‘ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ'ಗೆ ಮನಮೋಹನ್ ಸಿಂಗ್ ಆಯ್ಕೆ
ನವದೆಹಲಿ, ನವೆಂಬರ್ 19: 2017ನೇ ಸಾಲಿನ ಪ್ರತಿಷ್ಠಿತ 'ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ'ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರನ್ನು ಆಯ್ಕೆ ಮಾಡಲಾಗಿದೆ.
2004ರಿಂದ 2014ರ ಅವಧಿಯಲ್ಲಿ ದೇಶವನ್ನು ಮುನ್ನಡೆಸಿ ಜಾಗತಿಕವಾಗಿ ಭಾರತದ ಪ್ರಭಾವ ಹೆಚ್ಚಿಸಿದ ಸಾಧನೆ ಪರಿಗಣಿಸಿ ಅವರಿಗೆ 'ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ' ಪ್ರಕಟಿಸಲಾಗಿದೆ.
'ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ'ಗೆ ಮನಮೋಹನ್ ಸಿಂಗ್ ರ ಹೆಸರನ್ನು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ನೇತೃತ್ವದ ಆಯ್ಕೆ ಸಮಿತಿ ಅವಿರೋಧವಾಗಿ ಆಯ್ಕೆ ಮಾಡಿದೆ. ಇಂದಿರಾ ಗಾಂಧಿಯವರ ಜನ್ಮ ಶತಮಾನೋತ್ಸವವನ್ನು ಇಂದು ಆಚರಿಸಲಾಗುತ್ತಿದ್ದು, ಈ ದಿನವೇ ಈ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಎರಡು ಅವಧಿಗೆ ದೇಶವನ್ನು ಮುನ್ನೆಡೆಸಿದ ಕೇವಲ ಮೂರನೇ ವ್ಯಕ್ತಿ ಮನಮೋಹನ್ ಸಿಂಗ್. ಅಮೆರಿಕದೊಂದಿಗೆ ಪರಮಾಣು ಒಪ್ಪಂದ, ಜಾಗತಿಕ ಹವಾಮಾನ ಬದಲಾವಣೆ ಒಪ್ಪಂದಗಳು ಅವರ ಅವಧಿಯಲ್ಲಿ ನಡೆದಿದ್ದವು ಎಂದು ಪ್ರಶಸ್ತಿ ನೀಡುವ 'ಇಂದಿರಾಗಾಂಧಿ ಮೆಮೊರಿಯಲ್ ಟ್ರಸ್ಟ್' ಪ್ರಕಟಣೆಯಲ್ಲಿ ತಿಳಿಸಿದೆ.
ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸಿಂಗ್ ಮಹತ್ವದ ಕೊಡುಗೆ ನೀಡಿದ್ದಾರೆ. ಅವರು ಜಾಗತಿಕವಾಗಿ ದೇಶದ ಘನತೆ ಹೆಚ್ಚಿಸಿದ್ದಾರೆ. ಇದೆಲ್ಲವನ್ನೂ ಪರಿಗಣಿಸಿ ಮನಮೋಹನ್ ಸಿಂಗ್ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಸುಮನ್ ದುಬೆ ತಿಳಿಸಿದ್ದಾರೆ.