Gurugram hit and run: ಡಿಕ್ಕಿ ಹೊಡೆದು ಬೈಕ್ನೊಂದಿಗೆ 4 ಕಿ.ಮೀ ಕ್ರಮಿಸಿದ ಕಾರು
ದೇಶದಲ್ಲಿ ಇತ್ತೀಚೆಗೆ ಹೆಚ್ಚಾಗಿ ಹಿಟ್ ಅಂಡ್ ರನ್ ಪ್ರಕರಣಗಳು ದಾಖಲಾಗುತ್ತಿವೆ. ಹೊಸ ವರ್ಷದ ದಿನದಂದು ದೆಹಲಿ, ನಂತರ ಬೆಂಗಳೂರು, ಮಂಗಳೂರು, ಸದ್ಯ ಹರಿಯಾಣದಲ್ಲೂ ಇದೇ ಘಟನೆ ನಡೆದಿದೆ.
ಗುರುಗ್ರಾಮ್ ಫೆಬ್ರವರಿ 3: ದೇಶದಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಮತ್ತು ನಿರ್ಲಕ್ಷ್ಯದಿಂದಾಗಿ ರಸ್ತೆಗಳಲ್ಲಿ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿರುವುದು ವರದಿಯಾಗುತ್ತಿದೆ. ಇಂತಹ ಘಟನೆಗಳಿಂದಾಗಿ ಸಹ ಸವಾರರಲ್ಲಿ ಆತಂಕ ಮನೆ ಮಾಡಿದೆ. ಇಂತಹುದ್ದೇ ಘಟನೆ ಹರಿಯಾಣದಿಂದ ಬೆಳಕಿಗೆ ಬಂದಿದೆ. ವೇಗವಾಗಿ ಬಂದ ಕಾರೊಂದು ಬೈಕ್ಗೆ ಢಿಕ್ಕಿ ಹೊಡೆದು ಬೈಕ್ ಅನ್ನು ಸುಮಾರು 4 ಕಿ.ಮೀ ದೂರ ಎಳೆದೊಯ್ದಿದೆ. ಈ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಬೈಕ್ನನಲ್ಲಿದ್ದ ಇಬ್ಬರು ವಾಹನ ಸವಾರರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ದೆಹಲಿ ಅಂಜಲಿ ಸಂಗ್ ಪ್ರಕರಣ ಇನ್ನೂ ಮಾಸಿಲ್ಲ. ಅದಾಗಲೇ ಕರ್ನಾಟಕದ ಮಂಗಳೂರು ಸೇರಿದಂತೆ ಹರಿಯಾಣದಲ್ಲೂ ಹಿಟ್ ಆಂಡ್ ರನ್ ಪ್ರಕರಣ ದಾಖಲಾಗಿದೆ. ಗುರುಗ್ರಾಮದ ಸೆಕ್ಟರ್ 62 ಪ್ರದೇಶದಲ್ಲಿ ಇಬ್ಬರು ಬೈಕ್ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ವೇಗವಾಗಿ ಬಂದ ಹೋಂಡಾ ಅಮೇಜ್ ಕಾರು ಬೈಕ್ಗೆ ಗುದ್ದಿದೆ. ಘಟನೆ ವೇಳೆ ಚಾಲಕ ಪಾನಮತ್ತನಾಗಿದ್ದ ಎನ್ನಲಾಗಿದೆ. ಈತ ಹಿಂದಿನಿಂದ ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಇಬ್ಬರು ಬೈಕ್ ಸವಾರರು ರಸ್ತೆ ಬದಿ ಬಿದ್ದಿದ್ದಾರೆ. ಬೈಕ್ಗೆ ಢಿಕ್ಕಿ ಹೊಡೆದ ಬಳಿಕ ಕಾರು ನಿಲ್ಲಿಸದೆ ವೇಗವಾಗಿ ಹೋಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಕಾರಿನಡಿ ಸಿಲುಕಿಕೊಂಡಿದೆ. ಆದರೂ ಕಾರು ಚಾಲಕ 4 ಕಿ.ಮೀ ವೇಗವಾಗಿ ಕಾರು ಚಲಾಯಿಸಿದ್ದಾನೆ.
ಘಟನೆಯ ಬಗ್ಗೆ ಇಬ್ಬರೂ ಬೈಕ್ ಸವಾರರು ಪೊಲೀಸರಿ ಮಾಹಿತಿ ನೀಡಿದ್ದಾರೆ. ಕಾರು ಕೆಳಗೆ ಬೈಕ್ ಸಿಲುಕಿಕೊಂಡರೂ ಕಾರು ಚಾಲಕ ನಿಲ್ಲಿಸಲಿಲ್ಲ ಎಂದು ಆರೋಪಿಸಿದ್ದಾರೆ. ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ ಅವರ ದೂರಿನ ಮೇರೆಗೆ ಪೊಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

ಮಂಗಳೂರು ಹಿಟ್ ಅಂಡ್ ರನ್ ಕೇಸ್
ಮಂಗಳೂರು ಸಮೀಪದ ಪಡುಪಣಂಬೂರಿನಲ್ಲಿ ವೇಗವಾಗಿ ಬಂದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಾಯಗೊಂಡಿದ್ದಾರೆ. ಬುಧವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ.
ಮಂಗಳೂರಿನಿಂದ ಸುಮಾರು 30 ಕಿಮೀ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ದುರ್ಘಟನೆ ನಡೆದಿದೆ. ಮೃತರನ್ನು ಬಬ್ಲು ಮತ್ತು ಅಚಲ್ ಸಿಂಗ್ ಎಂದು ಗುರುತಿಸಲಾಗಿದೆ. ಅನೀಶ್ ಎಂಬ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ವರದಿಗಳ ಪ್ರಕಾರ, ಮೂವರು ಜನರು ಲಾರಿಯಲ್ಲಿ ಮಧ್ಯಪ್ರದೇಶದ ಇಂದೋರ್ನಿಂದ ಕೇರಳಕ್ಕೆ ತೆರಳುತ್ತಿದ್ದರು. ಪಂಕ್ಚರ್ ಆದ ಲಾರಿಯ ಟೈರ್ ಅನ್ನು ಬದಲಾಯಿಸಲು ಮುಂದಾದಾಗ ವೇಗವಾಗಿ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications