ನಾನೇ ಪರಮಶಿವ, ನನ್ನನ್ನು ಯಾರೂ ಮುಟ್ಟಲಾರರು: ನಿತ್ಯಾನಂದ
ನವದೆಹಲಿ, ಡಿಸೆಂಬರ್ 6: ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ಅಕ್ರಮ ಬಂಧನ ಸೇರಿದಂತೆ ವಿವಿಧ ಪ್ರಕರಣಗಳನ್ನು ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಯ ಹೊಸ ವಿಡಿಯೋ ವೈರಲ್ ಆಗಿದೆ.
'ನನ್ನನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ಯಾವ ನ್ಯಾಯಾಲಯ ಕೂಡ ನನ್ನನ್ನು ದಂಡಿಸಲು ಸಾಧ್ಯವಿಲ್ಲ' ಎಂದು ನಿತ್ಯಾನಂದ ಸ್ವಾಮಿ ಹೇಳಿಕೊಂಡಿದ್ದಾನೆ. ತನ್ನನ್ನು ತಾನು ಪರಮಶಿವ ಎಂದು ಕರೆದುಕೊಂಡಿರುವ ನಿತ್ಯಾನಂದ, ನಿಮಗೆ ಸಾವು ಬರುವುದಿಲ್ಲ ಎಂಬ ವಚನ ನೀಡುವುದಾಗಿ ಅನುಯಾಯಿಗಳಿಗೆ ಹೇಳಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಿತ್ಯಾನಂದ ಭಾರತದಿಂದ ಪರಾರಿಯಾಗಿದ್ದು, ಆತ ಎಲ್ಲಿದ್ದಾನೆ ಎಂಬುದು ಇನ್ನೂ ತಿಳಿದಿಲ್ಲ. ದಕ್ಷಿಣ ಅಮೆರಿಕದ ಈಕ್ವೆಡಾರ್ನಲ್ಲಿ ಆತ ದ್ವೀಪವೊಂದನ್ನು ಖರೀದಿಸಿ ಅಲ್ಲಿ 'ಕೈಲಾಸ' ಎಂಬ ದೇಶ ನಿರ್ಮಿಸುತ್ತಿರುವುದಾಗಿ ವರದಿಯಾಗಿತ್ತು. ಆತನ ವೆಬ್ಸೈಟ್ ಕೂಡ ಅದರ ಬಗ್ಗೆ ಮಾಹಿತಿಗಳನ್ನು ನೀಡಿತ್ತು. ಆದರೆ ಆತ ತನ್ನ ನೆಲದಲ್ಲಿ ಇಲ್ಲ. ಆತನಿಗೆ ಆಶ್ರಯವನ್ನೂ ನೀಡಿಲ್ಲ. ನಿತ್ಯಾನಂದ ಹೈಟಿಗೆ ಪರಾರಿಯಾಗಿದ್ದಾನೆ ಎಂದು ಈಕ್ವೆಡಾರ್ ಸ್ಪಷ್ಟಪಡಿಸಿದೆ.

ನಾನೇ ಪರಮಶಿವ
'ಸತ್ಯ ಮತ್ತು ವಾಸ್ತವವನ್ನು ನಿಮಗೆ ತಿಳಿಸುವ ಮೂಲಕ ನಾನು ನನ್ನ ಶಕ್ತಿಯನ್ನು ಬಹಿರಂಗಪಡಿಸಲಿದ್ದೇನೆ. ಈಗ ನನ್ನನ್ನು ಯಾರೂ ಮುಟ್ಟಲಾರರು. ನಾನು ನಿಮಗೆ ಸತ್ಯದರ್ಶನ ಮಾಡಿಸುತ್ತೇನೆ- ನಾನು ಪರಮಶಿವ. ಅರ್ಥವಾಯಿತೇ? ಸತ್ಯ ಹೇಳಿದ ಕಾರಣಕ್ಕೆ ಯಾವುದೇ ಮೂರ್ಖ ನ್ಯಾಯಾಲಯ ನನ್ನನ್ನು ಕಾನೂನು ಕ್ರಮಕ್ಕೆ ಒಳಪಡಿಸಲು ಸಾಧ್ಯವಿಲ್ಲ. ನಾನು ಪರಮಶಿವ' ಎಂದು ಕಂದು ಬಣ್ಣದ ಟರ್ಬನ್ ಮತ್ತು ನಿಲುವಂಗಿ ಧರಿಸಿದ್ದ ನಿತ್ಯಾನಂದ ತನ್ನ ಶಿಷ್ಯರಿಗೆ ಹೇಳಿದ್ದಾನೆ.

