ಹವಾಮಾನ ಬಿಕ್ಕಟ್ಟಿಗೆ ಗಾಂಧಿ ಆಲೋಚನೆಯಲ್ಲಿ ಪರಿಹಾರ: ಪ್ರಧಾನಿ ಮೋದಿ
ಚೆನ್ನೈ, ನವೆಂಬರ್ 11: ನಗರ ಮತ್ತು ಗ್ರಾಮೀಣ ಭಾರತದ ನಡುವಿನ ಅಂತರವನ್ನು ಕಡಿಮೆ ಮಾಡಲು ದೇಶವು ಕೆಲಸ ಮಾಡುತ್ತಿದೆ ಎಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಶುಕ್ರವಾರದಂದು ದಿಂಡುಗಲ್ನ ಗಾಂಧಿಗ್ರಾಮ್ ರೂರಲ್ ಇನ್ಸ್ಟಿಟ್ಯೂಟ್ನ 36ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ''ಗಾಂಧಿಯ ಮೌಲ್ಯಗಳು ಹೆಚ್ಚು ಪ್ರಸ್ತುತವಾಗುತ್ತಿವೆ. ಸಂಘರ್ಷಗಳನ್ನು ಕೊನೆಗೊಳಿಸುವ ಅಥವಾ ಹವಾಮಾನ ಬಿಕ್ಕಟ್ಟಿನ ಬಗ್ಗೆ ಮಹಾತ್ಮ ಗಾಂಧಿಯವರ ಆಲೋಚನೆಗಳು ಇಂದಿನ ಅನೇಕ ಸವಾಲುಗಳಿಗೆ ಉತ್ತರಗಳನ್ನು ಹೊಂದಿವೆ'' ಎಂದು ಹೇಳಿದರು.
ನನ್ನ ಪತ್ರಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯಿಸುತ್ತಾರೆ ಎಂಬ ವಿಶ್ವಾಸವಿದೆ: ಡಿಕೆಶಿ
ಗಾಂಧಿ ಗ್ರಾಮವನ್ನು ಮಹಾತ್ಮ ಗಾಂಧೀಜಿಯವರೇ ಉದ್ಘಾಟಿಸಿದ್ದಾರೆ. ಗಾಂಧಿಗ್ರಾಮವು ಗಾಂಧೀಜಿಯವರ ಗ್ರಾಮೀಣಾಭಿವೃದ್ಧಿಯ ಕಲ್ಪನೆಗಳ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ. ಮಹಾತ್ಮ ಗಾಂಧಿಯವರು ಹಳ್ಳಿಗಳು ಸ್ವಾವಲಂಬಿಯಾಗಬೇಕೆಂದು ಬಯಸಿದ್ದರು. ನಮ್ಮ ಗ್ರಾಮೀಣ ಅಭಿವೃದ್ಧಿಯ ದೃಷ್ಟಿಕೋನವು ಗಾಂಧಿಯವರಿಂದ ಸ್ಫೂರ್ತಿ ಪಡೆದಿದೆ. ನಗರ ಮತ್ತು ಗ್ರಾಮೀಣ ಜೀವನಶೈಲಿಗಳ ನಡುವೆ ವ್ಯತ್ಯಾಸವಿರಬಹುದು, ಆದರೆ ಅಸಮಾನತೆಯಿಲ್ಲ. ಇಂದು ರಾಷ್ಟ್ರವು ವಿಭಜನೆಯನ್ನು ಕೊನೆಗೊಳಿಸಲು ಕೆಲಸ ಮಾಡುತ್ತಿದೆ ಎಂದರು.
ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳುವುದು ಗಾಂಧೀಜಿಗೆ ಒಂದು ದೊಡ್ಡ ಕಾಳಜಿಯಾಗಿತ್ತು. ಈ ದಿಸೆಯಲ್ಲಿ ನಮ್ಮ ಸರ್ಕಾರವು ಸಂಪೂರ್ಣ ಗ್ರಾಮೀಣ ನೈರ್ಮಲ್ಯ ವ್ಯಾಪ್ತಿ, 6 ಕೋಟಿಗೂ ಹೆಚ್ಚು ನಲ್ಲಿ ನೀರಿನ ಸಂಪರ್ಕಗಳು ಮತ್ತು 2.5 ಕೋಟಿಗೂ ಹೆಚ್ಚು ವಿದ್ಯುತ್ ಸಂಪರ್ಕಗಳನ್ನು ಒದಗಿಸಿದೆ. ಗ್ರಾಮೀಣ ರಸ್ತೆಗಳು ಅಭಿವೃದ್ಧಿಯಾಗುತ್ತಿದ್ದು, ಅಭಿವೃದ್ಧಿ ಜನರ ಮನೆ ಬಾಗಿಲಿಗೆ ತಲುಪುತ್ತಿದೆ ಎಂದರು.
ಖಾದಿ ಮಹಾತ್ಮಾ ಗಾಂಧಿಯವರ ಹೃದಯಕ್ಕೆ ಬಹಳ ಹತ್ತಿರವಾಗಿದೆ. ಅದು ಇಂದು ಬಹಳ ಜನಪ್ರಿಯವಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಖಾದಿ ಮಾರಾಟ ಶೇ. 300ರಷ್ಟು ಏರಿಕೆ ಕಂಡಿದೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ಕಳೆದ ವರ್ಷ 1 ಲಕ್ಷ ಕೋಟಿ ರೂಪಾಯಿಗಳ ದಾಖಲೆಯ ವಹಿವಾಟು ವರದಿ ಮಾಡಿದೆ ಎಂದರು.
ಗ್ರಾಮೀಣ ಪ್ರದೇಶಗಳ ಭವಿಷ್ಯಕ್ಕಾಗಿ ಸುಸ್ಥಿರ ಕೃಷಿಯು ನಿರ್ಣಾಯಕವಾಗಿದೆ. ನೈಸರ್ಗಿಕ ಕೃಷಿಗೆ ಹೆಚ್ಚಿನ ಉತ್ಸಾಹವಿದೆ. ಏಕೆಂದರೆ ಇದು ರಸಗೊಬ್ಬರ ಆಮದಿನ ಮೇಲೆ ದೇಶದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಇದು ಮಣ್ಣು ಮತ್ತು ಮಾನವನ ಆರೋಗ್ಯಕ್ಕೂ ಒಳ್ಳೆಯದು ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಸಂಗೀತ ಮಾಂತ್ರಿಕ ಇಳಯರಾಜ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಸಮಾರಂಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ರಾಜ್ಯಪಾಲ ಆರ್.ಎನ್.ರವಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.