ಭಾರೀ ವಿವಾದಕ್ಕೆ ಕಾರಣವಾಗಿರುವ ಈ ಬಿಜೆಪಿ ಅಭ್ಯರ್ಥಿ ಪಾಯಲ್ ಕುಕ್ರಾಣಿ ಯಾರು?
ಅಹಮದಾಬಾದ್, ನ.13: ಗುಜರಾತ್ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಪಾಯಲ್ ಕುಕ್ರಾಣಿ ಹೆಸರು ಭಾರೀ ವಿವಾದಕ್ಕೆ ಕಾರಣವಾಗಿದೆ. ಗುಜರಾತ್ನಲ್ಲಿ ಈ ಕುರಿತು ಬಿಸಿ-ಬಿಸಿ ಚರ್ಚೆಗಳು ನಡೆಯುತ್ತಿವೆ.
ಇಷ್ಟು ವಿವಾದಕ್ಕೆ ಕಾರಣವಾಗಿರುವ ಪಾಯಲ್ ಕುಕ್ರಾಣಿ ಯಾರು? ಎಂದರೆ, 97 ಮುಸ್ಲಿಮರನ್ನು ಕೊಂದ ನರೋಡಾ ಪಾಟಿಯಾ ಗಲಭೆ ಪ್ರಕರಣದ 16 ಅಪರಾಧಿಗಳಲ್ಲಿ ಒಬ್ಬರಾದ ಮನೋಜ್ ಕುಕ್ರಾಣಿ ಅವರ ಪುತ್ರಿ.
ಹೌದು, ಬಿಜೆಪಿ ಶುಕ್ರವಾರ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ನರೋಡಾ ಪಾಟಿಯಾ ಹತ್ಯಾಕಾಂಡ ಪ್ರಕರಣದ ಅಪರಾಧಿಯ ಮಗಳು 30 ವರ್ಷದ ಪಾಯಲ್ ಕುಕ್ರಾಣಿಗೆ ಟಿಕೆಟ್ ನೀಡಿದೆ.

97 ಮುಸ್ಲಿಮರ ಹತ್ಯೆಗೆ ಕಾರಣವಾದ ಗಲಭೆ
ನರೋಡಾ ಪಾಟಿಯಾ ಗಲಭೆ ಪ್ರಕರಣದಲ್ಲಿ 97 ಮುಸ್ಲಿಮರು ಹತ್ಯೆಗೀಡಾಗಿದ್ದರು. ಈ ಪ್ರಕರಣದ 16 ಅಪರಾಧಿಗಳಲ್ಲಿ ಒಬ್ಬರಾದ ಮನೋಜ್ ಕುಕ್ರಾಣಿ ಕೂಡ ಒಬ್ಬರು. ನರೋಡಾ ಪಾಟಿಯಾ ಗಲಭೆ ಪ್ರಕರಣದಲ್ಲಿ ಮನೋಜ್ ಕುಕ್ರಾಣಿ ಮತ್ತು ಇತರ 15 ಮಂದಿಯ ಶಿಕ್ಷೆಯನ್ನು ಗುಜರಾತ್ ಹೈಕೋರ್ಟ್ 2018 ರಲ್ಲಿ ಎತ್ತಿ ಹಿಡಿದಿತ್ತು. ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕುಕ್ರಾಣಿ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.
ಇಂತಹ ಅಪರಾಧಿಯ ಮಗಳು 30 ವರ್ಷದ ಪಾಯಲ್ ಕುಕ್ರಾಣಿ ಕೂಡ ಈ ಬಾರಿ ಆಡಳಿತ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿ ಟಿಕೆಟ್ ನೀಡಿರುವ ಅತ್ಯಂತ ಕಿರಿಯ ಅಭ್ಯರ್ಥಿಗಳಲ್ಲಿ ಈಕೆಯು ಒಬ್ಬರು. ಪಾಯಲ್ ಕುಕ್ರಾಣಿ ಅರಿವಳಿಕೆ ತಜ್ಞೆ.

