ಬದರಿನಾಥ ದೇಗುಲದಲ್ಲಿ ಮೋದಿ ಹೆಸರಿನಲ್ಲಿ ಮೊದಲ ಪೂಜೆ
ಚಮೋಲಿ, ಮೇ 15: ಕೊರೊನಾವೈರಸ್ ಲಾಕ್ಡೌನ್ ಜಾರಿಯಾದಾಗಿನಿಂದ ಬಂದ್ ಆಗಿದ್ದ ಹಿಮಾಲಯ ತಪ್ಪಲಿನ ಬದರಿನಾಥ ದೇಗುಲದ ಬಾಗಿಲು ಶುಕ್ರವಾರ ಬ್ರಾಹ್ಮಿ ಮುಹೂರ್ತದಲ್ಲಿ ತೆರೆಯಲಾಗಿದೆ. ದೇಗುಲಕ್ಕೆ ನಿರ್ಬಂಧಿತ ಪ್ರವೇಶಕ್ಕೆ ಅನುಮತಿ ಸಿಕ್ಕಿದೆ. ಮೇ.15ರಂದು ದೇವಾಲಯ ಮುಖ್ಯ ದ್ವಾರ ತೆರೆದಿದ್ದು, ಪ್ರಧಾನ ಅರ್ಚಕರು ಸೇರಿದಂತೆ 27 ಮಂದಿ ಪ್ರವೇಶಿಸಿದ್ದಾರೆ. ಪ್ರಥಮ ಪೂಜೆ ಪ್ರಧಾನಿ ಮೋದಿ ಹೆಸರಿನಲ್ಲಿ ನಡೆದಿದೆ.
ಜೋಶಿಮಠ ಉಪ ವಿಭಾಗ ಮ್ಯಾಜಿಸ್ಟ್ರೇಟ್ ಅನಿಲ್ ಚನ್ಯಲ್ ಅವರು ನೀಡಿದ ಮಾರ್ಗಸೂಚಿಯಂತೆ, ಬದರಿನಾಥ್ ದೇವಾಲಯದ ಪ್ರಧಾನ ಅರ್ಚಕ ಈಶ್ವರಿ ಪ್ರಸಾದ್ ನಂಬೂದರಿ ಹಾಗೂ ಸಹಾಯಕ ಸಿಬ್ಬಂದಿಗಳು ಪಾಂಡುಕೇಶ್ವರ ತಲುಪಿದ್ದು, ಮೇ 13ರಿಂದ ಪೂಜಾ ಕೈಂಕರ್ಯದ ಸಿದ್ಧತೆ ನಡೆಸಿದ್ದರು. ಮೇ 15 ರಂದು ಬೆಳಗ್ಗೆ 4.30ಕ್ಕೆ ಬದರಿನಾಥ್ ಪುಣ್ಯಕ್ಷೇತ್ರದ ಬಾಗಿಲು ತೆರೆದಿದ್ದಾರೆ.
ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿರುವ ಬದರಿನಾಥವು ಗಢ್ವಾಲ್ ಹಿಮಾಲಯದಲ್ಲಿ ಅಲಕನಂದಾ ನದಿಯ ದಂಡೆಯ ಮೇಲೆ ನರ ಮತ್ತು ನಾರಾಯಣ ಪರ್ವತಗಳ ನಡುವೆ ಸ್ಥಿತವಾಗಿದೆ.

