ಕೊರೊನಾ 2ನೇ ಅಲೆ; ಕೇಂದ್ರದ ಮುಂದೆ ಎರಡು ಆಯ್ಕೆಯಿಟ್ಟ ಐಎಂಎ
ನವದೆಹಲಿ, ಏಪ್ರಿಲ್ 6: ದೇಶದಲ್ಲಿ ಕೊರೊನಾ ಎರಡನೇ ಅಲೆ ಆತಂಕ ತಂದಿದ್ದು, ಕಳೆದ ಕೆಲವು ವಾರಗಳಿಂದೀಚೆ ಕೊರೊನಾ ಪ್ರಕರಣಗಳು ಏಕಾಏಕಿ ಏರಿಕೆಯಾಗಿವೆ. ದಿನನಿತ್ಯದ ಪ್ರಕರಣಗಳು ಲಕ್ಷದ ಅಂಚಿನಲ್ಲಿ ದಾಖಲಾಗುತ್ತಿವೆ. ಸೋಮವಾರ ಈ ಸಂಖ್ಯೆ ಲಕ್ಷವನ್ನೂ ಮೀರಿತ್ತು. ಈ ಆತಂಕದ ನಡುವೆ ಹಲವು ರಾಜ್ಯಗಳಲ್ಲಿ ಸದ್ಯಕ್ಕೆ ಹೊಸ ನಿರ್ಬಂಧಗಳನ್ನು ಹೇರಲಾಗುತ್ತಿದೆ.
ಆದರೆ ಈ ಬಾರಿ ಯಾವುದೇ ಕಾರಣಕ್ಕೂ ಲಾಕ್ಡೌನ್ ಹೇರುವುದಿಲ್ಲ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಪಷ್ಟಪಡಿಸಿವೆ. ಈ ನಡುವೆ ಭಾರತೀಯ ಔಷಧ ಸಂಸ್ಥೆ (IMA) ಕೇಂದ್ರ ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಿ ಪತ್ರ ಬರೆದಿದೆ. ಕೊರೊನಾ ಲಸಿಕೆ ಹಾಗೂ ಲಾಕ್ಡೌನ್ ಕುರಿತು ಅದರಲ್ಲಿ ಪ್ರಸ್ತಾಪಿಸಲಾಗಿದೆ. ಮುಂದೆ ಓದಿ...
"ವಾಕ್ಇನ್ನಂತೆ ಎಲ್ಲಾ ಕಡೆಯೂ ಲಸಿಕೆ ಸಿಗಲಿ"
ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿರುವ ಐಎಂಎ, ಮೊದಲು ಕೊರೊನಾ ಲಸಿಕೆ ಕುರಿತು ಪ್ರಸ್ತಾಪಿಸಿದೆ. ಲಸಿಕೆ ಪಡೆಯಲು ಯಾವುದೇ ವ್ಯಕ್ತಿಗೆ ಯಾವ ರೀತಿಯಿಂದಲೂ ಅಡ್ಡಿಯಿರಬಾರದು. "ವಾಕ್ ಇನ್"ನಂತೆ ಎಲ್ಲಾ ಕಡೆಯೂ ಲಸಿಕೆಯ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದು ಮನವಿ ಮಾಡಿದೆ. ಕೊರೊನಾ ನಿಯಂತ್ರಣ ಮಾಡಲು ಸರ್ಕಾರದ ಇಷ್ಟೆಲ್ಲಾ ಪರಿಶ್ರಮದ ನಡುವೆಯೂ ಎರಡನೇ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಕಂಡುಬರುತ್ತಿರುವುದು ದುಃಖದ ಸಂಗತಿ ಎಂದು ತಿಳಿಸಿದೆ.
