Himachal Pradesh Rain: ಭಾರಿ ಮಳೆಗೆ ತತ್ತರಿಸಿದ ಹಿಮಾಚಲ ಪ್ರದೇಶ: ಮನೆಯಲ್ಲೇ ಇರಲು ಮನವಿ ಮಾಡಿದ ಸಿಎಂ
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಗೆ ಎರಡು ಪ್ರತ್ಯೇಕ ಘಟನೆಗಳಲ್ಲಿ 24 ಗಂಟೆಗಳಲ್ಲಿ 16 ಜನರು ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಖಚಿತಪಡಿಸಿದ್ದಾರೆ. ಭಾನುವಾರ ರಾತ್ರಿ ಸೋಲನ್ ಜಿಲ್ಲೆಯಲ್ಲಿ ಸಂಭವಿಸಿದ ಮೇಘಸ್ಫೋಟದ ಘಟನೆಯ ನಂತರ ಏಳು ಜನರು ಸಾವನ್ನಪ್ಪಿದ್ದರೆ, ಶಿಮ್ಲಾ ನಗರದ ಸಮ್ಮರ್ ಹಿಲ್ ಪ್ರದೇಶದ ಶಿವ ದೇವಾಲಯದಲ್ಲಿ ಭೂಕುಸಿತದಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಕಳೆದ ಎರಡು ದಿನಗಳಲ್ಲಿ ಮಳೆಯಿಂದಾಗಿ 21 ಜನ ಸಾವನ್ನಪ್ಪಿದ್ದಾರೆ.
ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಜನರು ಮನೆಯೊಳಗೆ ಇರುವಂತೆ ಮತ್ತು ಚರಂಡಿ ಅಥವಾ ನದಿಗಳ ಬಳಿ ಹೋಗುವುದನ್ನು ತಪ್ಪಿಸುವಂತೆ ಮನವಿ ಮಾಡಿದ್ದಾರೆ. ಭೂಕುಸಿತ ಪೀಡಿತ ಪ್ರದೇಶಗಳಿಂದ ದೂರ ಹೋಗುವಂತೆ ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. ರಾಜ್ಯಕ್ಕೆ ಭೇಟಿ ನೀಡದಂತೆ ಪ್ರವಾಸಿಗರಿಗೆ ಕೂಡ ಮನವಿ ಮಾಡಿದ್ದಾರೆ.

ಶಿಮ್ಲಾ ನಗರದಲ್ಲಿ ಸಂಭವಿಸಿದ ಎರಡು ಭೂಕುಸಿತಗಳಲ್ಲಿ 15 ರಿಂದ 20 ಮಂದಿ ಸಮಾಧಿಯಾಗಿರುವ ಶಂಕೆ ಇದೆ ಎಂದು ಶಿಮ್ಲಾದ ಡೆಪ್ಯುಟಿ ಕಮಿಷನರ್ ಆದಿತ್ಯ ನೇಗಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಫಾಗ್ಲಿ ಪ್ರದೇಶದಲ್ಲಿದೆ, ಅಲ್ಲಿ ಹಲವಾರು ಮನೆಗಳು ಮಣ್ಣು ಮತ್ತು ಕೆಸರುಗಳ ಅಡಿಯಲ್ಲಿ ಹೂತುಹೋಗಿವೆ.
ಸಂತಾಪ ಸೂಚಿಸಿದ ಸಿಎಂ
ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಟ್ವೀಟ್ನಲ್ಲಿ ಮೃತರಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ನೆರವು ಮತ್ತು ಬೆಂಬಲವನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
"ಸೋಲನ್ ಜಿಲ್ಲೆಯ ಧಾವ್ಲಾ ಉಪ ತೆಹಸಿಲ್ ಗ್ರಾಮದ ಜಾಡೋನ್ನಲ್ಲಿ ಸಂಭವಿಸಿದ ದುರಂತ ಮೇಘಸ್ಫೋಟದ ಘಟನೆಯಲ್ಲಿ 7 ಅಮೂಲ್ಯ ಜೀವಗಳನ್ನು ಕಳೆದುಕೊಂಡ ಬಗ್ಗೆ ಕೇಳಿ ಘಾಸಿಗೊಂಡಿದೆ. ದುಃಖಿತ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಈ ಕಷ್ಟದ ಸಮಯದಲ್ಲಿ ನಿಮ್ಮ ನೋವು ಮತ್ತು ದುಃಖದಲ್ಲಿ ನಾವು ಹಂಚಿಕೊಳ್ಳುತ್ತೇವೆ." ಎಂದು ಮುಖ್ಯಮಂತ್ರಿ ಕಚೇರಿ ಟ್ವೀಟ್ ಮಾಡಿದೆ.
