ಮುಖ್ಯಮಂತ್ರಿ ಆಯ್ಕೆಯೆಂಬ ಕಸರತ್ತು ಯಾವ ಪಕ್ಷದಲ್ಲಿ ಹೇಗೆ?
ನವದೆಹಲಿ, ಡಿಸೆಂಬರ್ 14 : ಐದು ರಾಜ್ಯಗಳ ಚುನಾವಣೆ ಮುಗಿದಿದೆ, ಫಲಿತಾಂಶವೂ ಬಂದಿದೆ, ನಾಲ್ಕು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ಆಯ್ಕೆಯೂ ಮುಗಿದೆ, ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಕಿಲಕಿಲ ನಕ್ಕಿದೆ, ಎರಡು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷ ಚುಕ್ಕಾಣಿ ಹಿಡಿದಿದೆ, ಒಂದು ರಾಜ್ಯದಲ್ಲಿ ಮುಖ್ಯಮಂತ್ರಿ ಆಯ್ಕೆ ಬಾಕಿಯಿದೆ.
ಆ ಎರಡು ರಾಜ್ಯಗಳಾದ ತೆಲಂಗಾಣ ಮತ್ತು ಮಿಜೋರಾಂನಲ್ಲಿ ಮುಖ್ಯಮಂತ್ರಿ ಆಯ್ಕೆಯ ತಾಪತ್ರಯವೇ ಇಲ್ಲ. ಆದರೆ, ಕಾಂಗ್ರೆಸ್ ಜಯಭೇರಿ ಬಾರಿಸಿರುವ ಉಳಿದ ಮೂರು ರಾಜ್ಯಗಳಾದ ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ಇಂಟರ್ನ್ಯಾಷನಲ್ ಇಶ್ಯೂ ಎನ್ನುವ ಹಾಗೆ ಕಗ್ಗಂಟು ಮಾಡಿಕೊಂಡಿದೆ ಕಾಂಗ್ರೆಸ್.
ಮಧ್ಯ ಪ್ರದೇಶದ ನಂತರ ರಾಜಸ್ಥಾನ, ಛತ್ತೀಸ್ ಗಢದತ್ತ ರಾಹುಲ್ ಚಿತ್ತ
ಆದರೆ, ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿಯ ಆಯ್ಕೆ ಹೇಗೆ ನಡೆಯುತ್ತದೆ ಎನ್ನುವುದೇ ಇಲ್ಲಿ ಕುತೂಹಲದ ಸಂಗತಿ. ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮೊದಲೇ ಘೋಷಿಸುವ ಸಂಪ್ರದಾಯ ಇಲ್ಲವೇ ಇಲ್ಲವಾದ್ದರಿಂದ ಆಯ್ಕೆ ಇನ್ನಷ್ಟು ಜಟಿಲವಾಗಿ, ಗುರುವಾರ ಮಧ್ಯರಾತ್ರಿ ಒಬ್ಬರ ಆಯ್ಕೆಯಾದರೆ, ಶುಭ ಶುಕ್ರವಾರದಂದು ಇನ್ನೆರಡು ರಾಜ್ಯಗಳಲ್ಲಿ ಮುಖ್ಯಮಂತ್ರಿ ಆಯ್ಕೆಯ ಪ್ರಕ್ರಿಯೆ ಮುಗಿದಿದೆ. ರಫೇಲ್ ಜೆಟ್ ಡೀಲ್ ತೀರ್ಪಿನ ಹೊಡೆತದ ನಡುವೆಯೂ ರಾಹುಲ್ ಗಾಂಧಿ ಅವರಿಗೆ ಸ್ವಲ್ಪ ನಿರಾಳ.
ಕಗ್ಗಂಟಾದ ಸಿಎಂ ಆಯ್ಕೆ : ಸೋನಿಯಾ, ಪ್ರಿಯಾಂಕಾ ಜೊತೆ ರಾಹುಲ್ ಚರ್ಚೆ
ಮೊದಲು, ಎರಡೂವರೆ ಲಕ್ಷ ಕಾರ್ಯಕರ್ತರ ಅಭಿಪ್ರಾಯ ತಿಳಿದುಕೊಂಡಿದ್ದಾಯಿತು, ನಂತರ ನಾನು ನಾನು ಎಂದು ಕುಳಿತಿದ್ದ ನಾಯಕರನ್ನು ಕರೆಸಿ ಪ್ರತ್ಯೇಕವಾಗಿ ಕರೆಯಿಸಿ ಮಾತಾಡಿದ್ದಾಯಿತು, ತದನಂತರ ಅಮ್ಮ ಸೋನಿಯಾ ಮತ್ತು ಅಕ್ಕ ಪ್ರಿಯಾಂಕಾರ ಅಭಿಪ್ರಾಯ ತಿಳಿದುಕೊಂಡಿದ್ದೂ ಆಯಿತು. ಮುಖ್ಯಮಂತ್ರಿಯ ಆಯ್ಕೆ ಕಷ್ಟದ್ದಾದರೂ ಏಕಿಷ್ಟು ತಡವಾಯಿತು? ಎಂಬ ಪ್ರಶ್ನೆ ಗುಂಗಿ ಹುಳುವಿನಂತೆ ಕೊರೆಯುತ್ತಿದೆ.
ಮುಂಚೆಯೇ ಘೋಷಿಸುವ ಸಂಪ್ರದಾಯ ಇಲ್ಲ
ಮೊದಲೇ ಹೇಳಿದ ಹಾಗೆ, ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮುಂಚೆಯೇ ಘೋಷಿಸುವ ಸತ್ ಸಂಪ್ರದಾಯ ಇಲ್ಲವೇ ಇಲ್ಲವಾದ್ದರಿಂದ, ಅಶೋಕ್ ಗೆಹ್ಲೋಟ್ - ಸಚಿನ್ ಪೈಲಟ್, ಕಮಲ್ ನಾಥ್ - ಜ್ಯೋತಿರಾಧಿತ್ಯ ಸಿಂಧಿಯಾ, ಸಿಂಗ್ - ಭೂಪೇನ್ ಜಂಟಿ ನಾಯಕತ್ವದಲ್ಲಿಯೇ ಮೂರು ರಾಜ್ಯಗಳಲ್ಲಿ ಚುನಾವಣಾ ಕದನವಾಗಿ, ಕಮಲ ಮುದುಡಿ, ಕಾಂಗ್ರೆಸ್ ಕೈ ಮೇಲಾಯಿತು. ಈ ಕಾರಣದಿಂದಾಗಿಯೇ ಮುಖ್ಯಮಂತ್ರಿ ಆಯ್ಕೆಯ ಕಸರತ್ತೂ ಮಾಡುವಂತಾಯಿತು.
ರಾಜಸ್ಥಾನಕ್ಕೆ ಅಶೋಕ್ ಗೆಹ್ಲೋಟ್ ಸಿಎಂ: ಅಧಿಕೃತ ಘೋಷಣೆ ಬಾಕಿ
ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಏಕೆ?
ಈ ರೀತಿಯ ಸನ್ನಿವೇಶವಿದ್ದಾಗ ಶಾಸಕಾಂಗ ಸಭೆಯನ್ನು ಕರೆದು, ಶಾಸಕರು ಬಹುಮತದಿಂದ ಆರಿಸಿದ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಆಯುವುದು ಹಲವು ಪಕ್ಷಗಳಲ್ಲಿರುವ ಪದ್ಧತಿ. ಆದರೆ, ಕಾಂಗ್ರೆಸ್ಸಿನಲ್ಲಿ ಆ ಸಂಪ್ರದಾಯವೇ ಇಲ್ಲ. ಇಲ್ಲಿ ಹೈಕಮಾಂಡ್ ಏನು ಹೇಳುತ್ತದೋ ಅದೇ ಅಂತಿಮ. ಈಬಾರಿ ಪ್ರಜಾಪ್ರಭುತ್ವದಂತೆ, ಶಾಸಕರ ಬದಲಾಗಿ ಕಾರ್ಯಕರ್ತರ ಅಭಿಪ್ರಾಯವನ್ನು ತಿಳಿದುಕೊಳ್ಳಲಾಯಿತಾದರೂ, ಅದರಂತೆ ಮುಖ್ಯಮಂತ್ರಿಯನ್ನು ಆಯ್ದಿರುವುದು ಅನುಮಾನ. ಕಡೆಗೆ ಮುಖ್ಯಮಂತ್ರಿಗಳು ಆಯ್ಕೆಯಾಗಿದ್ದು ರಾಹುಲ್ ಗಾಂಧಿ ಅವರು ಬಯಸಿದಂತೆ.
ಯುವ ನಾಯಕರಿಗೆ ಮಣೆ ಹಾಕಿ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿದ್ದಾರಾ ರಾಹುಲ್?
