ಇಸುದನ್ ಗಧ್ವಿ ಎಎಪಿಯ ಗುಜರಾತ್ ಸಿಎಂ ಅಭ್ಯರ್ಥಿ: ಕೇಜ್ರಿವಾಲ್ ಘೋಷಣೆ
ಅಹಮದಾಬಾದ್, ನವೆಂಬರ್; ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಇಸುದನ್ ಗಧ್ವಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಘೋಷಿಸಿದರು.
ರಾಜ್ಯದ ಜನತೆ ಪಕ್ಷಕ್ಕೆ ಸಲ್ಲಿಸಿದ ಅಭಿಪ್ರಾಯದ ಮೇರೆಗೆ ಅಭ್ಯರ್ಥಿಯನ್ನು ಹೆಸರಿಸಲಾಗಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗಧ್ವಿ ಅವರಲ್ಲದೇ, ಎಎಪಿಯ ರಾಜ್ಯ ಘಟಕದ ಅಧ್ಯಕ್ಷ ಗೋಪಾಲ್ ಇಟಾಲಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಮನೋಜ್ ಸೊರತಿಹ್ಯ ಕೂಡ ಉನ್ನತ ಹುದ್ದೆಯ ರೇಸ್ನಲ್ಲಿದ್ದರು.
ಪಕ್ಷ ನಡೆಸಿದ ಸಮೀಕ್ಷೆಯಲ್ಲಿ 40 ವರ್ಷದ ಗಾಧ್ವಿ ಶೇ.73ರಷ್ಟು ಮತಗಳನ್ನು ಪಡೆದಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಗಧ್ವಿ ಅವರು ದ್ವಾರಕಾ ಜಿಲ್ಲೆಯ ಪಿಪಾಲಿಯಾ ಗ್ರಾಮದ ರೈತ ಕುಟುಂಬದಿಂದ ಬಂದವರು ಮತ್ತು ರಾಜ್ಯದ ಜನಸಂಖ್ಯೆಯ ಶೇಕಡಾ 48 ರಷ್ಟಿರುವ ಇತರ ಹಿಂದುಳಿದ ಜಾತಿಗಳಿಗೆ ಸೇರಿದವರು.

ಇಸುದನ್ ಗಧ್ವಿ ಯಾರು?
ಗಧ್ವಿ ಅವರು ಗುಜರಾತ್ನ ಅತ್ಯಂತ ಜನಪ್ರಿಯ ಪತ್ರಕರ್ತರು ಮತ್ತು ಟಿವಿ ನಿರೂಪಕರಲ್ಲಿ ಒಬ್ಬರು. ವಿಟಿವಿ ನ್ಯೂಸ್ನಲ್ಲಿ ಅವರ 'ಮಹಾಮಂತನ್' ಕಾರ್ಯಕ್ರಮ ಪ್ರತಿ ರಾತ್ರಿ 9.30ರಿಂದ ಪ್ರಸಾರವಾಗುತ್ತದೆ. ಈ ಕಾರ್ಯಕ್ರಮವು ಲಕ್ಷಗಟ್ಟಲೇ ವೀಕ್ಷಕರನ್ನು ಹೊಂದಿದೆ. ಜನರು ಬಹಳಷ್ಟು ಆಸಕ್ತಿಯಿಂದ ನೋಡುವ ಕಾರ್ಯಕ್ರಮ ಇದಾಗಿದೆ. ಈ ಪ್ರದರ್ಶನವು ಸ್ಟುಡಿಯೋದಿಂದ ಹೊರಾಂಗಣಕ್ಕೆ ಸ್ಥಳಾಂತರಗೊಂಡಾಗ ನೂರಾರು ಜನರು ಸೇರುತ್ತಾರೆ. ವಿಶೇಷವಾಗಿ ರೈತರು ಹೆಚ್ಚು ಈ ಕಾರ್ಯಕ್ರಮವನ್ನು ಇಷ್ಟಪಡುತ್ತಾರೆ.
ಗಾಧ್ವಿ ಜನರಿಗೆ ನ್ಯಾಯದ ಭರವಸೆಯನ್ನು ನೀಡುವ 'ನಾಯಕ' ರಾಗಿದ್ದಾರೆ. ಆ ಒಂದು ಕಾರ್ಯಕ್ರಮದ ಹೊರತಾಗಿ, ಗಾಧ್ವಿ ಭಾನುವಾರದಂದು 'ಧಾರ್ಮಿಕ ಸಂಸ್ಕೃತಿಯನ್ನು ಕಾಪಾಡುವ' ಸಾಪ್ತಾಹಿಕ ಕಾರ್ಯಕ್ರಮವನ್ನೂ ಮಾಡುತ್ತಾರೆ. ಗಧ್ವಿ ಅವರು ಜೂನ್ 14, 2021 ರಂದು ಅಹಮದಾಬಾದ್ನಲ್ಲಿ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಎಎಪಿ ಸೇರಿದರು. ಈ ಟಿವಿ ಆ್ಯಂಕರ್ ಸದ್ಯ ಸ್ಟುಡಿಯೊದಿಂದ ರಾಜಕೀಯಕ್ಕೂ ಕಾಲಿಟ್ಟಿದ್ದಾರೆ.

ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು?
ಕೇಜ್ರಿವಾಲ್ ಅಹಮದಾಬಾದ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಗಧ್ವಿ ಹೆಸರನ್ನು ಘೋಷಿಸಿದರು. ಪ್ರಸ್ತುತ ಭಾರತೀಯ ಜನತಾ ಪಕ್ಷವು ಆಡಳಿತ ನಡೆಸುತ್ತಿರುವ ರಾಜ್ಯದಲ್ಲಿ ಎಎಪಿ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು? ಎಂಬುದರ ಕುರಿತು ತಮ್ಮ ಅಭಿಪ್ರಾಯಗಳನ್ನು ನೀಡಲು ಎಸ್ಎಂಎಸ್, ವಾಟ್ಸಪ್, ಧ್ವನಿ ಮೇಲ್ ಮತ್ತು ಇ-ಮೇಲ್ ಮೂಲಕ ಪಕ್ಷವನ್ನು ಸಂಪರ್ಕಿಸುವಂತೆ ಕಳೆದ ವಾರ ಕೇಜ್ರಿವಾಲ್ ಜನರನ್ನು ಒತ್ತಾಯಿಸಿದ್ದರು.
ನವೆಂಬರ್ 3ರ ಸಂಜೆಯವರೆಗೆ ಜನರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದು ಮತ್ತು ಅವರ ಅಭಿಪ್ರಾಯಗಳ ಆಧಾರದ ಮೇಲೆ ಪಕ್ಷದ ಮುಖ್ಯಮಂತ್ರಿ ಹೆಸರನ್ನು ಮರುದಿನ ಪ್ರಕಟಿಸಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದರು. ನವೆಂಬರ್ 4ರಂದು ಫಲಿತಾಂಶ ಪ್ರಕಟಿಸುತ್ತೇವೆ ಎಂದು ಕಳೆದ ಶನಿವಾರವೇ ಅವರು ಹೇಳಿದ್ದರು.

ಜನರ ಆಯ್ಕೆಯೇ ನಮ್ಮ ಆಯ್ಕೆ- ಕೇಜ್ರಿವಾಲ್
ಕೇಜ್ರಿವಾಲ್ ಮಾತನಾಡಿ "ಪಂಜಾಬ್ ಚುನಾವಣೆಯ ಸಮಯದಲ್ಲಿ, ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂದು ನಾವು ಜನರನ್ನು ಕೇಳಿದ್ದೆವು, ಜನರು ಭಗವಂತ್ ಮಾನ್ ಅವರನ್ನು ಭಾರೀ ಬಹುಮತದಿಂದ ಹೆಸರಿಸಿದ್ದರು. ಸಾರ್ವಜನಿಕರ ಇಚ್ಛೆಯಂತೆ ನಾವು ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದೇವೆ" ಎಂದರು.

118 ಅಭ್ಯರ್ಥಿಗಳ ಒಂಬತ್ತು ಪಟ್ಟಿ ಪ್ರಕಟ
ಎಎಪಿ ಗುರುವಾರ ಗುಜರಾತ್ ಚುನಾವಣೆಗೆ ತನ್ನ 10 ಅಭ್ಯರ್ಥಿಗಳ 9ನೇ ಪಟ್ಟಿಯನ್ನು ಪ್ರಕಟಿಸಿದೆ. ಇದುವರೆಗೆ ಹೆಸರುಗಳನ್ನು ಘೋಷಿಸಿದ ಅಭ್ಯರ್ಥಿಗಳ ಸಂಖ್ಯೆ ಸದ್ಯ 118 ಆಗಿದೆ. 182 ಸದಸ್ಯರ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮತ ಎಣಿಕೆ ಡಿಸೆಂಬರ್ 8 ರಂದು ನಡೆಯಲಿದೆ.












Click it and Unblock the Notifications