ಪರೀಕ್ಷೆಗಳನ್ನು ರದ್ದು ಮಾಡಿದ ಶಿಕ್ಷಣ ಇಲಾಖೆ
ಭಾರೀ ಮಳೆಯ ಪರಿಣಾಮವಾಗಿ ಸಮ್ಮರ್ ಹಿಲ್ನಲ್ಲಿರುವ "ಶಿವ ಮಂದಿರ" ಕುಸಿದು ಬಿದ್ದಿದೆ. ಸದ್ಯಕ್ಕೆ ಒಂಬತ್ತು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ಸಿಲುಕಿರುವ ವ್ಯಕ್ತಿಗಳನ್ನು ರಕ್ಷಿಸುವ ಸಲುವಾಗಿ ಸ್ಥಳೀಯ ಆಡಳಿತವು ಅವಶೇಷಗಳನ್ನು ತೆರವುಗೊಳಿಸಲು ಕಾರ್ಯನಿರ್ವಹಿಸುತ್ತಿದೆ.
ಭಾರೀ ಮಳೆಯ ನಡುವೆ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ ಸೋಮವಾರ ರಜೆ ಘೋಷಣೆ ಮಾಡಲಾಗಿದೆ. ರಸ್ತೆ ಮಾರ್ಗಗಳನ್ನು ಮುಚ್ಚಿರುವ ಬಗ್ಗೆ ಹಾಗೂ ಭೂಕುಸಿತದಿಂದ ಆಗಿರುವ ಹಾನಿಯ ಬಗ್ಗೆ ಸಿಎಂ ಮಾಹಿತಿ ಪಡೆದುಕೊಂಡಿದ್ದಾರೆ.
₹ 7020.28 ಕೋಟಿ ನಷ್ಟ
ಆಗಸ್ಟ್ 14 ರಂದು ನಿಗದಿಯಾಗಿದ್ದ ಬಿಎಡ್ ಪರೀಕ್ಷೆಗಳು ಸೇರಿದಂತೆ ಸ್ನಾತಕೋತ್ತರ ತರಗತಿಗಳ ಎಲ್ಲಾ ನಡೆಯುತ್ತಿರುವ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ರಾಜ್ಯ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಚಂಬಾ, ಕಂಗ್ರಾ, ಹಮೀರ್ಪುರ, ಮಂಡಿ, ಬಿಲಾಸ್ಪುರ್, ಸೋಲನ್, ಶಿಮ್ಲಾ ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಬಿಯಾಸ್, ರಂಜಿತ್ ಸಾಗರ್ ಮತ್ತು ಪಾಂಗ್ ಅಣೆಕಟ್ಟು ಜಲಾನಯನ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಅತ್ಯಂತ ಭಾರೀ ಮಳೆಯ ಮುನ್ಸೂಚನೆಯನ್ನು ನೀಡಿದೆ.
ಹಿಮಾಚಲ ಪ್ರದೇಶದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದಾಗಿ ದೇಶದಲ್ಲೇ ಅತಿ ಹೆಚ್ಚು ಹಾನಿಗೊಳಗಾದ ರಾಜ್ಯವಾಗಿದ್ದು, ಮಳೆಯಿಂದಾಗಿ ರಾಜ್ಯಕ್ಕೆ ₹ 7020.28 ಕೋಟಿ ನಷ್ಟವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಳೆಯಿಂದ ಆದ ಅನಾಹುತಗಳಲ್ಲಿ 257 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ರಾಜ್ಯದಲ್ಲಿ ಇದುವರೆಗೆ 1,376 ಮನೆಗಳು ಹಾನಿಗೊಳಗಾಗಿದ್ದರೆ, 7,935 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮುಂಗಾರು ಮಳೆಯ ನಡುವೆ 270 ಅಂಗಡಿಗಳಿಗೆ ಹಾನಿಯಾಗಿದ್ದು, 2,727 ಗೋಶಾಲೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications