ಗುಜರಾತ್ ನಲ್ಲಿ ಪಾಟೀದಾರ್ ಮತ ಸೆಳೆಯಲು ದಾಳ ಉರುಳಿಸಿದ ಬಿಜೆಪಿ
ಗುಜರಾತ್ ವಿಧಾನಸಭೆ ಚುನಾವಣೆ ಈ ಪರಿಯ ಆಸಕ್ತಿ ಹುಟ್ಟಿಸಬಹುದು ಎಂಬ ನಿರೀಕ್ಷೆ ಇರಲಿಲ್ಲ. ಆದರೆ ಪಾಟೀದಾರ್ ಜಾತಿ ಲೆಕ್ಕಾಚಾರ, ಜಿಎಸ್ ಟಿ ಜಾರಿ ಮತ್ತಿತರ ವಿಚಾರ ಮುನ್ನೆಲೆಗೆ ಬಂದು ಬಿಜೆಪಿಯವರಿಗೆ ಈ ಸಲ ಗುಜರಾತ್ ಚುನಾವಣೆ ಸಲೀಸಲ್ಲ ಅನ್ನೋ ಮಟ್ಟಕ್ಕೆ ಬಂದು ನಿಂತಿತು. ಅಷ್ಟರಲ್ಲೇ ಬಿಜೆಪಿಯಿಂದ ಎರಡು ಪ್ರಮುಖ ಅಸ್ತ್ರಗಳ ಪ್ರಯೋಗವಾಗಿದೆ.
ಗುಜರಾತ್: ಅಡ್ಡ ಮತದಾನ ಮಾಡಿದ್ದ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಟಿಕೆಟ್
ಆ ಪೈಕಿ ಮೊದಲನೆಯದು ಜಿಎಸ್ ಟಿ ಸ್ಲ್ಯಾಬ್ ನಲ್ಲಿ ಮಾಡಿದ ವ್ಯತ್ಯಾಸ. ಹಲವು ವಸ್ತುಗಳ ತೆರಿಗೆ ಬಕೆಟ್ ಗಳನ್ನೇ ಬದಲಾಯಿಸಿ, ವರ್ತಕರು- ವ್ಯಾಪಾರಸ್ಥರ ಪಾಲಿಗೆ ಡಾರ್ಲಿಂಗ್ ಅನ್ನಿಸಿಕೊಳ್ಳುವ ಕೆಲಸ ಮಾಡಿತು. ಇದೇನೋ ಸರಿ ಸ್ವಾಮಿ, ಪಾಟೀದಾರ್ ರ ಕೋಪವನ್ನು ಹೇಗೆ ತಮಣಿ ಮಾಡ್ತಾರೆ ಎಂದು ಕುಹಕದ ಮಾತನಾಡಿದ್ದ ವಿರೋಧಿಗಳಿಗೆ ಸೂಜಿ ಚುಚ್ಚಿದೆ ಮೋದಿ- ಅಮಿತ್ ಶಾ ಜೋಡಿ.
ಗುಜರಾತ್ ವಿಧಾನಸಭೆ ಚುನಾವಣೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಟಿಕೆಟ್ ಹಂಚಿಕೆಯಲ್ಲಿ ಪಾಟೀದಾರ್ ರ ಮನಸ್ಸಂತೋಷ ಪಡಿಸುವ ಯತ್ನ ಮಾಡಿದೆ. ಎಪ್ಪತ್ತು ಅಭ್ಯರ್ಥಿಗಳ ಪಟ್ಟಿಯಲ್ಲಿ ಹದಿನಾರು ಮಂದಿ ಪಾಟೀದಾರ್ ರಿದ್ದಾರೆ. ಅದರಲ್ಲಿ ಉಪಮುಖ್ಯಮಂತ್ರಿ ನಿತಿನ್ ಭಾಯ್ ಪಟೇಲ್ ಹೆಸರು ಸಹ ಇದೆ.
ಪಾಟೀದಾರ್ ರ ಹೋರಾಟದ ಮುಂಚೂಣಿಯನ್ನು ಇಪ್ಪತ್ನಾಲ್ಕು ವರ್ಷದ ಹಾರ್ದಿಕ್ ಪಟೇಲ್ ವಹಿಸಿದ್ದಾರೆ. ಇದೀಗ ಪಾಟೀದಾರ್ ಸಮುದಾಯಕ್ಕೆ ಪ್ರಬಲ ಸಂದೇಶ ರವಾನಿಸಿರುವ ಬಿಜೆಪಿಯು ಕಾಂಗ್ರೆಸ್ ನ ಆತ್ಮವಿಶ್ವಾಸದ ಓಟಕ್ಕೆ ಅಡ್ಡಗಾಲು ಹಾಕಿದಂತಾಗಿದೆ. ಒಂದು ವೇಳೆ ಕಾಂಗ್ರೆಸ್ ನ ಎಪ್ಪತ್ತು ಮಂದಿ ಪಟ್ಟಿಯಲ್ಲಿ ಹದಿನಾರಕ್ಕಿಂತ ಕಡಿಮೆ ಸಂಖ್ಯೆಯ ಪಾಟೀದಾರ್ ರಿದ್ದರೆ ಆಗ ಆ ಪಕ್ಷಕ್ಕೆ ಸಮಸ್ಯೆ ಶುರುವಾಗುತ್ತದೆ.
ಗುಜರಾತ್ ನ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ಹದಿನೆಂಟರಷ್ಟು ಪಾಟೀದಾರ್ ರಿದ್ದಾರೆ ಎಂದು ನಂಬಲಾಗಿದೆ. ಎರಡು ದಶಕದಿಂದ ಈ ಸಮುದಾಯವು ಬಿಜೆಪಿಯನ್ನು ಬೆಂಬಲಿಸುತ್ತಾ ಬರುತ್ತಿದೆ. ಆದರೆ ಒಬಿಸಿ ಮೀಸಲಾತಿಗೆ ಈ ಸಮುದಾಯವನ್ನು ತರಬೇಕು ಎಂಬ ಹೋರಾಟದ ವಿಚಾರವಾಗಿ ಮತ ವಿಭಜನೆಯಾಗುವ ಸಾಧ್ಯತೆಗಳು ಗೋಚರಿಸತೊಡಗಿದವು.
ಗುಜರಾತ್ ವಿಧಾನಸಭೆಗೆ ಡಿಸೆಂಬರ್ ಒಂಬತ್ತು ಹಾಗೂ ಹದಿನಾಲ್ಕರಂದು ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ಹದಿನೆಂಟಕ್ಕೆ ಎಣಿಕೆ ನಡೆಯಲಿದೆ. ಈಗ ಬಿಜೆಪಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಎರಡು ಹಂತದ ಮತದಾನ ನಡೆಯುವಲ್ಲಿನ ಅಭ್ಯರ್ಥಿಗಳಿದ್ದಾರೆ.