ದೆಹಲಿಯಲ್ಲಿ ಏಪ್ರಿಲ್ 30ರವರೆಗೂ ರಾತ್ರಿ ನಿಷೇಧಾಜ್ಞೆ ಜಾರಿ
ಅಲ್ಪಾವಧಿ ನಿರಂತರ ಲಾಕ್ಡೌನ್ ಹೇರಲು ಸೂಚನೆ
ಸಾರ್ವಜನಿಕವಾಗಿ ಕೊರೊನಾ ಲಸಿಕೆಗಳನ್ನು ನೀಡುವಾಗ ಸಾರ್ವಜನಿಕ ಲಸಿಕೆ ವಿತರಣಾ ವ್ಯವಸ್ಥೆಯಡಿ ಲಸಿಕಾ ಪ್ರಮಾಣಪತ್ರಗಳನ್ನು ಕಡ್ಡಾಯಗೊಳಿಸಬೇಕು ಎಂದು ತಿಳಿಸಿದೆ. ಜೊತೆಗೆ ಕೊರೊನಾ ನಿರಂತರ ಏರಿಕೆಯನ್ನು ತಡೆಯಲು ಅಲ್ಪಾವಧಿಯ ನಿರಂತರ ಲಾಕ್ಡೌನ್ ಹೇರಬೇಕು. ಸಿನಿಮಾ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು, ಕ್ರೀಡೆಗಳಂಥ ಕಾರ್ಯಕ್ರಮಗಳ ಮೇಲೆ ನಿಯಂತ್ರಣ ಹೇರಲೇಬೇಕು ಎಂದು ತಿಳಿಸಿದೆ.
ಲಕ್ಷದ ಅಂಚಿನಲ್ಲಿ ಕೊರೊನಾ ಪ್ರಕರಣಗಳು
ಕಳೆದ ಕೆಲವು ವಾರಗಳಿಂದ ಭಾರತ ಕೊರೊನಾ ಎರಡನೇ ಅಲೆಗೆ ಸಾಕ್ಷಿಯಾಗಿದ್ದು, ಏಪ್ರಿಲ್ 4ರಂದು ಲಕ್ಷಕ್ಕೂ ಮೀರಿ ದಿನನಿತ್ಯದ ಕೊರೊನಾ ಪ್ರಕರಣಗಳು ದಾಖಲಾಗಿದ್ದವು. ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 96,982 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 446 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 1,26,86,049ಗೆ ತಲುಪಿದೆ. ಸದ್ಯಕ್ಕೆ ದೇಶದಲ್ಲಿ 7,88,223 ಸಕ್ರಿಯ ಪ್ರಕರಣಗಳಿವೆ.
ಭಾರತದಲ್ಲಿ 96,982 ಹೊಸ ಕೊರೊನಾ ಪ್ರಕರಣಗಳು ಪತ್ತೆ
Recommended Video
"ಸೋಂಕಿನ ಗಂಭೀರತೆ ತಗ್ಗಲು ಇರುವ ದಾರಿಯಿದು"
ಖಾಸಗಿ ಕ್ಲಿನಿಕ್ಗಳೂ ಲಸಿಕಾ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದು, ಸದ್ಯಕ್ಕೆ ಕೊರೊನಾ ನಿಯಂತ್ರಣಕ್ಕೆ ಅತಿ ತುರ್ತು ಹಾಗೂ ಅಗತ್ಯದ ಸಂದರ್ಭದಲ್ಲಿ ನಮ್ಮ ಮುಂದಿರುವುದು ಲಸಿಕೆಯ ಪರಿಹಾರವೊಂದೇ. ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸೋಂಕಿನ ಗಂಭೀರತೆಯನ್ನು ತಗ್ಗಿಸಲು ಸದ್ಯಕ್ಕೆ ಗೋಚರಿಸುತ್ತಿರುವ ದಾರಿಯೂ ಇದಾಗಿದೆ. ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ನಮ್ಮ ಬಹುಮುಖ್ಯ ಆದ್ಯತೆಯಾಗಬೇಕಿದೆ. ಕೊರೊನಾ ರೂಪಾಂತರಗಳು ಕೂಡ ಏರಿಕೆಯಾಗುತ್ತಿರುವ ಈ ದಿನಗಳಲ್ಲಿ ಜನರು ಸೋಂಕಿನ ಕುರಿತು ಅರಿತುಕೊಳ್ಳಲೇಬೇಕಿದೆ ಎಂದು ಐಎಂಎ ತಿಳಿಸಿದೆ.