ಗೋರಖ್ ಪುರ್ ಮಕ್ಕಳ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ: ವರದಿ
ಉತ್ತರಪ್ರದೇಶದ ಗೋರಖ್ ಪುರ್ ನಲ್ಲಿ ಸಂಭವಿಸಿದ ಮೂವತ್ತು ಮಕ್ಕಳ ಸಾವಿಗೆ ಸಂಬಂಧಿಸಿದಂತೆ ನಡೆಸಿದ ತನಿಖೆಯ ವರದಿ ಬಂದಿದೆ. ವೈದ್ಯರ ನಿರ್ಲಕ್ಷ್ಯದಿಂದಲೇ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ಆಮ್ಲಜನಕದ ಪೂರೈಕೆಯಲ್ಲಿನ ವ್ಯತ್ಯಯದಿಂದ ಮೂವತ್ತು ಮಕ್ಕಳು, ಅದರಲ್ಲೂ ಬಹುತೇಕ ನವಜಾತ ಶಿಶುಗಳು ಮೃತಪಟ್ಟಿದ್ದವು ಎಂದು ಆರೋಪಿಸಲಾಗಿತ್ತು.
ವೈದ್ಯರ ನಿರ್ಲಕ್ಷ್ಯ, ಸಮನ್ವಯತೆ ಕೊರತೆಯಿಂದ ಇಂಥ ಅನಾಹುತ ಸಂಭವಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಳೆದ ಗುರುವಾರ ಹಾಗೂ ಶುಕ್ರವಾರದ ಮೂವತ್ತಾರು ಗಂಟೆ ಅವಧಿಯಲ್ಲಿ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯಲಿ ವ್ಯತ್ಯಯವಾಗಿ ಮಕ್ಕಳು ಮೃತಪಟ್ಟಿದ್ದವು ಎಂದು ಆರೋಪಿಸಲಾಗಿತ್ತು.

ಘಟನೆ ಬಗ್ಗೆ ಗೋರಖ್ ಪುರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಿದ್ದರು. ಒಂದು ವೇಳೆ ವೈದ್ಯರು ಹೆಚ್ಚಿನ ಕಾಳಜಿ ವಹಿಸಿದ್ದರೆ ಮಕ್ಕಳನ್ನು ಉಳಿಸಬಹುದಿತ್ತು ಎಂದು ಹೇಳಲಾಗಿದೆ. ಇದೇ ವೇಳೆ ವೈದ್ಯರ ಮಧ್ಯೆ ಸಮನ್ವಯತೆ ಕೊರತೆ ಇತ್ತು ಎಂದು ಕೂಡ ಆರೋಪಿಸಲಾಗಿದೆ.
ಆಸ್ಪತ್ರೆಯಲ್ಲಿ ದ್ರವ ರೂಪದ ಆಮ್ಲಜನಕದ ಕೊರತೆಯಿತ್ತು. ಪರಿಸ್ಥಿತಿ ನಿಭಾಯಿಸಬೇಕಾದ ಇಬ್ಬರು ಹಿರಿಯ ವೈದ್ಯರು ಏಕಕಾಲಕ್ಕೆ ಆಸ್ಪತ್ರೆ ಬಿಟ್ಟು ಹೊರಟಿದ್ದಾರೆ. ಆಸ್ಪತ್ರೆ ಆವರಣ ಬಿಡುವ ಮುನ್ನ ಇದಕ್ಕೆ ವ್ಯವಸ್ಥೆ ಮಾಡಬೇಕಿತ್ತು. ಅದರಲ್ಲೂ ಕಳೆದ ಕೆಲ ದಿನಗಳಿಂದಲೇ ದ್ರವ ರೂಪದ ಆಮ್ಲಜನಕದ ಕೊರತೆ ಕಾಣಿಸಿಕೊಂಡಿತ್ತು. ವಿವಿಧ ವಿಭಾಗಗಳ ವೈದ್ಯರ ಮಧ್ಯದ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇನ್ನು ಈ ಘಟನೆಗೆ ಸಂಬಂಧಿಸಿದ ಹಾಗೆ ವೈದರನ್ನು ಅಮಾನತು ಮಾಡಿ, ಉತ್ತರಪ್ರದೇಶ ಸರಕಾರ ಆದೇಶ ಹೊರಡಿಸಿದೆ.












Click it and Unblock the Notifications