ಮಾತನಾಡುವ ಬದರಿನಾಥ
ಮಾತನಾಡುವ ಬದರಿನಾಥ: ತೆಹ್ರಿ ರಾಜಮನೆತನದ ಮುಖ್ಯಸ್ಥರನ್ನು ಮಾತನಾಡುವ ಬದರಿನಾಥ ಎಂದೇ ಗುರುತಿಸಿ ಗೌರವಿಸಲಾಗುತ್ತದೆ. ರಾಜಮನೆತನದ ಮುಖ್ಯಸ್ಥರು ಬೋಲೇಂದ್ರ ಬದ್ರಿ ಅವರು ಈ ಮುಂಚೆ ಏಪ್ರಿಲ್ 20ರಂದು ದೇಗುಲದ ಬಾಗಿಲು ತೆರೆಯಲು ಸೂಚಿಸಿದ್ದರು. ಆದರೆ, ಲಾಕ್ಡೌನ್ ಹಾಗೂ ಮುಖ್ಯ ಅರ್ಚಕರು ಕ್ವಾರಂಟೈನ್ ನಲ್ಲಿದ್ದರಿಂದ ದೇಗುಲ ಪ್ರವೇಶದ ದಿನಾಂಕ ಇದೇ ಮೊದಲ ಬಾರಿಗೆ ಬದಲಾಯಿಸಲಾಗಿದೆ.
ಅದಿಗುರು ಶಂಕರಾಚಾರ್ಯರು ಸ್ಥಾಪಿಸಿದ ಈ ದೇಗುಲಕ್ಕೆ ಕೇರಳದ ನಂಬೂದಿರಿ ಬ್ರಾಹ್ಮಣ ಮನೆತನಕ್ಕೆ ಸೇರಿದವರು ಪ್ರಧಾನ ಅರ್ಚಕ(ರಾವಲ್) ಆಗಿರುತ್ತಾರೆ. ಗಢ್ವಾಲ್ನ ಡಿಮ್ಮರ್ ಗ್ರಾಮದ ಡಿಮ್ರೀ ಪಂಡಿತ ರಾವಲ್ರಿಗೆ ಪೂಜಾ ಕೈಂಕರ್ಯಗಳಲ್ಲಿ ನೆರವಾಗುತ್ತಾರೆ.

ಚಾರ್ ಧಾಮ್ ಯಾತ್ರೆಗಳ ಕ್ಷೇತ್ರ
ಚಾರ್ ಧಾಮ್ ಯಾತ್ರೆಗಳ ಪೈಕಿ ಗಂಗೋತ್ರಿ,ಯಮುನೋತ್ರಿ, ಬದರಿನಾಥ ಹಾಗೂ ಕೇದಾರನಾಥ್ ಯಾತ್ರೆಯನ್ನು ಭಕ್ತರು ಈ ಅವಧಿಯಲ್ಲಿ ಕೈಗೊಳ್ಳುತ್ತಾರೆ. ಅದಿಗುರು ಶಂಕರಾಚಾರ್ಯರು ಸ್ಥಾಪಿಸಿರುವ ಬದ್ರಿನಾಥ್ ದೇಗುಲವು ಸಮುದ್ರಮಟ್ಟದಿಂದ ಸುಮಾರು 10,800 ಅಡಿ ಎತ್ತರದಲ್ಲಿದೆ. ಬದರಿನಾಥ ಕ್ಷೇತ್ರವು ಮುಚ್ಚಿರುವ ಕಾಲದಲ್ಲಿ ಬದರಿನಾಥನ ಉತ್ಸವ ಮೂರ್ತಿಯನ್ನು ಜ್ಯೋತಿರ್ಮಠ(ಜೋಷಿಮಠ)ಕ್ಕೆ ಕರೆತಂದು ಪೂಜಿಸಲಾಗುತ್ತದೆ. ಬದರಿನಾಥ ದೇವಾಲಯವು ಮುಚ್ಚಿರುವ ಸಮಯದಲ್ಲಿ ನಾರದ ಮಹರ್ಷಿಯು ಪ್ರತಿದಿನ ಬದರಿನಾರಾಯಣನಿಗೆ ಪೂಜೆಗಳನ್ನು ಸಲ್ಲಿಸುವನೆಂದು ಒಂದು ನಂಬಿಕೆಯಿದೆ.

ಉತ್ತರಾಖಂಡ್ ದೇವಸ್ಥಾನಂ ಬೋರ್ಡ್ ಪ್ರಕಟಣೆ
ಉತ್ತರಾಖಂಡ್ ದೇವಸ್ಥಾನಂ ಬೋರ್ಡ್ ಮಾಧ್ಯಮ ವಕ್ತಾರರು ಈ ಬಗ್ಗೆ ಪ್ರತಿಕ್ರಿಯಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ನಿರ್ಬಂಧಿತವಾಗಿ ದೇಗುಲ ತೆರೆಯಬೇಕಾಯಿತು. ಭಕ್ತರು, ಯಾತ್ರಾರ್ಥಿಗಳಿಲ್ಲದೆ ಅರ್ಚಕರು ಮಾತ್ರ ದೇಗುಲ ತೆರೆದ ಪ್ರಸಂಗ ನಡೆದಿರಲಿಲ್ಲ. ಬಾಗಿಲು ತೆರೆದ ಬಳಿಕ ಬದರಿನಾಥನಿಗೆ ಚಳಿಗಾಲದಲ್ಲಿ ಹೊದೆಸಿದ್ದ ಉಲ್ಲನ್ ಹೊದಿಕೆಯನ್ನು ಪ್ರಧಾನ ಅರ್ಚಕ ಈಶ್ವರ ಪ್ರಸಾದ್ ಅವರು ನಿತ್ಯಪೂಜೆ ನೆರವೇರಿಸಿದರು. ಪ್ರಥಮ ಪೂಜೆ ಪಿಎಂ ಮೋದಿ ಹೆಸರಿನಲ್ಲಿ ನಡೆಸಲಾಯಿತು ಎಂದಿದ್ದಾರೆ.

