ಬಾಬಾ ರಹೀಂನ ಎರಡು ಕೊಲೆ ಕೇಸ್ ವಿಚಾರಣೆ ಇಂದಿನಿಂದ
ನವದೆಹಲಿ/ಪಂಚಕುಲ, ಸೆಪ್ಟೆಂಬರ್ 16: ಬಾಬಾ ರಾಮ್ ರಹೀಂನ ಎರಡು ಕೊಲೆ ಕೇಸ್ ಗಳ ವಿಚಾರಣೆಯು ಸೆಪ್ಟೆಂಬರ್ 16ರಿಂದ ಶುರುವಾಗಲಿದೆ.
ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಯೆಂದು ಪರಿಗಣಿಸಿ ರೋಹ್ಟಕ್ ಜೈಲಿನಲ್ಲಿ ಬಂಧಿಯಾಗಿರುವ ರಾಮ್ ರಹೀಂ, 15 ವರ್ಷಗಳ ಹಿಂದೆ ನಡೆದಿದ್ದ ಎರಡು ಕೊಲೆ ಕೇಸ್ ಗಳಲ್ಲಿಯೂ ಆರೋಪ ಹೊತ್ತಿದ್ದರು. ಆ ಪ್ರಕರಣಗಳೂ ಈಗ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಲಿದ್ದು, ಸೆ. 16ರಿಂದ ಅವುಗಳ ವಿಚಾರಣೆ ಆರಂಭವಾಗಲಿದೆ. ರೋಹ್ಟಕ್ ಜೈಲಿನಿಂದಲೇ ರಾಮ್ ದೇವ್ ಬಾಬಾ, ವಿಡಿಯೋ ಕಾನ್ಫರೆನ್ಸ್ ಮೂಲಕ ಈ ವಿಚಾರಣೆಯಲ್ಲಿ ಭಾಗಿಯಾಗಲಿದ್ದಾನೆ.

2002ರಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಪತ್ರಕರ್ತ ಛತ್ರಪತಿ ಹಾಗೂ ಬಾಬಾ ರಹೀಂ ಭಕ್ತನೇ ಆಗಿದ್ದ ರಂಜಿತ್ ಸಿಂಗ್ ಎಂಬುವರ ಕೊಲೆಯಾಗಿತ್ತು.
ರಾಮ್ ರಹೀಂನ ಆಶ್ರಮದಲ್ಲಿ ನಡೆಯುತ್ತಿದ್ದ ಅವ್ಯವಹಾರಗಳು ಹಾಗೂ ಸಾಧ್ವಿಗಳನ್ನು ತನ್ನ ಕಾಮತೃಷೆಗಾಗಿ ರಾಮ್ ರಹೀಂ ಬಳಸಿಕೊಳ್ಳುತ್ತಿದ್ದನ್ನು ಆಶ್ರಮದ ಸನ್ಯಾಸಿನಿಯೊಬ್ಬರು ಅಂದಿನ ಪ್ರಧಾನಿ ವಾಜಪೇಯಿ ಅವರಿಗೆ ಪತ್ರವೊಂದನ್ನು ಬರೆದಿದ್ದರು. ಆ ಪತ್ರವು, ಪತ್ರಕರ್ತ ಛತ್ರಪತಿಗೆ ಸಿಕ್ಕು ಅದನ್ನು ಯಥಾವತ್ತಾಗಿ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಇದಾಗಿ ಕೆಲವೇ ದಿನಗಳಲ್ಲಿ (2002ರ ಅಕ್ಟೋಬರ್ 24) ಅವರ ಕೊಲೆಯಾಗಿತ್ತು.
ಆ ಪತ್ರವನ್ನು ಸಾಧ್ವಿಯ ಕೋರಿಕೆಯ ಮೇಲೆ ಬರೆದಿದ್ದನೆಂಬ ಅನುಮಾನದಲ್ಲಿ ರಂಜಿತ್ ಸಿಂಗ್ ಎಂಬಾತನನ್ನು ಹತ್ಯೆ ಮಾಡಲಾಗಿತ್ತು. ಈ ಎರಡೂ ಪ್ರಕರಣಗಳ ವಿಚಾರಣೆಯನ್ನು ಸಿಬಿಐ ಕೋರ್ಟ್ ಸೆ. 16ರಂದು ಆರಂಭಿಸಲಿದೆ.












Click it and Unblock the Notifications