IMD Weather Forecast: ವಿವಿಧ ಭಾಗಗಳಲ್ಲಿ ಶೀತ ಅಲೆ ಎಚ್ಚರಿಕೆ! ಹಲವೆಡೆ ಹಗುರ ಮಳೆ ಮುನ್ಸೂಚನೆ
Cold Wave Alert in India: ಹಿಂಗಾರು ಮಳೆಯು ಸಕ್ರಿಯತೆ ಕಡಿಮೆ ಆಗಿದ್ದು, ಕೆಲವೆಡೆ ಮಾತ್ರ ಮಳೆ ನಿರೀಕ್ಷೆ ಇದೆ. ಉಳಿದಂತೆ ಉತ್ತರ ಭಾರತ ರಾಜ್ಯಗಳು ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಶೀತದ ಅಲೆಯ ವಾತಾವರಣ ನಿರ್ಮಾಣವಾಗಿದೆ. ಮಂಜು ಕವಿದ ವಾತಾವರಣ ಕವಿಯಲಿದ್ದು, ತಾಪಮಾನದಲ್ಲಿ ತೀವ್ರವಾಗಿ ಕುಸಿತ ಉಂಟಾಗಲಿದೆ. ಜೊತೆಗೆ ಕೆಲವು ಪ್ರದೇಶಗಳಲ್ಲಿ ಮಳೆ ಆರ್ಭಟ ಕಂಡು ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಭಾರತವನ್ನು ಶೀತಗಾಳಿ ಆವರಿಸಿದೆ. ದೇಶದ ಗುಡ್ಡಗಾಡು ರಾಜ್ಯಗಳಲ್ಲಿ ನಿರಂತರ ಹಿಮಪಾತ ಬೀಳುತ್ತಿದೆ. ಹವಾಮಾನದಲ್ಲಿನ ಬದಲಾವಣೆ ಕಾರಣದಿಂದಾಗಿ ಅನೇಕ ರಾಜ್ಯಗಳಲ್ಲಿ ಮೈಕೊರೆವ ಚಳಿ ದಾಖಲಾಗುತ್ತಿದೆ. ಬಯಲು ಪ್ರದೇಶಗಳಲ್ಲೂ ಸಹ ಉಷ್ಣಾಂಶ ಇಳಿಕೆ ಆಗಿದೆ. ದೆಹಲಿ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ನಿರಂತರ ಶೀತಗಾಳಿ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗಿನ ಜಾವದ ವಾಹನಗಳು ಹೆಡ್ಲೈಟ್ ಹಾಕಿಕೊಂಡು ಓಡಾಡಬೇಕಾದ ಸ್ಥಿತಿ ಇದೆ.

ರಾಜಧಾನಿ ದೆಹಲಿಯಲ್ಲಿ ಈಗಾಗಲೇ "ಅತ್ಯಂತ ಕಳಪೆ" ಗಾಳಿಯ ಗುಣಮಟ್ಟ ದಾಖಲಾಗಿದೆ. ತಾಪಮಾನ ಮತ್ತು ಮಂಜಿನ ಪರಿಸ್ಥಿತಿಗಳಲ್ಲಿ ಗಮನಾರ್ಹ ಕುಸಿತವಾಗಿದೆ. ಚಳಿ ಹೆಚ್ಚಾಗಿದ್ದು, ಇದೇ ವಾತಾವರಣ ಮುಂದಿನ ಕೆಲವು ದಿನಗಳ ಕಾಲ ಮುಂದುವರಿಯಲಿದೆ. ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತಲೂ ಇಳಿಕೆ ಆಗಿದೆ. ವಾಯುವ್ಯ ದಿಕ್ಕಿನಿಂದ ಬೀಸುವ ಗಾಳಿಯು ಶೀತವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ವಾರಾಂತ್ಯಕ್ಕೆ ತಾಪಮಾನ ಮತ್ತಷ್ಟು ಕಡಿಮೆ ಸಾಧ್ಯತೆ
ಉತ್ತರ ಪ್ರದೇಶ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಪ್ರಾರಂಭವಾಗಿ ಮುಂದಿನ ಎರಡು ದಿನಗಳವರೆಗೆ ಶೀತಗಾಳಿಯ ತೀವ್ರತೆ ಹೆಚ್ಚಾಗಲಿದೆ. ಪಂಜಾಬ್, ಹರಿಯಾಣ, ಗುಜರಾತ್, ದೆಹಲಿ, ಉತ್ತರಾಖಂಡ ಸೇರಿಂತೆ ಇತರ ಭಾಗಗಳಲ್ಲಿ ವಾಯುವ್ಯ ಮಾರುತಗಳಿಂದ ಉಂಟಾಗುವ ಶೀತಗಾಳಿಯು ಅನೇಕ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನದಲ್ಲಿ ತೀವ್ರ ವ್ಯತ್ಯಾಸವಾಗಿದೆ. ಕರ್ನಾಟಕದ ಉತ್ತರ ಭಾಗದಲ್ಲೂ ಶೀತಗಾಳಿಯ ಲಕ್ಷಣಗಳು ಕಂಡು ಬರುತ್ತಿವೆ. ಮುಂದಿನ ದಿನಗಳಲ್ಲಿ ಪಶ್ಚಿಮ ಮಾರುತಗಳ ಪ್ರಭಾವವು ಉಷ್ಣಾಂಶವು ಇನ್ನಷ್ಟು ಕಡಿಮೆ ಆಗಲಿದೆ ಎಂದು ಐಎಂಡಿ ವರದಿ ತಿಳಿಸಿದೆ.
ದೇಶದ ವಿವಿಧೆಡೆ ಮಳೆ ನಿರೀಕ್ಷೆ
ಸಮುದ್ರ ಮೇಲ್ಮೈನಲ್ಲಿ ಉಂಟಾಗಿರುವ ಬದಲಾವಣೆ ಕಾರಣದಿಂದಾಗಿ ಕೇರಳದ ದಕ್ಷಿಣ ಪ್ರದೇಶ, ದಕ್ಷಿಣ ತಮಿಳುನಾಡು ಸೇರಿದಂತೆ ದೇಶದ ದಕ್ಷಿಣ ಭಾರತದ ಪ್ರದೇಶಗಳಲ್ಲಿ ಮುಂದಿನ 28 ಗಂಟೆಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಚದುರಿದ ಮಳೆಯಾಗುವ ಸಂಭವವಿದೆ.
ಇಂದು ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಮೋಡ ಕವಿದ ವಾತಾವರಣ ಇದೆ. ಹಗುರ ಮಳೆ ಆಗುವ ನಿರೀಕ್ಷೆ ಇದೆ. ಇನ್ನೂ ತಮಿಳುನಾಡು ಮತ್ತು ಪುದುಚೇರಿಯಲ್ಲಿ ನವೆಂಬರ್ 11 ರವರೆಗೆ ಮಳೆಯಾಗುವ ಸಾಧ್ಯತೆ ಇದೆ. ಚಳಿ, ಬಿಸಿಲು ಕಡಿಮೆ ಆಗಿದ್ದು ಮಬ್ಬು ವಾತಾವರಣ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಡಿಸೆಂಬರ್ 13 ರವರೆಗೆ ಅರೇಬಿಯನ್ ಸಮುದ್ರಕ್ಕೆ (ಕೊಮೊರಿನ್ ಪ್ರದೇಶ) ಮತ್ತು ಮನ್ನಾರ್ ಕೊಲ್ಲಿ, ನೈಋತ್ಯ ಮತ್ತು ಆಗ್ನೇಯ ಬಂಗಾಳಕೊಲ್ಲಿ ಸೇರಿದಂತೆ ಬಂಗಾಳಕೊಲ್ಲಿ, ತಮಿಳುನಾಡು, ಪುದುಚೇರಿ ಮತ್ತು ಶ್ರೀಲಂಕಾ ಕರಾವಳಿ ಭಾಗದಲ್ಲಿ ಗಾಳಿ ಬೀಸುವಿಕೆ ವೇಗ ಹೆಚ್ಚಾಗಲಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಶೀತಗಾಳಿ ನಗರಗಳು
ದೆಹಲಿ, ಬಿಹಾರ, ಕಿಶನ್ಗಂಜ್ ಮತ್ತು ಪಾಟ್ನಾ ಸೇರಿದಂತೆ ಉತ್ತರ ಮತ್ತು ಪೂರ್ವ ಭಾರತದ ಎಂಟು ಪ್ರಮುಖ ನಗರಗಳಿಗೆ ಐಎಂಡಿ ಶೀತಗಾಳಿ ಬೀಸಲಿದೆ. ಉತ್ತರ ಪ್ರದೇಶದ ಲಕ್ನೋ, ಕಾನ್ಪುರ, ಆಗ್ರಾ ಮತ್ತು ಪ್ರಯಾಗ್ರಾಜ್ ನಲ್ಲಿ ಮಬ್ಬು ಕವಿಯಲಿದ್ದು, ದಟ್ಟ ಮಂಜು ಆವರಿಸಲಿದೆ. ಹಗಲು ಹೊತ್ತು ಹೆಚ್ಚಿನ ಬಿಸಿಲು ಆವರಿಸಲಿದೆ. ತಾಪಮಾನ ಏರಿಕೆ ಹಾಗೂ ಚಳಿ ಈ ಭಾಗದ ಜನರ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆ.












Click it and Unblock the Notifications