ರಾಷ್ಟ್ರಪತಿ ಚುನಾವಣೆ: ಪ್ರತಿಪಕ್ಷಗಳ ಅಭ್ಯರ್ಥಿ ಆಗಲ್ಲ ಎಂದ ಫಾರೂಕ್ ಅಬ್ದುಲ್ಲಾ!
ನವದೆಹಲಿ, ಜೂನ್ 18: ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಅಭ್ಯರ್ಥಿಯಾಗುವಂತೆ ನೀಡಿದ ಪ್ರಸ್ತಾಪವನ್ನು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ತಿರಸ್ಕರಿಸಿದ್ದಾರೆ. ತಾವು ಜಮ್ಮು ಕಾಶ್ಮೀರಕ್ಕೆ ಕೊಡುಗೆ ನೀಡಲು ಬಯಸುವುದಾಗಿ ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸಭೆಯಲ್ಲಿ ವಿರೋಧ ಪಕ್ಷದ ರಾಷ್ಟ್ರಪತಿ ಅಭ್ಯರ್ಥಿಯಾಗಲು ತಮ್ಮ ಹೆಸರನ್ನು ಪ್ರಸ್ತಾಪಿಸಿರುವುದು ತಮಗೆ ಗೌರವ ತಂದಿದೆ. ಆದರೆ ತಮ್ಮ ಹೆಸರನ್ನು ಹಿಂತೆಗೆದುಕೊಂಡಿರುವ ಬಗ್ಗೆ ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.
ರಾಷ್ಟ್ರಪತಿ ಚುನಾವಣೆ : ಮಮತಾ ಬ್ಯಾನರ್ಜಿ ಸಭೆಯತ್ತ ಎಲ್ಲರ ಚಿತ್ತ
"ಜಮ್ಮು ಮತ್ತು ಕಾಶ್ಮೀರವು ನಿರ್ಣಾಯಕ ಘಟ್ಟವನ್ನು ಹಾದುಹೋಗುತ್ತಿದೆ ಎಂದು ನಾನು ನಂಬುತ್ತೇನೆ. ಈ ಅನಿಶ್ಚಿತ ಸಮಯವನ್ನು ನಿರ್ವಹಿಸುವುದಕ್ಕೆ ನನ್ನ ಪ್ರಯತ್ನ ಅಗತ್ಯವಾಗಿವೆ. ನನ್ನ ಮುಂದೆ ಸಾಕಷ್ಟು ಸಕ್ರಿಯ ರಾಜಕೀಯವಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಕಾರಾತ್ಮಕ ಸೇವೆಯ ಮೂಲಕ ತಮ್ಮದೇ ಆಗಿರುವ ಕೊಡುಗೆ ನೀಡಲು ಎದುರು ನೋಡುತ್ತಿದ್ದೇನೆ," ಎಂದು ಫಾರೂಕ್ ಅಬ್ದುಲ್ಲಾ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.
ರಾಷ್ಟ್ರಪತಿ ಅಭ್ಯರ್ಥಿ ಸ್ಥಾನದಿಂದ ಹಿಂದೆ ಸರಿದ ಫಾರೂಕ್: ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಅಭ್ಯರ್ಥಿ ಆಗುವ ರೇಸ್ನಿಂದ ಫಾರೂಕ್ ಅಬ್ದುಲ್ಲಾ ಹಿಂದೆ ಸರಿದಿದ್ದಾರೆ. "ನಾನು ಗೌರವಯುತವಾಗಿ ನನ್ನ ಹೆಸರನ್ನು ಪರಿಗಣನೆಯಿಂದ ಹಿಂಪಡೆಯಲು ಬಯಸುತ್ತೇನೆ ಮತ್ತು ಜಂಟಿ ವಿರೋಧದ ಒಮ್ಮತದ ಅಭ್ಯರ್ಥಿಯನ್ನು ಬೆಂಬಲಿಸಲು ಎದುರು ನೋಡುತ್ತಿದ್ದೇನೆ," ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಉನ್ನತ ಹುದ್ದೆಗೆ ಸ್ಪರ್ಧಿಸುವ ಪ್ರಸ್ತಾಪವನ್ನು ತಿರಸ್ಕರಿಸಿದ ಕೆಲವೇ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಕೂಡ ಸ್ಪರ್ಧೆಯ ಅಖಾಡದಿಂದ ಹಿಂದೆ ಸರಿದಿದ್ದಾರೆ.
ಪ್ರತಿಪಕ್ಷಗಳ ಪ್ರಸ್ತಾಪ ತಿರಸ್ಕರಿಸಿದ್ದ ಶರದ್ ಪವಾರ್: ಕಳೆದ ಜೂನ್ 15ರಂದು ದೆಹಲಿಯ ಕಾನ್ಸ್ಟಿಟ್ಯೂಶನ್ ಕ್ಲಬ್ ಆಫ್ ಇಂಡಿಯಾದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆದ ಮಹತ್ವದ ಸಭೆ ವೇಳೆ ರಾಷ್ಟ್ರಪತಿ ಚುನಾವಣೆಗೆ ಶರದ್ ಪವಾರ್ ಹೆಸರು ನಾಮನಿರ್ದೇಶನ ಮಾಡುವ ಕುರಿತು ಪ್ರಸ್ತಾಪಿಸಲಾಯಿತು. ಆದರೆ ಎನ್ಸಿಪಿ ಮುಖ್ಯಸ್ಥರು ಈ ಪ್ರಸ್ತಾಪವನ್ನು ನಿರಾಕರಿಸಿದ್ದರು.
"ಭಾರತದ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಿ ನನ್ನ ಹೆಸರನ್ನು ಸೂಚಿಸಿದ್ದಕ್ಕಾಗಿ ವಿರೋಧ ಪಕ್ಷಗಳ ನಾಯಕರನ್ನು ನಾನು ಪ್ರಾಮಾಣಿಕವಾಗಿ ಶ್ಲಾಘಿಸುತ್ತೇನೆ. ಆದರೆ, ನಾನು ಈ ಪ್ರಸ್ತಾಪವನ್ನು ವಿನಮ್ರವಾಗಿ ತಿರಸ್ಕರಿಸಿದ್ದೇನೆ ಎಂದು ಹೇಳಲು ಬಯಸುತ್ತೇನೆ," ಎಂದು ಶರದ್ ಪವಾರ್ ಕೂಡ ಈ ಹಿಂದೆ ಟ್ವೀಟ್ ಮಾಡಿದ್ದರು.
ಜುಲೈ 18ರಂದು ಚುನಾವಣೆ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧಿಕಾರವಧಿಯು ಜುಲೈ 24ರಂದು ಕೊನೆಗೊಳ್ಳಲಿದ್ದು, ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವುದಕ್ಕಾಗಿ ಜುಲೈ 18ರಂದು ಚುನಾವಣೆ ನಡೆಯಲಿದೆ. ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯು ಬುಧವಾರದಿಂದ ಪ್ರಾರಂಭವಾಗಿದೆ.