ವಿಗ್ರಹ ಧ್ವಂಸದ ವಿವಾದಾತ್ಮಕ ಪೋಸ್ಟಿಗೆ ಕ್ಷಮೆ ಕೇಳಿದ ಎಚ್ ರಾಜಾ
ನವದೆಹಲಿ, ಮಾರ್ಚ್ 07: ಪೆರಿಯಾರ್ ಕುರಿತ ತಮ್ಮ ಫೇಸ್ ಬುಕ್ ಪೋಸ್ಟ್ ವಿವಾದ ಸೃಷ್ಟಿಸುತ್ತಿದ್ದಂತೆಯೇ ತಮ್ಮ ಪೋಸ್ಟ್ ಅನ್ನು ಡಿಲೀಟ್ ಮಾಡಿರುವ ಬಿಜೆಪಿ ಮುಖಂಡ ಎಚ್ ರಾಜಾ, ಈ ಕುರಿತು ಕ್ಷಮೆ ಕೇಳಿದ್ದಾರೆ.
ತ್ರಿಪುರದಲ್ಲಿ ವಿಗ್ರಹ ಧ್ವಂಸದ ಪ್ರಕರಣ ನಡೆದ ಕೆಲವೇ ಕ್ಷಣಗಳಲ್ಲಿ ವಿವಾದಾತ್ಮಕ ಸ್ಟೇಟಸ್ ವೊಂದನ್ನು ಎಚ್.ರಾಜಾ ತಮ್ಮ ಫೆಸ್ ಬುಕ್ ಖಾತೆಯಲ್ಲಿ ಹಾಕಿದ್ದರು. 'ಲೆನಿನ್ ಯಾರು? ಅವನಿಗೂ ಭಾರತಕ್ಕೂ ಏನು ಸಂಬಂಧ? ಭಾರತಕ್ಕೂ ಕಮ್ಯುನಿಸ್ಟ್ ಗೂ ಏನು ಸಂಬಂಧ? ಇಂದು ತ್ರಿಪುರದಲ್ಲಿ ಲೆಲಿನ್ ವಿಗ್ರಹ ನಾಶ ಮಾಡಲಾಗಿದೆ. ನಾಳೆ ತಮಿಳು ನಾಡಿನ ಇವಿ ಆರ್ ರಾಮಸಾಮಿ' ಎಂದು ಆ ಸ್ಟೇಟಸ್ ನಲ್ಲಿ ಬರೆಯಲಾಗಿತ್ತು. ಈ ಸ್ಟೇಟಸ್ ಹಾಕಿದ ಕೆಲವೇ ಗಂಟೆಗಳಲ್ಲಿ ಪರಿಯಾರ್ ವಿಗ್ರಹ ಧ್ವಂಸವಾಗಿತ್ತು!
ಸೈದ್ಧಾಂತಿಕ ಭಿನ್ನಾಭಿಪ್ರಾಯ ಓಕೆ! ವಿಗ್ರಹ ಧ್ವಂಸವಾಗಬೇಕೆ..?!
ಈ ಕುರಿತು ಪ್ರತಿಕ್ರಿಯೆ ನೀಡಿದ ಎಚ್ ರಾಜಾ, ಈ ಪೋಸ್ಟಿಗೂ ನನಗೂ ಸಂಬಂಧವಿಲ್ಲ. ನನ್ನ ಫೇಸ್ ಬುಕ್ ಪೇಜ್ ಜವಾಬ್ದಾರಿ ಹೊತ್ತವರು, ನನ್ನ ಅನುಮತಿಯಿಲ್ಲದೆ ಈ ಪೋಸ್ಟ್ ಹಾಕಿದ್ದಾರೆ. ಈ ಬಗ್ಗೆ ನನಗೆ ತಿಳಿಯುತ್ತಿದ್ದಂತೆಯೇ ನಾನು ಅದನ್ನು ಡಿಲೀಟ್ ಮಾಡಿದ್ದೇನೆ. ನನಗೆ ಯಾರನ್ನೂ ನೋಯಿಸುವ ಉದ್ದೇಶವಿಲ್ಲ. ಅವರವರ ಸಿದ್ಧಾಂತಕ್ಕೆ ನಾವು ಬೆಲೆ ಕೊಡುತ್ತೇವೆ ಎಂದು ಅವರು ಹೇಳಿದರು. ನನ್ನ ನಡೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಅವರು ಹೇಳಿದರು.
ಹಿಂದುತ್ವದ ಬಗೆಗಿನ ನಮ್ಮ ಅಭಿಪ್ರಾಯಗಳು ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತಿರಬೇಕು. ನಮ್ಮ ರಾಷ್ಟ್ರೀಯತೆಯನ್ನು ಕಾಪಾಡಲು ನಮ್ಮ ವೈಚಾರಿಕತೆ ಸಿದ್ಧವಿರಬೇಕೇ ಹೊರತು, ಧ್ವಂಸ ಮಾಡುವುದಕ್ಕಲ್ಲ ಎಂದು ಮನವಿ ಮಾಡಿದ್ದಾರೆ.
ತಮಿಳುನಾಡು ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