ಅಶೋಕ್ ಗೆಹ್ಲೋಟ್ ತಂಗಿದ್ದ ಹೊಟೇಲ್ ನಲ್ಲಿ ಗುಜರಾತ್ ಪೊಲೀಸರ ತಲಾಶ್
ಅಹಮದಾಬಾದ್, ಅಕ್ಟೊಬರ್ 24: ತಾವು ಹಾರ್ದಿಕ್ ಪಟೇಲ್ ಮತ್ತು ಜಿಗ್ನೇಶ್ ಮೇವಾನಿಯವರನ್ನು ಭೇಟಿಯಾಗಿದ್ದ ಹೋಟೇಲ್ ಕೋಣೆ ಮೇಲೆ ಗುಜರಾತ್ ಪೊಲೀಸರು ಹಾಗೂ ಗುಪ್ತಚರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾಗಿ ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.
ಅಕ್ಟೋಬರ್ 23 ರಂದು ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಹಾಗೂ ಪಟೇಲ್ ಮೀಸಲಾತಿ ಹೋರಾಟದ ರೂವಾರಿ ಹಾರ್ದಿಕ್ ಪಟೇಲ್ ರನ್ನು ಅಹಮದಾಬಾದ್ ನ ಉಮ್ಮೀದ್ ಹೊಟೇಲ್ ನಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದರು. ಇದಾದ ನಂತರ ಚರ್ಚೆ ನಡೆಸಿದ್ದ ಕೋಣೆಯಲ್ಲಿ ಪೊಲೀಸ್ ಮತ್ತು ಐಬಿ ಅಧಿಕಾರಿಗಳು ಹುಡುಕಾಟ ನಡೆದಿದ್ದಾರೆ ಎಂದು ಗೆಹ್ಲೋಟ್ ದೂರಿದ್ದಾರೆ.
ನಂತರ ಹೊಟೇಲ್ ನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.
I condemn all this surveillance being done on BJP's orders.#Gujarat
— Ashok Gehlot (@ashokgehlot51) October 23, 2017
ಈ ಕುರಿತು ಟ್ವೀಟ್ ಮಾಡಿರುವ ಗೆಹ್ಲೋಟ್, "ಬಿಜೆಪಿಯ ಆದೇಶದ ಮೇಲೆ ಈ ರೀತಿ ಕಣ್ಗಾವಲು ಕೆಲಸ ನಡೆಸಲಾಗಿದೆ," ಎಂದು ಕಿಡಿಕಾರಿದ್ದಾರೆ.
ಆದರೆ ಹೊಟೇಲ್ ಕೋಣೆಗಳಲ್ಲಿ ಹುಡುಕಾಟ ನಡೆಸಿರುವುದನ್ನು ಹೊಟೇಲ್ ಮ್ಯಾನೇಜರ್ ವಿಕ್ರಂ ಸಿಂಗ್ ತಳ್ಳಿ ಹಾಕಿದ್ದಾರೆ. "ಹುಡುಕಾಟ ನಡೆಸಿಲ್ಲ. ಹೊಟೇಲ್ ಸುತ್ತ ಮುತ್ತ ಭದ್ರತಾ ಸಿಬ್ಬಂದಿಗಳಿದ್ದಿದ್ದು ಹೌದು. ಭದ್ರತಾ ಕಾರಣಕ್ಕೆ ಸಿಸಿಟಿವಿ ದೃಶ್ಯಗಳನ್ನು ಕೇಳಿದ್ದರು. ನಾವು ಕೊಟ್ಟಿದ್ದೇವೆ," ಎಂದು ಹೇಳಿದ್ದಾರೆ.