ನಿಮಗೆಲ್ಲ ಸಾವೇ ಇಲ್ಲ
ಈ ವಿಡಿಯೋ ನವೆಂಬರ್ 22 ರಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಇದು ಯಾವಾಗ ಎಲ್ಲಿ ಸೃಷ್ಟಿಮಾಡಿದ ವಿಡಿಯೋ ಎಂಬುದು ತಿಳಿದಿಲ್ಲ. ಯಾವುದೋ ಅಜ್ಞಾತ ಸ್ಥಳದಲ್ಲಿ ಚಿತ್ರೀಕರಿಸಲಾಗಿದೆ.
'ನೀವು ಇಲ್ಲಿ ಸೇರುವ ಮೂಲಕ ನನ್ನೆಡೆಗೆ ನಿಷ್ಠೆ ಮತ್ತು ವಿಧೇಯತೆಯನ್ನು ಘೋಷಿಸಿದ್ದೀರಿ. ನಿಮಗೆ ಭರವಸೆ ನೀಡುತ್ತೇನೆ, ನಿಮಗೆಲ್ಲರಿಗೂ ಸಾವೇ ಇಲ್ಲ' ಎಂದು ಅನುಯಾಯಿಗಳಿಗೆ ಹೇಳಿದ್ದಾನೆ.
ಹೈಟಿಗೆ ನಿತ್ಯಾನಂದ ಪರಾರಿ
ಸ್ವಯಂಘೋಷಿತ ಗುರು ನಿತ್ಯಾನಂದನಿಗೆ ಈಕ್ವೆಡಾರ್ ಆಶ್ರಯ ಕಲ್ಪಿಸಿದೆ ಎಂಬ ವರದಿ ಸತ್ಯಕ್ಕೆ ದೂರ ಎಂದು ಈಕ್ವೆಡಾರ್ ಹೇಳಿದೆ. ಈಕ್ವೆಡಾರ್ ಅಥವಾ ಅದರ ಸುತ್ತಮುತ್ತ ಎಲ್ಲಿಯೂ ಜಮೀನು ಅಥವಾ ದ್ವೀಪ ಖರೀದಿಗೆ ಈಕ್ವೆಡಾರ್ ಸರ್ಕಾರ ಸಹಾಯ ಮಾಡಿದೆ ಎಂಬುದು ಸುಳ್ಳು. ಆತನಿಗೆ ಆಶ್ರಯ ನೀಡಲು ನಿರಾಕರಿಸಲಾಗಿತ್ತು. ಆತ ಹೈಟಿಗೆ ತೆರಳಿದ್ದಾನೆ ಎಂದು ಈಕ್ವೆಡಾರ್ ರಾಯಭಾರ ಕಚೇರಿ ಹೇಳಿಕೆ ನೀಡಿದೆ.

ನಮ್ಮಿಂದ ಮಾಹಿತಿ ಪಡೆದಿದ್ದಲ್ಲ
ಭಾರತದ ಡಿಜಿಟಲ್ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಮಾಹಿತಿಯನ್ನು ನಿತ್ಯಾನಂದ ಅಥವಾ ಆತನ ಜತೆಗಾರರು ನಿರ್ವಹಿಸುತ್ತಿರಬಹುದಾದ ಕೈಲಾಸ.ಒಆರ್ಜಿ ವೆಬ್ಸೈಟ್ ಮೂಲದಿಂದ ಪಡೆದುಕೊಳ್ಳಲಾಗಿದೆ. ನಿತ್ಯಾನಂದನಿಗೆ ಸಂಬಂಧಿಸಿದ ಯಾವುದೇ ಮಾದರಿಯ ಮಾಹಿತಿಗಳನ್ನು ಪ್ರಕಟಿಸುವಾಗ ಈಕ್ವೆಡಾರ್ನ ಹೆಸರನ್ನು ಬಳಸದಂತೆ ಡಿಜಿಟಲ್ ಮತ್ತು ಮುದ್ರಣ ಮಾಧ್ಯಮಗಳಿಗೆ ಮನವಿ ಮಾಡುವುದಾಗಿ ಅದು ಹೇಳಿದೆ.












Click it and Unblock the Notifications