ಇಡುಕ್ಕಿ ಜಲಾಶಯ ಗೇಟ್ ಓಪನ್, ರೆಡ್ ಅಲರ್ಟ್ ಘೋಷಣೆ
ತಿರುವನಂತಪುರಂ, ಆಗಸ್ಟ್ 09: 26 ವರ್ಷಗಳ ಬಳಿಕ ಇಡುಕ್ಕಿ ಜಲಾಶಯ ತನ್ನ ಗರಿಷ್ಠ ಮಟ್ಟ ತಲುಪಿದೆ. ಭಾರಿ ಮಳೆಯಿಂದಾಗಿ, ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಅಣೆಕಟ್ಟಿನ ಗೇಟ್ ಗಳನ್ನು ಗುರುವಾರದಂದು ಪ್ರಾಯೋಗಿಕವಾಗಿ ತೆರೆಯಲಾಗಿದೆ.
ಭಾರತದ ಅತಿದೊಡ್ಡ ಜಲಾಶಯಗಳಲ್ಲಿ ಒಂದೆನಿಸಿರುವ ಪೆರಿಯಾರ್ ನದಿಗೆ ಅಡ್ಡಲಾಗಿ ಕಟ್ಟಿರುವ ಇಡುಕ್ಕಿ ಡ್ಯಾಮ್ ನ ಗರಿಷ್ಠ ಮಟ್ಟ 2403 ಅಡಿಯಾಗಿದೆ. ಸದ್ಯ 2398.80 ತಲುಪಿದೆ. ಗುರುವಾರ ಮಧ್ಯಾಹ್ನ 12.30ರ ಸುಮಾರಿಗೆ ಗೇಟ್ ಓಪನ್ ಮಾಡಲಾಗಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
ನದಿಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಜಲಾಶಯದ ಸುತ್ತಮುತ್ತಾ ಭದ್ರತೆ ನೀಡುವಂತೆ ಸಿಎಂ ಪಿನರಾಯಿ ವಿಜಯನ್ ಅವರು ಉನ್ನತ ಮಟ್ಟದ ಸಭೆ ನಂತರ ಆದೇಶ ಹೊರಡಿಸಿದ್ದಾರೆ. ಇಡುಕ್ಕಿ, ಎರ್ನಾಕುಲಂ ಹಾಗೂ ಕೊಟ್ಟಾಯಂ ಜಿಲ್ಲೆಗಳಲ್ಲಿ ಭೀತಿ ಎದುರಾಗಿದೆ.
ಕರಾವಳಿ ರಕ್ಷಣಾ ಪಡೆ, ಸೇನೆ, ನೌಕಾಪಡೆ ಹಾಗೂ ಏರ್ಪೋರ್ಸ್ ಸನ್ನದ್ಧವಾಗಿಡಲು ಸೂಚಿಸಲಾಗಿದೆ. ತಗ್ಗು ಪ್ರದೇಶಗಳಲ್ಲಿ ಹಾಗೂ ಪ್ರವಾಹಕ್ಕೀಡಾದವರ ರಕ್ಷಣೆಗೆ ಕಾರ್ಯಾಚರಣೆಗೆ ಸಿದ್ಧವಾಗಿ ಎಂದು ಕೇರಳ ಸರ್ಕಾರವು ಕರೆ ನೀಡಿದೆ.
ಇದಲ್ಲದೆ ಎರ್ನಾಕುಲಂ ಜಿಲ್ಲೆಯ ಇದಮಲಯರ್ ಜಲಾಶಯ ಕೂಡಾ ಭರ್ತಿಯಾಗಿದ್ದು, ಅಲ್ಲಿನ ಗೇಟ್ ಗಳನ್ನು ಓಪನ್ ಮಾಡಲಾಗಿದೆ. ಒಟ್ಟಾರೆ, ಈ ಮುಂಗಾರು ಋತುವಿನಲ್ಲಿ ಸುಮಾರು 22 ಮಂದಿ ಮಳೆಯ ಅಬ್ಬರಕ್ಕೆ ಬಲಿಯಾಗಿದ್ದಾರೆ.
ಕೇರಳ ರಾಜ್ಯದ ವಿಪತ್ತು ನಿರ್ವಹಣಾ ಮಂಡಳಿಯು ಮೂರು ಅಲರ್ಟ್ ಗಳನ್ನು ನೀಡಿತ್ತು. ಇಡುಕ್ಕಿ ಅಣೆಕಟ್ಟಿನ ನೀರಿನ ಮಟ್ಟ 2390 ಅಡಿಯಾಗಿದ್ದಾಗ, ಕೋಡ್ ಗ್ರೀನ್ ಅಲರ್ಟ್ ನೀಡಲಾಗಿತ್ತು. 2395 ಅಡಿ ಆಗಿದ್ದಾಗ ಕೋಡ್ ಆರೇಂಜ್ ಅಲರ್ಟ್ ನೀಡಲಾಯಿತು. ನಂತರ 2399 ಅಡಿ ಆಗುತ್ತಿದ್ದಂತೆ ಕೋಡ್ ರೆಡ್ ಅಲರ್ಟ್ ನೀಡಲಾಗಿದೆ.