ಬಿಜೆಪಿಯಲ್ಲಿಯೂ ಇದೇ ಕಥೆ
ಇದು ಕಾಂಗ್ರೆಸ್ಸಿನಲ್ಲಿ ಮಾತ್ರವಲ್ಲ ಭಾರತೀಯ ಜನತಾ ಪಕ್ಷವೂ ಇಂಥದೇ ಸನ್ನಿವೇಶವನ್ನು ಮಹಾರಾಷ್ಟ್ರ, ಹರ್ಯಾಣ ಮತ್ತು ಉತ್ತರ ಪ್ರದೇಶ ಚುನಾವಣೆಯಲ್ಲಿ ಎದುರಿಸಿದೆ. ಬಿಜೆಪಿಯಲ್ಲಿ ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದು ಸಂಪ್ರದಾಯ. ಆದರೆ ಈ ಮೂರು ರಾಜ್ಯಗಳ ಚುನಾವಣೆಯಲ್ಲಿ ಅದನ್ನು ಪಾಲಿಸಿರಲಿಲ್ಲ. ಹೀಗಾಗಿ, ಇಲ್ಲಿ ಜಯಭೇರಿ ಬಾರಿಸಿದರೂ ಯಾರನ್ನು ಪೀಠದ ಮೇಲೆ ಕೂಡಿಸಬೇಕು ಎಂಬ ವಿಷಯ ಬಂದಾಗ ಬಿಜೆಪಿಯಲ್ಲಿಯೂ ಇರುಸುಮುರುಸು ಆಗುವಂಥ ಸನ್ನಿವೇಶಗಳು ನಡೆದಿದ್ದವು. ಅಲ್ಲದೆ, ಕಾಂಗ್ರೆಸ್ ಈಗ ತೆಗೆದುಕೊಂಡಿದ್ದಕ್ಕಿಂತ ಹೆಚ್ಚಿನ ಸಮಯವನ್ನು ಬಿಜೆಪಿ ತೆಗೆದುಕೊಂಡಿತ್ತು ಎಂಬುದು ಗಮನಾರ್ಹ ಸಂಗತಿ.
ರೇಸ್ ನಲ್ಲಿಯೇ ಇಲ್ಲದಿದ್ದ ಯೋಗಿಗೆ ಪಟ್ಟ
ಉತ್ತರ ಪ್ರದೇಶದಲ್ಲಿ ಅಭೂತಪೂರ್ವ ಜಯವನ್ನು ಸಾಧಿಸಿದಾಗ ಈಗಿನ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್ ಅವರು ಸಂಸದರಾಗಿದ್ದರು ಮತ್ತು ಅವರು ಸ್ಪರ್ಧೆಯಲ್ಲಿ ಇರಲೇ ಇಲ್ಲ. ಆಗ ಕೇಳಿಬಂದ ಹೆಸರುಗಳು, ಕೇಶವ್ ಪ್ರಸಾದ್ ಮೌರ್ಯ, ರಾಜನಾಥ್ ಸಿಂಗ್ ಮುಂತಾದವರದ್ದು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸಾರಾಸಗಟಾಗಿ ತಾವು ಸ್ಪರ್ಧೆಯಲ್ಲಿ ಇಲ್ಲವೇ ಇಲ್ಲ ಎಂದು ಕಡ್ಡಿತುಂಡು ಮಾಡಿದಂತೆ ಹೇಳಿದ್ದರು. ಕಡೆಗೆ ಯೋಗಿ ಆದಿತ್ಯನಾಥ್ ಅವರ ಹೆಸರನ್ನು ಅಮಿತ್ ಶಾ ಅವರು ಪ್ರಸ್ತಾಪಿಸಿದಾಗ ಎಲ್ಲರಿಗೂ ಶಾಕ್.
