ಸಿಜೆ ವಿರುದ್ಧ ಕೋರ್ಟ್ ಹಾಲ್ ನಲ್ಲೇ ಪ್ರಶಾಂತ್ ಭೂಷಣ್ ಆಕ್ರೋಶ
ನವದೆಹಲಿ, ನವೆಂಬರ್ 10: ಶುಕ್ರವಾರ ಮೆಡಿಕಲ್ ಸ್ಕ್ಯಾಮ್ ವಿಚಾರಣೆ ವೇಳೆ ಹಲವು ಬೃಹನ್ನಾಟಕಗಳಿಗೆ ಸರ್ವೋಚ್ಛ ನ್ಯಾಯಾಲಯದ ಕೋರ್ಟ್ ಹಾಲ್ ಸಾಕ್ಷಿಯಾಯಿತು.
ಇಂದಿನ ಅನಿರೀಕ್ಷಿತ ಬೆಳವಣಿಗೆಯಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವೈದ್ಯಕೀಯ ಹಗರಣವದ ವಿಚಾರಣೆಯನ್ನು ಪಂಚ ಸದಸ್ಯರ ನ್ಯಾಯಪೀಠಕ್ಕೆ ವರ್ಗಾಯಿಸಿದ್ದಾರೆ.
ಇದಕ್ಕೂ ಮೊದಲು ದ್ವಿಸದಸ್ಯ ಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿತ್ತು. ವಿದ್ಯಾರ್ಥಿಗಳನ್ನು ವೈದ್ಯಕೀಯ ಕಾಲೇಜುಗಳಲ್ಲಿ ಅಡ್ಮಿಷನ್ ಮಾಡಿಕೊಳ್ಳುವ ಸಂಬಂಧದ ಈ ಹಗರಣದಲ್ಲಿ ನ್ಯಾಯಮೂರ್ತಿ ಮತ್ತು ಮಧ್ಯವರ್ತಿ ನಡುವಿನ ಸಂಬಂಧದ ಬಗ್ಗೆ ಆರೋಪಗಳು ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧವೇ ಲಂಚದ ಆರೋಪ ಕೇಳಿ ಬಂದಿದ್ದರಿಂದ ನ್ಯಾಯಮೂರ್ತಿ ಚೆಲಮೇಶ್ವರ್ ನೇತೃತ್ವದ ನ್ಯಾಯಪೀಠ ಈ ಪ್ರಕರಣದ ವಿಚಾರಣೆಗೆ ಪಂಚ ಸದಸ್ಯರ ನ್ಯಾಯಪೀಠ ರಚಿಸಿತ್ತು.

ಸರಿಯಾಗಿ ಇದೇ ವೇಳೆ ನ್ಯಾ.ಎ.ಕೆ. ಸಿಕ್ರಿ ನೇತೃತ್ವದ ದ್ವಿ ಸದಸ್ಯ ಪೀಠದ ಮುಂದೆಯೂ ಇದಕ್ಕೆ ಸಂಬಂಧಿಸಿದ ಅರ್ಜಿ ಬಂದಿತ್ತು. ಹೀಗಾಗಿ ನ್ಯಾಯಪೀಠ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಿ ಸೂಕ್ತ ನ್ಯಾಯಪೀಠಕ್ಕೆ ಪ್ರಕರಣದ ವಿಚಾರಣೆಯನ್ನು ವರ್ಗಾಯಿಸಲು ಕೋರಿ ಮನವಿ ಮಾಡಿಕೊಂಡಿತ್ತು.
ಹೀಗಾಗಿ, ನ್ಯಾ. ಚೆಲಮೇಶ್ವರ್ ನೇತೃತ್ವದ ಪೀಠ ರಚಿಸಿದ ಪಂಚ ನ್ಯಾಯಾಧೀಶರ ಪೀಠವನ್ನು ಕಾನೂನಿಗೆ ವಿರುದ್ಧ ಎಂದು ಹೇಳಿ ರದ್ದು ಮಾಡಿದ ಸಿಜೆಐ ದೀಪಕ್ ಮಿಶ್ರಾ ಹೊಸ ಪಂಚ ಸದಸ್ಯರ ನ್ಯಾಯಪೀಠ ರಚಿಸದರು. ಮತ್ತು ತಾವು ಒಬ್ಬರೇ ನ್ಯಾಯಪೀಠವನ್ನು ರಚಿಸಬಹುದು. ತಮಗೆ ಆ ಹಕ್ಕು ಇದೆ ಎಂದು ವಾದಿಸಿದರು.
ಆದರೆ ಮುಖ್ಯ ನ್ಯಾಯಮೂರ್ತಿಗಳ ಆದೇಶಕ್ಕೆ ಅರ್ಜಿದಾರರ ಪರ ವಕೀಲ್ ಪ್ರಶಾಂತ್ ಭೂಷಣ್ ಆಕ್ಷೇಪ ವ್ಯಕ್ತಪಡಿಸಿದರು. ವೈದ್ಯಕೀಯ ಹಗರಣದಲ್ಲಿ ಮುಖ್ಯ ನ್ಯಾಯಮೂರ್ತಿಗಳ ಹೆಸರಿರುವಾಗ ಅವರು ಇಂಥಹದ್ದೊಂದು ಆದೇಶ ಹೊರಡಿಸುವಂತಿಲ್ಲ ಎಂದು ಭೂಷಣ್ ವಾದಿಸಿದರು. ಇದಕ್ಕೆ ಮರು ಉತ್ತರ ನೀಡಿದ ನ್ಯಾಯಪೀಠ "ಯಾರಾದರೂ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಬಹುದೇ?" ಎಂದು ಪ್ರಶ್ನಿಸಿತು.
ಈ ಸಂದರ್ಭ ಭೂಷಣ್ ಮತ್ತು ವಕೀಲೆ ಕಾಮಿನಿ ಜೈಸ್ವಾಲ್ ರಿಗೆ ಉಳಿದ ವಕೀಲರಿಂದ ಬೆಂಬಲ ಸಿಗಲಿಲ್ಲ. ಈ ಸಂದರ್ಭ ದುಷ್ಯಂತ್ ದಾವೆ, ಕಾಮಿನಿ ಜೈಸ್ವಾಲ್ ಹಾಗೂ ತಮ್ಮ ವಿರುದ್ಧ ನ್ಯಾಯಾಂಗ ನಿಂದನೆ ದಾವೆ ಹೂಡುವಂತೆ ಒತ್ತಾಯಿಸಿದ ವಕೀಲರ ವಿರುದ್ಧ ಕ್ರುದ್ಧರಾದ ಪ್ರಶಾಂತ್ ಭೂಷಣ್ ಏರು ಸ್ವರದಲ್ಲಿ ರೇಗಾಡಿಕೊಂಡು ಕೋರ್ಟ್ ಹಾಲ್ ನಿಂದ ನಿರ್ಗಮಿಸಿದರು. ಹೀಗಿದ್ದೂ ಜೈಸ್ವಾಲ್ ಅಲ್ಲೇ ಇದ್ದು ಆದೇಶ ಪೀಠದ ಆದೇಶ ಕೇಳಿಕೊಂಡು ಹೋದರು.
ಹೀಗೆ ಪ್ರಶಾಂತ್ ಭೂಷಣ್ ಆಕ್ರೋಶಕ್ಕೆ ಸರ್ವೋಚ್ಛ ನ್ಯಾಯಾಲಯದ ಕೋರ್ಟ್ ಹಾಲ್ ಶುಕ್ರವಾರ ಸಾಕ್ಷಿಯಾಯಿತು.












Click it and Unblock the Notifications