ಹಪ್ಪಳದ ಮೇಲೆ ಬುಲ್ಡೋಜರ್ ಹರಿಸಿದಂತಾಗಿದೆ ಕೇರಳ, 19ರಿಂದ ಭಾರೀ ಮಳೆ
ಮೊದಲೇ ಬೆದರಿದವರ ಮೇಲೆ ಹಾವು ಎಸೆದರು ಅನ್ನೋ ಮಾತಿದೆ. ಹಾಗೆ ಆಗಿದೆ ಕೇರಳದ ಪರಿಸ್ಥಿತಿ. ಅಲ್ಲಿನ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಆಗಸ್ಟ್ 19ರಿಂದ ಭಾರೀ ಮಳೆ ಆಗಲಿದೆಯಂತೆ. ಹಾಗಿದ್ದರೆ ಇಷ್ಟು ಸಮಯ ಆಗಿದ್ದು ಏನು ಅಂತ ಪ್ರಶ್ನೆ ಮಾಡಬೇಡಿ. ತೆಳುವಾದ ಹಪ್ಪಳದ ಮೇಲೆ ಬುಲ್ಡೋಜರ್ ಹರಿದಂತೆ ಕೇರಳದ ಮೇಲೆ ಮಳೆಯ ಪರಿಣಾಮ ಆಗಿದೆ.
ಮಳೆ- ನೆರೆಗೆ ಸಂಬಂಧಿಸಿದ ಅವಘಡಗಳಲ್ಲಿ ಗುರುವಾರ ಒಂದೇ ದಿನ 91 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲಿಗೆ ಈಚೆಗಿನ ಮಳೆ ಅನಾಹುತದಲ್ಲಿ ಉಸಿರು ಚೆಲ್ಲಿದವರ ಸಂಖ್ಯೆ 156ಕ್ಕೆ ಮುಟ್ಟಿದೆ. ಪ್ರಕೃತಿಯ ಮುನಿಸು ಇಷ್ಟು ಭೀಕರವೇ ಎಂದು ನಿಡುಸುಯ್ಯುವಷ್ಟರಲ್ಲಿ 1.5 ಲಕ್ಷಕ್ಕೂ ಹೆಚ್ಚು ಮಂದಿಯನ್ನು 1,200 ಸಂತ್ರಸ್ತರ ಶಿಬಿರಗಳಿಗೆ ಸ್ಥಳಾಂತರ ಮಾಡಲಾಗಿದೆ.
ಈಗ 540 ಮಂದಿ ಇರುವ 12 ಎನ್ ಡಿಆರ್ ಎಫ್ ತಂಡವು ಕೇರಳಕ್ಕೆ ಧಾವಿಸಿದೆ. ಈಗಾಗಲೇ 18 ತಂಡವನ್ನು ನಿಯೋಜಿಸಲಾಗಿತ್ತು. ಅದು ಕೂಡ ಭೂ ಸೇನೆ, ವಾಯು ಸೇನೆ ಹಾಗೂ ನೌಕಾ ಸೇನೆಯ ಸಿಬ್ಬಂದಿಯನ್ನು ಹೊರತುಪಡಿಸಿ ನಿಯೋಜನೆ ಮಾಡಿರುವುದು. ಮುಂಬರುವ ದಿನಗಳಲ್ಲಿ ಇನ್ನೂ 23 ಎನ್ ಡಿಆರ್ ಎಫ್ ತಂಡವನ್ನು ನಿಯೋಜಿಸುವುದಾಗಿ ಡಿಜಿ ಸಂಜಯ್ ಕುಮಾರ್ ಹೇಳಿದ್ದಾರೆ.

ಸಂತ್ರಸ್ತರ ಶಿಬಿರಗಳಿಗೆ ನುಗ್ಗಿದ ನೀರು
ಈಚೆಗಿನ ಮಾಹಿತಿ ಪ್ರಕಾರ ಮಳೆಯ ತೀವ್ರತೆ ಕಡಿಮೆ ಆಗಿದೆ. ಆದರೆ ಭರತ್ ಪುಳ್ ಹಾಗೂ ಚಾಲಕ್ಕುಡಿ ನದಿ ಉಕ್ಕಿ ಹರಿಯುತ್ತಿದೆ. ತ್ರಿಶ್ಶೂರ್ ನಲ್ಲಿ ಪ್ರವಾಹ ಸ್ಥಿತಿ ಉಲ್ಭಣವಾಗಿದೆ. ಚಾಲಕ್ಕುಡಿ, ಮಾಲಾ, ವಡನಪ್ಪಿಲ್ಲಿ, ಇರಿಂಜಲಕುಡ ಹಾಗೂ ತ್ರಿಶ್ಶೂರ್ ನಲ್ಲಿ ಬಹಳ ಪರಿಣಾಮವಾಗಿದೆ. ಚಾಲಕ್ಕುಡಿ ಪಟ್ಟಣ ನೀರಿನಲ್ಲಿ ಮುಳುಗಿಹೋಗಿದೆ. ಮುರಿಂಗೂರು ಸೇತುವೆ ಮುಳುಗಿದೆ. ಚಾಲಕ್ಕುಡಿಯಲ್ಲಂತೂ ಸಂತ್ರಸ್ತರ ಶಿಬಿರದೊಳಗೇ ನೀರು ನುಗ್ಗಿದೆ.

ಹಲವು ಕಡೆ ಪೆಟ್ರೋಲ್- ಡೀಸೆಲ್ ಗೆ ಸಮಸ್ಯೆ
ಚಾಲಕ್ಕುಡಿ ಸಮೀಪ ಮನೆಯೊಂದರ ಮೇಲೆ ಮರ ಉರುಳಿ ವಯಸ್ಸಾದ ಮಹಿಳೆ ಹಾಗೂ ಆಕೆಯ ಮಗ ಸಾವನ್ನಪ್ಪಿದ್ದಾರೆ. ಪಳಿಯೆಕ್ಕರ ಟೋಲ್ ಪ್ಲಾಜಾ ನೀರಿನಿಂದ ತುಂಬಿದೆ.ಇಡೀ ತ್ರಿಶ್ಶೂರ್ ನಗರದಲ್ಲಿ ಪ್ರವಾಹ ಸ್ಥಿತಿ ಇದೆ. ಅಂಗಡಿಗಳನ್ನು ಮುಚ್ಚಲಾಗಿದೆ. ಶೋರ್ನೂರ್- ಒಟ್ಟಪಲಂ ಮಾರ್ಗ ಸಂಪರ್ಕ ಕಡಿದುಕೊಂಡಿರುವುದರಿಂದ ಸಂಚಾರ ಅಸ್ತವ್ಯಸ್ತವಾಗಿದೆ. ಹಲವು ಕಡೆ ಪೆಟ್ರೋಲ್- ಡೀಸೆಲ್ ಗೆ ಸಮಸ್ಯೆಯಾಗಿದೆ.

ಸ್ವಲ್ಪ ಹೊತ್ತು ಇಣುಕಿದ ಸೂರ್ಯ
ಕೊಟ್ಟಾಯಂನಲ್ಲಿ ಶುಕ್ರವಾರ ಬೆಳಗ್ಗೆ ಸ್ವಲ್ಪ ಹೊತ್ತು ಸೂರ್ಯ ಇಣುಕಿದಂತಾಯಿತು. ಆದರೆ ಆ ನಂತರ ಹಲವೆಡೆ ಭಾರೀ ಮಳೆ ಸುರಿದಿದೆ. ನೆರೆ ನೀರಿನಿಂದ ಕೊಟ್ಟಾಯಂನಲ್ಲಿ ಪರಿಸ್ಥಿತಿ ಭೀಕರ ಮಾಡಿದೆ. ವೈಕೋಂನಲ್ಲೂ ಸನ್ನಿವೇಶ ಗಂಭೀರವಾಗಿಯೇ ಇದೆ. ಅಧಿಕಾರಿಗಳು ನಲವತ್ತೆಂಟು ಸಂತ್ರಸ್ತರ ಶಿಬಿರಗಳನ್ನು ತೆರೆದಿದ್ದು, ಅಲ್ಲಿಗೆ ಜನರು ಹರಿದು ಬರುತ್ತಲೇ ಇದ್ದಾರೆ. ತಲಯೊಲಪರಂಬು-ವೈಕೋಂ ಮಾರ್ಗದಲ್ಲಿ ಸಂಚಾರ ಸಾಧ್ಯವೇ ಆಗುತ್ತಿಲ್ಲ. ಇನ್ನು ಪಾಲಾ- ಕೊಟ್ಟಾಯಂ, ಪಾಲಾ- ಪೊಣ್ ಕುನ್ನಮ್, ಪಾಲಾ- ಎರಟ್ಟುಪೆಟ್ಟ ಮಾರ್ಗದಲ್ಲಿ ಸತತ ಮೂರನೇ ದಿನವೂ ಸಂಚಾರ ಸಾಧ್ಯವಾಗಿಲ್ಲ.

