ಗೋವಾಕ್ಕೆ ಹಾರುವ ಮೊದಲು ಅಸ್ಸಾಂ ಪ್ರವಾಹ ಪರಿಹಾರಕ್ಕೆ 51 ಲಕ್ಷ ದೇಣಿಗೆ ಕೊಟ್ಟ ಬಂಡಾಯ ಶಾಸಕರು
ಗುವಾಹಟಿ, ಜೂನ್ 29: ಮಹಾರಾಷ್ಟ್ರ ಬಂಡಾಯ ಶಾಸಕರು ಗುವಾಹಟಿಯಿಂದ ಗೋವಾಕ್ಕೆ ತೆರಳಲು ಸಿದ್ದವಾಗಿದ್ದು, ಅಸ್ಸಾಂ ಪ್ರವಾಹ ಪೀಡಿತರಿಗೆ ನೆರವು ನೀಡುವ ದೃಷ್ಟಿಯಿಂದ 51 ಲಕ್ಷ ರುