ಬಿಜೆಪಿಗೆ ಬಹುಮತ ಬರದಿದ್ದರೆ ಪ್ರಣಬ್ ಪಿಎಂ? ಆರೆಸ್ಸೆಸ್ ತಂತ್ರ
ಮುಂಬೈ, ಜೂನ್ 10: ಆರ್.ಎಸ್.ಎಸ್ ಕೇಂದ್ರ ಕಚೇರಿ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ರಾಷ್ಟ್ರಪತಿ ಸ್ಥಾನದಿಂದ ಕೆಳಗಿಳಿದು ತೆರೆಮರೆಗೆ ಸರಿದಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ. ಈ ಬಾರಿ ಅವರ ಸುತ್ತ ಪ್ರಧಾನಿ ಹುದ್ದೆಯ ಚರ್ಚೆಗಳು ಗರಿಗೆದರುತ್ತಿವೆ.
ತೃತೀಯ ರಂಗವನ್ನು ಒಗ್ಗೂಡಿಸಿ ಪ್ರಣಬ್ ಮುಖರ್ಜಿ ತಮ್ಮ ಕನಸಿನ ಪ್ರಧಾನಿ ಹುದ್ದೆಯನ್ನು ಪಡೆಯಲಿದ್ದಾರೆ ಎಂಬ ಗುಸುಗುಸು ಮಾತುಗಳು ಕೇಳಿ ಬರುತ್ತಿರುವ ಹೊತ್ತಲ್ಲೇ ಅವರು ಆರ್.ಎಸ್.ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದಿದ್ದಾರೆ. ಇದೀಗ ಅವರ ಬಗ್ಗೆ ಇನ್ನೊಂದು ಮಾತು ಕೇಳಿ ಬರುತ್ತಿದೆ.
ಒಂದೊಮ್ಮೆ 2019ರಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲು ವಿಫಲವಾಗುವ ಸಂದರ್ಭ ಸೃಷ್ಟಿಯಾದಲ್ಲಿ ಪ್ರಣಬ್ ಮುಖರ್ಜಿಯವರನ್ನು ಪ್ರಧಾನಿ ಹುದ್ದೆಯಲ್ಲಿ ಕೂರಿಸಲು ಆರ್.ಎಸ್.ಎಸ್ ಸಿದ್ಧವಾಗುತ್ತಿದೆ ಎಂದು ನಮಗೆ ಅನಿಸುತ್ತಿದೆ ಎಂದು ಒಂದು ಕಾಲದ ಬಿಜೆಪಿ ಮಿತ್ರ ಪಕ್ಷ ಶಿವಸೇನೆಯೇ ಹೇಳಿಕೆ ನೀಡಿದೆ.

ಶಿವಸೇನೆ ನಾಯಕ ಸಂಜಯ್ ರಾವತ್ ಈ ಸಂಬಂಧ ಹೇಳಿಕೆ ನೀಡಿದ್ದು, ಈ ಬಾರಿ ಬಿಜೆಪಿ ಕನಿಷ್ಠ 110 ಸ್ಥಾನಗಳನ್ನು ಕಡಿಮೆ ಗೆಲ್ಲಲಿದೆ. ಈ ಸಂದರ್ಭದಲ್ಲಿ ಆರ್.ಎಸ್.ಎಸ್ ಪ್ರಣಬ್ ಮುಖರ್ಜಿಯವರನ್ನು ಪ್ರಧಾನಿಯನ್ನಾಗಿಸಲು ಹೊರಟಿದೆ ಎಂದು ಹೇಳಿದ್ದಾರೆ.
ಆರ್.ಎಸ್.ಎಸ್ ಸಿದ್ಧಾಂತವನ್ನು ವಿರೋಧಿಸುತ್ತಲೇ ರಾಜಕೀಯ ಮಾಡಿದ ಪ್ರಣಬ್ ಮುಖರ್ಜಿ ಇಂಥದ್ದಕ್ಕೆಲ್ಲಾ ಒಪ್ಪುತ್ತಾರಾ? ನಿಜವಾಗಿಯೂ ಇಂಥಹದ್ದೆಲ್ಲಾ ನಡೆಯುತ್ತದಾ ಎಂದು ಹೇಳಲು ಇದು ಸರಿಯಾದ ಸಮಯವಲ್ಲ. ಈಗೇನಿದ್ದರೂ ಆರಂಭಿಕ ಚರ್ಚೆಗಳು ಆರಂಭವಾಗಿವೆ ಅಷ್ಟೆ.












Click it and Unblock the Notifications