2 ಸಾವಿರಕ್ಕೂ ಹೆಚ್ಚು ಮಂದಿ 22 ವಿವಿಧ ಶಿಬಿರಗಳಲ್ಲಿ
ಕೇರಳ ಪೂರ್ವ ಭಾಗದ ಬೆಟ್ಟ ಪ್ರದೇಶಾ ಕಣ್ಣೂರು ಜಿಲ್ಲೆಯಲ್ಲಿ ಶುಕ್ರವಾರ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಕಳೆದ ಕೆಲವು ದಿನಗಳಿಂದ ಈ ಭಾಗಗಳಲ್ಲಿ ಭಾರೀ ಮಳೆ ಆಗುತ್ತಿತ್ತು. ಗುರುವಾರ ಬೆಳಗ್ಗೆಯಿಂದ ಈಚೆಗೆ ಶುಕ್ಪವಾರ ಮಧ್ಯಾಹ್ನದ ತನದ ಯಾವುದೇ ಭೂ ಕುಸಿತದ ವರದಿಗಳಾಗಿಲ್ಲ. ಆದರೆ ಇರಿಟ್ಟಿ ತಾಲೂಕಿನ ಕೀಳೂರಿನಲ್ಲಿ ನಾಲ್ಕು ಕುಟುಂಬಗಳನ್ನು ಹತ್ತಿರದ ಸಂತ್ರಸ್ತರ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಕೇರಳದ ವಿವಿಧ ಬೆಟ್ಟ ಪ್ರದೇಶಗಳಲ್ಲಿನ ಎರಡು ಸಾವಿರಕ್ಕೂ ಹೆಚ್ಚು ಮಂದಿ ಇಪ್ಪತ್ತೆರಡು ವಿವಿಧ ಶಿಬಿರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಕುಡಿಯುವ ನೀರು ಸರಬರಾಜಿಗೆ ಹೊಡೆತ
ಕಾಸರಗೋಡು ಹೊರತುಪಡಿಸಿ ಕೇರಳದ ಎಲ್ಲ ರಾಜ್ಯಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಮತ್ತೆ ನೀರು ಸರಬರಾಜು ಆರಂಭಿಸುವುದು ಅಷ್ಟು ಸಲೀಸಲ್ಲ ಎಂದು ಕೇರಳ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಹೇಳಿದ್ದಾರೆ. ಕುಡಿಯುವ ನೀರಿನ ಪೂರೈಕೆಗೆ ಕೇರಳ ಸರಕಾರವು ನೆರೆ ರಾಜ್ಯಗಳ ಸಹಾಯ ಕೇಳಿದರೆ ಉತ್ತಮ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಂದಹಾಗೆ ನೀರು ಸರಬರಾಜು ಪ್ರಾಧಿಕಾರದ ಸಿಬ್ಬಂದಿ ನಿರಂತರ ಶ್ರಮ ವಹಿಸುತ್ತಿದ್ದರೂ ಪರಿಸ್ಥಿತಿ ಇನ್ನೂ ಹತೋಟಿಗೆ ತೆಗೆದುಕೊಳ್ಳುವುದು ಸಲೀಸಲ್ಲ ಎಂದು ಮೂಲಗಳು ತಿಳಿಸಿವೆ.

ಆರುನೂರು ಮೋಟಾರ್ ದೋಣಿಗಾಗಿ ಮನವಿ
ಕೇರಳ ರಾಜ್ಯ ಸರಕಾರದಿಂದ ಆರುನೂರು ಮೋಟಾರ್ ದೋಣಿಗಾಗಿ ಮನವಿ ಸಲ್ಲಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಭಾರತೀಯ ನೌಕಾ ಸೇನೆಯು ನಾನೂರೈವತ್ತು ದೋಣಿಗಳನ್ನು ಒದಗಿಸುವ ಭರವಸೆ ಸಿಕ್ಕಿದೆ. ಇನ್ನು ಬಾಕಿ ದೋಣಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು, ಸಶಸ್ತ್ರ ಪಡೆಯ ಜತೆಗೆ ಪೂರೈಸುವ ಭರವಸೆ ಸಿಕ್ಕಿದೆ. ಚಾಲಕ್ಕುಡಿ, ಚೆಂಗನ್ನೂರು ಹಾಗೂ ಪಥನಂಥಿಟ್ಟ ಪ್ರದೇಶಗಳಲ್ಲಿ ಹೆಚ್ಚುವರಿ ದೋಣಿಗಳನ್ನು ನಿಯೋಜಿಸಲಾಗಿದೆ. ಚೆಂಗನ್ನೂರು ಹಾಗೂ ಪಥನಂಥಿಟ್ಟದಲ್ಲಿ ತಲಾ ಎರಡು ಹೆಲಿಕಾಪ್ಟರ್ ಗಳನ್ನು ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ.












Click it and Unblock the Notifications