ಬಿಲ್ಕಿಸ್ ಅಪರಾಧಿಗಳ ಬಿಡುಗಡೆ ವಿರೋಧದ ನಡುವೆ ಬಿಜೆಪಿ ಮೊಂಡುತನ
ಈ ವರ್ಷದ ಆರಂಭದಲ್ಲಿ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಅಪರಾಧಿಗಳ ಬಿಡುಗಡೆ ಮಾಡಿರುವ ಕುರಿತು ಈಗಾಗಲೇ ಆಡಳಿತರೂಢ ಬಿಜೆಪಿ ಮೇಲೆ ಭಾರೀ ಟೀಕೆಗಳು ಕೇಳಿ ಬಂದಿದೆ. ಹಲವು ಸಾಮಾಜಿಕ ಕಾರ್ಯಕರ್ತರು, ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಕಿಡಿಕಾರಿವೆ. ಈ ವಿರೋಧದ ನಡುವೆಯೂ ಬಿಜೆಪಿ ಪಾಯಲ್ ಕುಕ್ರಾಣಿಗೆ ಟಿಕೆಟ್ ನೀಡಿದೆ.

ಅರಿವಳಿಕೆ ತಜ್ಞರಾಗಿರುವ ಪಾಯಲ್ ಕುಕ್ರಾಣಿ
ಬಿಜೆಪಿ ನಾಯಕಿ ಪಾಯಲ್ ಕುಕ್ರಾಣಿ ಮುಂಬರುವ ಗುಜರಾತ್ ಚುನಾವಣೆ 2022 ಕ್ಕೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಅತ್ಯಂತ ಕಿರಿಯ ವ್ಯಕ್ತಿ. 30 ವರ್ಷ ವಯಸ್ಸಿನ ಕುಕ್ರಾಣಿ ಅರಿವಳಿಕೆ ತಜ್ಞರಾಗಿದ್ದಾರೆ. ಇವರ ಕುಟುಂಬವು ಬಿಜೆಪಿಯೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿದೆ.
ಗುಜರಾತ್ ಚುನಾವಣೆಗೆ ಅಹಮದಾಬಾದ್ನ ನರೋಡಾ ಕ್ಷೇತ್ರದಿಂದ ಪಾಯಲ್ ಕುಕ್ರಾಣಿ ಕಣಕ್ಕಿಳಿದಿದ್ದಾರೆ. ಪಾಯಲ್ ಅವರ ತಾಯಿ ರೇಷ್ಮಾ ಕುಕ್ರಾಣಿ ಬಿಜೆಪಿ ಕಾರ್ಪೊರೇಟರ್ ಆಗಿದ್ದಾರೆ. ಚುನಾವಣೆಯಲ್ಲಿ ಗೆದ್ದರೆ ಮುಂದಿನ ದಿನಗಳಲ್ಲಿ ಸ್ಥಳೀಯರಿಗೆ ನೆರವು ನೀಡಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಪಾಯಲ್ ಹೇಳಿದ್ದಾರೆ.

ಪಾಯಲ್ ಕುಕ್ರಾಣಿ ಆಯ್ಕೆಗೆ ಬಿಜೆಪಿಯಲ್ಲಿ ಅಸಮಾಧಾನ
ನರೋಡಾ ಕ್ಷೇತ್ರವು 1990 ರಿಂದ ಬಿಜೆಪಿಗೆ ಭದ್ರಕೋಟೆಯಾಗಿದೆ. ಪಾಯಲ್ ಕುಕ್ರಾಣಿ ಅವರನ್ನು ಈ ಸ್ಥಾನದಿಂದ ಕಣಕ್ಕಿಳಿಸಲು ಹಾಲಿ ಶಾಸಕ ಬಲರಾಮ್ ತವಾನಿ ಅವರನ್ನು ಕೈಬಿಡಲಾಗಿದೆ. ಪಕ್ಷದ ಈ ನಿರ್ಧಾರ ಹಲವಾರು ಬಿಜೆಪಿ ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಗುಜರಾತ್ ವಿಧಾನಸಭಾ ಚುನಾವಣೆಗೆ ಡಿಸೆಂಬರ್ 1 ರಿಂದ 5 ರವರೆಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications