ಹಿಟ್ ಆಂಡ್ ರನ್: ಬೀದಿ ನಾಯಿಗೆ ಆಹಾರ ನೀಡುತ್ತಿದ್ದ ಯುವತಿಗೆ ಡಿಕ್ಕಿ ಹೊಡೆದ ಕಾರು
ಚಂಡೀಗಢ ಜನವರಿ 16: ದೆಹಲಿ ಅಂಜಲಿ ಸಿಂಗ್ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಚಂಡೀಗಢದಲ್ಲಿ ಬೆಳಕಿಗೆ ಬಂದಿದೆ. ಚಂಡೀಗಢದಲ್ಲಿ ಆಘಾತಕಾರಿ ಹಿಟ್ ಅಂಡ್ ರನ್ ಘಟನೆಯೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎಸ್ಯುವಿ ವಾಹನವೊಂದು ತನ್ನ ಮನೆಯ ಬಳಿ ಬೀದಿ ನಾಯಿಗೆ ಆಹಾರ ನೀಡುತ್ತಿದ್ದ 25 ವರ್ಷದ ಯುವತಿಗೆ ಡಿಕ್ಕಿ ಹೊಡೆದು ಶರ ವೇಗವಾಗಿ ಪರಾರಿಯಾಗಿದೆ.
ಸಂತ್ರಸ್ತೆ ಯುವತಿಯನ್ನು ತೇಜಶ್ವಿತಾ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅವರ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬದವರ ಪ್ರಕಾರ, ಶನಿವಾರ ರಾತ್ರಿ ತೇಜಶ್ವಿತಾ ಮತ್ತು ಆಕೆಯ ತಾಯಿ ಮಂಜಿದರ್ ಕೌರ್ ಫುಟ್ಪಾತ್ನಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದಾಗ ಈ ಘಟನೆ ನಡೆದಿದೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ ಈ ಘಟನೆ ಸಂಪೂರ್ಣವಾಗಿ ಸೆರೆಯಾಗಿದೆ. ದೃಶ್ಯದಲ್ಲಿ ತೇಜಶ್ವಿತಾ ನಾಯಿಗೆ ಆಹಾರ ನೀಡುತ್ತಿರುವುದನ್ನು ಕಾಣಬಹುದು. ಮಹೀಂದ್ರ ಥಾರ್ SUV ಕಾರು ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತದೆ. ದೃಶ್ಯದಲ್ಲಿ ಎಸ್ಯುವಿ ಯು-ಟರ್ನ್ ಮಾಡಿಕೊಂಡು ಮಹಿಳೆಯನ್ನು ಹೊಡೆಯುವುದು ಅದೇ ವೇಗದಲ್ಲಿ ಸಾಗುವುದು ಮತ್ತು ಆ ವೇಳೆ ಯುವತಿ ನೋವಿನಿಂದ ನರಳುವುದನ್ನು ಕಾಣಬಹುದು.

ತೇಜಶ್ವಿತಾ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ತಾಯಿ ಗಾಬರಿಗೊಳ್ಳುತ್ತಾರೆ. ಯಾರೂ ಸಹಾಯಕ್ಕೆ ಬಾರದ ಬೆನ್ನಲ್ಲೆ ತಾಯಿ ಮನೆಗೆ ಮತ್ತು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ಕೂಡಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಾಹನ ಹಾಗೂ ಚಾಲಕನಿಗಾಗಿ ಶೋಧ ನಡೆಸುತ್ತಿದ್ದಾರೆ.
ತೇಜಶ್ವಿತಾ ಅವರು ಆರ್ಕಿಟೆಕ್ಚರ್ನಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ ಮತ್ತು ನಾಗರಿಕ ಸೇವಾ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಬೀದಿನಾಯಿಗಳಿಗೆ ಆಹಾರ ನೀಡಲು ಪ್ರತಿನಿತ್ಯ ತನ್ನ ತಾಯಿಯೊಂದಿಗೆ ಅವರು ಹೋಗುತ್ತಿದ್ದರು ಎಂದು ತಂದೆ ಓಜಸ್ವಿ ಕೌಶಲ್ ಅವರು ನೋವು ತೋಡಿಕೊಂಡಿದ್ದಾರೆ. ಆಕೆಯ ಕುಟುಂಬದವರು ಆಸ್ಪತ್ರೆಯಲ್ಲಿರುವ ತೇಜಶ್ವಿತಾ 'ತಮ್ಮೊಂದಿಗೆ ಮಾತನಾಡಿದ್ದಾರೆ. ಆಕೆ ಸುಧಾರಿಸಿಕೊಳ್ಳುತ್ತಿದ್ದಾಳೆ' ಎಂದು ಹೇಳಿದ್ದಾರೆ.
ಇತ್ತೀಚಿಗೆ ದೇಶದಲ್ಲಿ ಹಿಟ್ ಆಂಡ್ ರನ್ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿರುವ ಆತಂಕಕ್ಕೆ ಎಡೆ ಮಾಡಿದೆ. ಭೀಕರ ಅಪಘಾತಗಳ ಸರಣಿಯು ದುಡುಕಿನ ಚಾಲನೆಯನ್ನು ಸೂಚಿಸುತ್ತವೆ. ಇವುಗಳಲ್ಲಿ ಅತ್ಯಂತ ಪ್ರಮುಖವಾದವು ದೆಹಲಿ ಕಾರ್ ಭಯಾನಕ ಪ್ರಕರಣವಾಗಿದೆ. ಈ ವರ್ಷದ ಆರಂಭದಲ್ಲಿ 20 ವರ್ಷದ ಅಂಜಲಿ ಸಂಗ್ ಎಂಬ ಯುವತಿ ಚಲಾಯಿಸುತ್ತಿದ್ದ ಸ್ಕೂಟಿಗೆ ಕಾರೊಂದು ಡಿಕ್ಕಿ ಹೊಡೆದು ಆಕೆಯ ದೇಹವನ್ನು ಕೆಲ ಕಿ.ಮೀಟರ್ವರೆಗೂ ಎಳೆದೊಯ್ದಿತ್ತು. ಘಟನೆಯಲ್ಲಿ ಯುವತಿ ಗಂಭೀರವಾಘಿ ಗಾಯಗೊಂಡು ಸಾವನ್ನಪ್ಪಿದ್ದಳು.
ಮತ್ತೊಂದು ದುರಂತ ಘಟನೆಯಲ್ಲಿ, ನಿನ್ನೆ ಗುರುಗ್ರಾಮ್-ಫರಿದಾಬಾದ್ ರಸ್ತೆಯಲ್ಲಿ ವೇಗವಾಗಿ ಬಂದ ಪೊಲೀಸ್ ವ್ಯಾನ್ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಆರು ವರ್ಷದ ಬಾಲಕಿ ಸಾವನ್ನಪ್ಪಿದ್ದು, ಕುಟುಂಬದ ಐವರು ಗಾಯಗೊಂಡಿದ್ದಾರೆ. ಆಘಾತಕಾರಿ ಸಂಗತಿಯೆಂದರೆ, ಮಗುವನ್ನು ಆಸ್ಪತ್ರೆಗೆ ಸಾಗಿಸಲು ಪೊಲೀಸರು ಪ್ರಯತ್ನಿಸಲಿಲ್ಲ ಮತ್ತು ಬದಲಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ.












Click it and Unblock the Notifications