವೇ ಕೆಳಗೆ ಶಿವಲಿಂಗವಿದೆಯೆಂದು ಹೇಳಿದ್ದ ಯುವಕ. ಆತನ ಮಾತು ನಂಬಿದ ವಾರಂಗಲ್ ಜಿಲ್ಲೆಯ ಪೆಂಬರ್ತಿ ಗ್ರಾಮಸ್ಥರು. ರಾಷ್ಟ್ರೀಯ ಹೈವೇಯಲ್ಲ
ವಾರಂಗಲ್, ಜೂನ್ 6: ಯುವಕನೊಬ್ಬನ ಮಾತನ್ನು ನಂಬಿ, ತಮ್ಮ ಗ್ರಾಮದ ಬಳಿ ಹಾದು ಹೋಗಿದ್ದ ಹೈವೇ ಕೆಳಗೆ ಇರಬಹುದಾದ ಶಿವಲಿಂಗವನ್ನು ಹೊರತೆಗೆಯಲು ಆ ರಸ್ತೆಯನ್ನು ತೋಡಿ ಹಾಳುಗೆಡವಿದ್ದಾರೆ ಆಂಧ್ರ ಪ್ರದೇಶದ ಜನಗಾವ್ ಹಳ್ಳಿಯ ಜನ.
ವಿಷಯ ಇಷ್ಟೇ. ತೆಲಂಗಾಣ ರಾಜ್ಯದ ವಾರಂಗಲ್ ಜಿಲ್ಲೆಯ ಪೆಂಬರ್ತಿ ಎಂಬ ಗ್ರಾಮದ 30 ವರ್ಷದ ಯುವಕ ಲಖನ್ ಮನೋಜ್ ಎಂಬಾತ ಗ್ರಾಮಸ್ಥರ ಬಳಿಯಲ್ಲಿ ತನಗೊಂದು ಕನಸು ಬಿದ್ದಿದ್ದು, ಅದರಲ್ಲಿ ಶಿವಲಿಂಗವೊಂದು ತಮ್ಮ ಗ್ರಾಮದ ಪಕ್ಕವೇ ಹಾದು ಹೋಗುವ ವಾರಂಗಲ್-ಹೈದರಾಬಾದ್ ಹೈವೇಯ ಭಾಗವೊಂದರ ಕೆಳಗಿರುವುದಾಗಿ ಗೋಚರವಾಗಿದೆ.[ಮಾನವ ಮುಖ ಹೋಲುವ ಕರು ಆರಾಧನೆ ಮಾಡಿದ ಉತ್ತರ ಪ್ರದೇಶದ ಜನ]
ಆ ಶಿವಲಿಂಗವನ್ನು ಅಗೆದೆ ತೆಗೆದು ಅದೇ ಜಾಗದಲ್ಲಿ ಗುಡಿ ಕಟ್ಟಿದರೆ, ಗ್ರಾಮದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಕನಸಿನಲ್ಲಿ ವಾಣಿಯೊಂದು ಹೇಳಿದ್ದಾಗಿ ತಿಳಿಸಿದ್ದಾನೆ.
ಆತನ ಮಾತನ್ನು ನಂಬಿದ ಗ್ರಾಮಸ್ಥರು, ಬೆಳ್ಳಂಬೆಳಗ್ಗೆಯೇ ಗ್ರಾಮದ ಸಮೀಪದ ಹೈವೇಯ ಒಂದು ನಿರ್ದಿಷ್ಟ ಜಾಗದಡಿ ಸುಮಾರು 20 ಅಡಿವರೆಗೆ ಗುಂಡಿ ತೋಡಿದ್ದಾರೆ. ಈ ಕೆಲಸದಲ್ಲಿ ಆ ಗ್ರಾಮದ ಗ್ರಾಮಪಂಚಾಯ್ತಿಯ ಉಪಾಧ್ಯಕ್ಷನೂ ಕೈ ಜೋಡಿಸಿದ್ದಾನೆ. ಇದರಿಂದಾಗಿ, ರಸ್ತೆಯಲ್ಲಿ ಸಂಚಾರ ವ್ಯತ್ಯಯವಾಗಿದೆ.[ರಾಯಚೂರಿನಲ್ಲಿ ಬಿರುಗಾಳಿ ಸಹಿತ ಮಳೆ, ಜನಜೀವನ ಅಸ್ತವ್ಯಸ್ತ]
ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ, ರಸ್ತೆ ಪಕ್ಕದಿಂದ ವಾಹನಗಳಿಗೆ ಸಾಗಿ ಹೋಗಲು ಅವಕಾಶ ಕಲ್ಪಿಸಿದ್ದಾರೆ. ಅಲ್ಲದೆ, ಯುವಕನನ್ನು ಹಾಗೂ ಗ್ರಾಮಸ್ಥರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.