ರಾಹುಲ್, ಪ್ರಿಯಾಂಕಾ ಜೊತೆಗೆ ಹೆಜ್ಜೆ ಹಾಕಿದ ಹಿರಿಯ ರಾಜಕಾರಣಿ ಫಾರೂಕ್ ಅಬ್ದುಲ್ಲಾ
ನವದೆಹಲಿ, ಜ. 03: ಮಂಗಳವಾರ ಉತ್ತರ ಪ್ರದೇಶಕ್ಕೆ ಕಾಲಿಟ್ಟಿರುವ ಭಾರತ್ ಜೋಡೋ ಯಾತ್ರೆಯನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸ್ವಾಗತಿಸಿದ್ದಾರೆ. 3,000 ಕಿ.ಮೀ ದೂರ ಸಾಗಿರುವ ಈ ಯಾತ್ರೆಗೆ ಹಲವು ವಿರೋಧ ಪಕ್ಷಗಳ ನಾಯಕರು ಬೆಂಬಲ ನೀಡಿದ್ದಾರೆ.
ಉತ್ತರ ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಜೊತೆಗೆ ಹೆಜ್ಜೆ ಹಾಕಿದ್ದಾರೆ.
ನನ್ನ ಸಹೋದರನನ್ನು ಖರೀದಿಸಲು ಅದಾನಿ, ಅಂಬಾನಿಗೆ ಸಾಧ್ಯವಿಲ್ಲ: ಕಾರಣ ಬಿಚ್ಚಿಟ್ಟ ಪ್ರಿಯಾಂಕಾ ಗಾಂಧಿ
ಕ್ರಿಸ್ಮಸ್ ಮತ್ತು ಹೊಸ ವರ್ಷದ ವಿರಾಮದಲ್ಲಿದ್ದ ಭಾರತ್ ಜೋಡೋ ಯಾತ್ರೆ ಮಂಗಳವಾರ ಬೆಳಗ್ಗೆ 10 ಗಂಟೆಗೆ ಕಾಶ್ಮೀರಿ ಗೇಟ್ ಬಳಿಯ ದೆಹಲಿಯ ಮಾರ್ಗಾಟ್ ಹನುಮಾನ್ ಮಂದಿರದಿಂದ ಪುನರಾರಂಭವಾಯಿತು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಸೇರಲು ನೋಯ್ಡಾದಿಂದ ಮಂಗಳವಾರ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಗಾಜಿಯಾಬಾದ್ ತಲುಪಿದ್ದರು. ಸ್ಥಳೀಯ ನಾಯಕ ಪಂಖೂರಿ ಪಾಠಕ್ ನೇತೃತ್ವದಲ್ಲಿ ನೋಯ್ಡಾ ಮತ್ತು ಗೌತಮ್ ಬುದ್ಧ ನಗರ ಜಿಲ್ಲೆಯ ಇತರ ಪ್ರದೇಶಗಳ ಕಾಂಗ್ರೆಸ್ ಕಾರ್ಯಕರ್ತರು ಗಾಜಿಯಾಬಾದ್ನ ಲೋನಿ ಗಡಿಯಲ್ಲಿ ಜಮಾಯಿಸಿದ್ದರು.
ಎನ್ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಶಿವಸೇನಾ (ಉದ್ಧವ್) ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರ ಜೊತೆಗೆ ಹಲವು ವಿರೋಧ ಪಕ್ಷದ ನಾಯಕರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಭಾರತ್ ಜೋಡೋ ಯಾತ್ರೆಯನ್ನು ಸ್ವಾಗತಿಸಿದ ಪ್ರಿಯಾಂಕಾ ಗಾಂಧಿ, ಸರ್ಕಾರವು ರಾಹುಲ್ ಪ್ರತಿಷ್ಠೆಯನ್ನು ಹಾಳುಮಾಡಲು ಪ್ರಯತ್ನಿಸಿದೆ ಎಂದು ಆರೋಪಿಸಿದ್ದಾರೆ.
ಇದಕ್ಕೂ ಮೊದಲು, ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ (RAW) ಮಾಜಿ ಚೀಫ್ ಮತ್ತು ಭಾರತೀಯ ಗುಪ್ತಚರ ಬ್ಯೂರೋದ ಮಾಜಿ ವಿಶೇಷ ನಿರ್ದೇಶಕ ಅಮರ್ಜಿತ್ ಸಿಂಗ್ ದುಲಾತ್ ಅವರು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದರು.
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಉತ್ತರ ಪ್ರದೇಶದ ಪ್ರಮುಖ ವಿಪಕ್ಷ ನಾಯಕರಾದ ಬಿಎಸ್ಪಿಯ ಮಾಯಾವತಿ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರಂತಹ ನಾಯಕರು ಸೋಮವಾರ ಭಾರತ್ ಜೋಡೋ ಯಾತ್ರೆಗೆ ಶುಭ ಹಾರೈಸಿದ್ದಾರೆ. ಆದರೆ ಇಬ್ಬರು ನಾಯಕರು ಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ಅವರಿಗೆ ಆಹ್ವಾನ ಕಳುಹಿಸಿದ ನಂತರ ಶಿವಸೇನೆಯ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಮಂಗಳವಾರ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಪ್ರತಿಪಕ್ಷಗಳು ಒಗ್ಗೂಡಿ ದೇಶದ ಪ್ರಸ್ತುತ ಪರಿಸ್ಥಿತಿಯನ್ನು ಎದುರಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಇನ್ನು, ಯಾತ್ರೆಯಲ್ಲಿ ಭಾರಿ ಜನಸಂದಣಿ ಇದ್ದ ಕಾರಣ ಲೋನಿ ಪ್ರದೇಶದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಸಂಚಾರ ವ್ಯತ್ಯಯವಾಗಿತ್ತು. ಈ ಅವಧಿಯಲ್ಲಿ ಲೋನಿ ಬಾರ್ಡರ್ (ದೆಹಲಿ) ಮತ್ತು ಮಂಡೋಲಾ ಬಾರ್ಡರ್ (ಬಾಗ್ಪತ್) ನಡುವಿನ ಮಾರ್ಗದಲ್ಲಿ ಇ-ರಿಕ್ಷಾಗಳು ಮತ್ತು ಕಾರುಗಳು ಸೇರಿದಂತೆ ಯಾವುದೇ ವಾಹನ ಸಂಚಾರಕ್ಕೂ ಪೊಲೀಸರು ಅನುಮತಿ ನೀಡಿರಲಿಲ್ಲ.