ಮೋದಿಯಷ್ಟು ಸಮರ್ಥರಲ್ಲದ ಯೋಗಿ ಪ್ರಧಾನಿ ಅಭ್ಯರ್ಥಿ ಆಗಬಾರದು: ಪೇಜಾವರ ಶ್ರೀ
ಯಡಿಯೂರಪ್ಪನವರೇ ಅವಿರೋಧ ಆಯ್ಕೆ
ಅಸಲಿಗೆ ಕರ್ನಾಟಕದಲ್ಲಿ ಇಂಥ ಸನ್ನಿವೇಶ ಉದ್ಭವವಾಗುವುದೇ ಇಲ್ಲ. ಏಕೆಂದರೆ, ಭಾರತೀಯ ಜನತಾ ಪಕ್ಷದಲ್ಲಿ ಶ್ರೀಮಾನ್ ಬಿಎಸ್ ಯಡಿಯೂರಪ್ಪನವರನ್ನು ಬಿಟ್ಟರೆ ಬೇರೆ ಮುಖಗಳೇ ಇಲ್ಲ. ಯಡಿಯೂರಪ್ಪನವರು ಇರುವವರೆಗೆ ಅನ್ಯರ ಹೆಸರು ಪ್ರಸ್ತಾಪಿಸುವಂತೆಯೇ ಇಲ್ಲ. ಚುನಾವಣೆಗೂ ಮುನ್ನ ಘೋಷಿಸಲಿ ಬಿಡಲಿ, ಅವರೇ ಭಾರತೀಯ ಜನತಾ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ. ಶಾಸಕಾಂಗ ಪಕ್ಷದ ಸಭೆ ಕರೆಯುವ ಅಗತ್ಯವೂ ಇಲ್ಲ, ಬಿಜೆಪಿ ಹೈಕಮಾಂಡನ್ನು ಸಂಪರ್ಕಿಸುವ ಪ್ರಸಂಗವೂ ಬರುವುದಿಲ್ಲ. ಇದೊಂದು ರೀತಿ ಒಳ್ಳೆಯದೇ ಬಿಡಿ. ಯಾರು ಮುಖ್ಯಮಂತ್ರಿ ಆಗಬೇಕು ಎಂಬ ಗೊಂದಲಗಳಿರುವುದಿಲ್ಲ.
3 ರಾಜ್ಯಗಳ ಮುಂದಿನ ಮುಖ್ಯಮಂತ್ರಿ ಯಾರು? ರಾಹುಲ್ ಹೊಸ ಐಡಿಯಾ!
ಫಡ್ನವೀಸ್ ವರ್ಸಸ್ ಗಡ್ಕರಿ
ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಅವರು ಮುಂಚೂಣಿಯಲ್ಲಿದ್ದರೂ, ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದಿದ್ದರಿಂದ ಶಿವಸೇನೆ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ದೇವೇಂದ್ರ ಫಡ್ನವೀಸ್ ಬದಲಾಗಿ ನಿತಿನ್ ಗಡ್ಕರಿ ಅವರು ಪಿಕ್ಚರಲ್ಲಿ ಬಂದರು. ಆರಂಭದಲ್ಲಿ ರಾಜ್ಯ ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿಕೆ ನೀಡಿದ್ದರಿಂದ ಗೊಂದಲ ಉಂಟಾಗಿ, ರಾಜನಾಥ್ ಮತ್ತು ಜೆಪಿ ನಡ್ಡಾ ಅವರ ಆಗಮನವಾಗಿ ಕಡೆಗೆ ದೇವೇಂದ್ರ ಫಡ್ನವೀಸ್ ಅವರನ್ನೇ ಸರ್ವಸಮ್ಮತ ಮುಖ್ಯಮಂತ್ರಿಯನ್ನಾಗಿ ಆರಿಸಲಾಯಿತು.
ಕುಮಾರಣ್ಣ ಮುಖ್ಯಮಂತ್ರಿ ಆಗಿದ್ದು ಹೇಗೆ?
ಮತ್ತೆ ಕರ್ನಾಟಕ ರಾಜಕೀಯಕ್ಕೆ ಬರುವುದಾದರೆ, ಅತಿ ಕಡಿಮೆ ಸ್ಥಾನ ಗೆದ್ದಿದ್ದ ಜೆಡಿಎಸ್ ಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಹೇಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾದರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇಲ್ಲಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಆರಿಸಿದ್ದು ಜೆಡಿಎಸ್ ಪಕ್ಷವಲ್ಲ, ಬದಲಾಗಿ ವೈರಿ ಸ್ಥಾನ ಅಲಂಕರಿಸಿದ್ದ ಕಾಂಗ್ರೆಸ್ ಪಕ್ಷ. ಇದೆಲ್ಲ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಹುನ್ನಾರದಿಂದ ನಡೆದದ್ದು. ಈಗ ಅದು ಇತಿಹಾಸ. ಇಂಥ ಸಿನಿಮೀಯ ಸನ್ನಿವೇಶಗಳು ಕರ್ನಾಟಕದಲ್ಲಿ ಮಾತ್ರ ನೋಡಲು ಸಾಧ್ಯ.