ಯೋಗಿ ಮೇಲೆ ಚುನಾವಣೆ ಆಯೋಗಕ್ಕೆ ನೌಕಾ ಸೇನೆ ಮಾಜಿ ಮುಖ್ಯಸ್ಥ ದೂರು
ನೌಕಾ ಸೇನೆ ಮಾಜಿ ಮುಖ್ಯಸ್ಥ ಅಡ್ಮಿರಲ್ ಎಲ್.ರಾಮ್ ದಾಸ್ ಅವರು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು ನೀಡಿದ್ದಾರೆ. ಭಾನುವಾರ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಅದಿತ್ಯನಾಥ್, ಭಾರತೀಯ ಸೇನೆಯನ್ನು "ಮೋದಿಜೀ ಕೀ ಸೇನಾ" ಎಂದಿದ್ದರು.
ಸಶಸ್ತ್ರ ಪಡೆಯು ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲ ಎಂದು ರಾಮ್ ದಾಸ್ ಹೇಳಿದ್ದಾರೆ. "ಸಶಸ್ತ್ರ ಪಡೆಯು ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷಕ್ಕೆ ಸೇರಿದ ಖಾಸಗಿ ಪಡೆ ಅಲ್ಲ. ಅದಕ್ಕೆ ತದ್ವಿರುದ್ಧವಾದ ಯಾವುದೇ ಅಭಿಪ್ರಾಯವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದು ಅವರು ಮುಖ್ಯ ಚುನಾವಣೆ ಆಯುಕ್ತ ಸುನೀಲ್ ಅರೋರಾ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಕಳೆದ ತಿಂಗಳು ಕೂಡ ಚುನಾವಣೆ ಆಯೋಗಕ್ಕೆ ರಾಮ್ ದಾಸ್ ಪತ್ರ ಬರೆದಿದ್ದರು. ಸಶಸ್ತ್ರ ಮೀಸಲು ಪಡೆಯು ರಾಜಕೀಯ ಪಕ್ಷಗಳಿಂದ ರಾಜಕೀಯಕ್ಕೆ ಬಳಕೆ ಆಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಅದೇ ರೀತಿ, ಚುನಾವಣೆ ಪ್ರಚಾರಕ್ಕಾಗಿ ಸೇನೆಯ ಚಿತ್ರಗಳನ್ನು ರಾಜಕೀಯ ಪಕ್ಷಗಳು ಬಳಸಿಕೊಳ್ಳಬಾರದು ಎಂದು ಅಧಿಸೂಚನೆ ಹೊರಡಿಸಿದ್ದನ್ನು ರಾಮ್ ದಾಸ್ ಮೆಚ್ಚಿಕೊಂಡಿದ್ದರು.

ಪುಲ್ವಾಮಾ ದಾಳಿ ನಂತರದ ಬೆಳವಣಿಗೆ ಬಗ್ಗೆ ಘಾಜಿಯಾಬಾದ್ ನಲ್ಲಿ ಮಾತನಾಡುತ್ತಾ ಆದಿತ್ಯನಾಥ್, ಕಾಂಗ್ರೆಸ್ ನ ಜನರು ಭಯೋತ್ಪಾದಕರಿಗೆ ಬಿರಿಯಾನಿ ಕೊಡುತ್ತಿದ್ದರು. ಮೋದಿ ಜೀ ಸೇನೆ ಉಗ್ರರಿಗೆ ಬುಲೆಟ್, ಬಾಂಬ್ ನೀಡುತ್ತಿದೆ. ಇದು ವ್ಯತ್ಯಾಸ. ಭಯೋತ್ಪಾದಕರಿಗೆ- ಮಸೂದ್ ಅಜರ್ ನಂಥವನಿಗೆ ಜೀ ಎಂದು ಕರೆಯುತ್ತಾ ಕಾಂಗ್ರೆಸ್ ಬೆಂಬಲಿಸುತ್ತಿತ್ತು. ಆದರೆ ಮೋದಿ ಜೀ ಸರಕಾರ ಉಗ್ರರ ನೆಲೆಯನ್ನಷ್ಟೇ ಅಲ್ಲ, ಪಾಕ್ ನ ಬೆನ್ನ ಮೂಳೆ ಮುರಿಯುತ್ತಿದೆ ಎಂದಿದ್ದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈ ಹೇಳಿಕೆಗೆ ಕಾಂಗ್ರೆಸ್ ಕೂಡ ಆಕ್ರೋಶ ವ್ಯಕ್ತಪಡಿಸಿತ್ತು. ಕಾಂಗ್ರೆಸ್ ವಕ್ತಾರರಾಅದ ಪ್ರಿಯಾಂಕ ಚತುರ್ವೇದಿ ಮಾತನಾಡಿ, ಭಾರತೀಯ ಸೇನೆಯನ್ನು ಮೋದಿ ಸೇನೆ ಎಂದು ಯೋಗಿ ಆದಿತ್ಯನಾಥ್ ಮರು ನಾಮಕರಣ ಮಾಡಿದ್ದಾರೆ. ಇದು ನಮ್ಮ ಸಶಸ್ತ್ರ ಸೇನೆಗೆ ಅವಮಾನ. ಅವರು ಭಾರತದ ಸಶಸ್ತ್ರ ಪಡೆ. ಪ್ರಚಾರ ಮಂತ್ರಿಯ ಖಾಸಗಿ ಸೇನೆಯಲ್ಲ. ಯೋಗಿ ಆದಿತ್ಯನಾಥ್ ಕಡ್ಡಾಯವಾಗಿ ಕ್ಷಮೆ ಕೇಳಬೇಕು ಎಂದಿದ್ದರು.












Click it and Unblock the Notifications