ಬದರಿನಾಥ್ ದೇಗುಲವನ್ನು ತಲುಪುವುದು ಹೇಗೆ?
ಬದರಿನಾಥ್ ದೇಗುಲಕ್ಕೆ ಡೆಹ್ರಾಡೂನ್ ನಿಂದ ಹೆಲಿಕಾಪ್ಟರ್ ಸೌಲಭ್ಯ ಕೂಡಾ ಇದೆ. ದೇಗುಲದಿಂದ ಒಂದು ಕಿ.ಮೀ ದೂರದಲ್ಲಿರುವ ನಾರಾಯಣ್ ಪ್ಯಾಲೇಸ್ ರಸ್ತೆಯಲ್ಲಿ ಬಸ್ ನಿಲ್ದಾಣವಿದೆ. ಬಸ್, ಕಾರು ಹಾಗೂ ಟ್ಯಾಕ್ಸಿ ಸೌಲಭ್ಯ ಕೂಡಾ ಇದೆ.
* ಹತ್ತಿರದ ವಿಮಾನ ನಿಲ್ದಾಣ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ 314 ಕಿ.ಮೀ. ದೂರದಲ್ಲಿದೆ.
* ಹತ್ತಿರದ ರೈಲು ನಿಲ್ದಾಣ ಹೃಷಿಕೇಶ. 295 ಕಿ.ಮೀ ದೂರದಲ್ಲಿದೆ.
* ಹೃಷಿಕೇಶ, ಶ್ರೀನಗರ, ರುದ್ರಪ್ರಯಾಗ್, ಜೋಶಿಮಠ, ಚಮೋಲಿ, ರಾಷ್ಟ್ರೀಯ ಹೆದ್ದಾರಿ 58ರ ಮೂಲಕ ಬಸ್, ಟ್ಯಾಕ್ಸಿ ಮಾಗವಿದೆ.

ದೇಗುಲ ತಲುಪಲು ಪ್ರಸಕ್ತವಾದ ಸಮಯ
ಬದರಿನಾಥ ದೇಗುಲ ನವೆಂಬರ್ ತಿಂಗಳಿನಿಂದ ಏಪ್ರಿಲ್ ತನಕ ಬಂದ್ ಆಗಿರುತ್ತದೆ. ಮೇ ತಿಂಗಳಿನಿಂದ ಜುಲೈ ಅವಧಿಯಲ್ಲಿ ಯಾತ್ರಾರ್ಥಿಗಳು ದೇಗುಲವನ್ನು ಭೇಟಿ ಮಾಡಬಹುದು. ದೇಗುಲ ಪ್ರವೇಶಿಸುವಾಗ ಮದ್ಯ, ಮಾಂಸ ಸೇವನೆ ನಿಷಿದ್ಧ. ದೇಗುಲದ ಹವಾಮಾನಕ್ಕೆ ತಕ್ಕಂತೆ ಬೆಚ್ಚನೆಯ ಉಡುಪು ಧರಿಸಬಹುದು, ದೇಗುಲದೊಳಗೆ ಫೋಟೋ, ವಿಡಿಯೋ ನಿಷೇಧವಿದೆ. ಸಮುದ್ರಮಟ್ಟದಿಂದ 10 ಸಾವಿರ ಅಡಿಗೂ ಎತ್ತರದಲ್ಲಿರುವುದರಿಂದ ಆಮ್ಲಜನಕದ ಕೊರತೆಯೂ ಉಂಟಾಗುತ್ತದೆ.











Click it and Unblock the Notifications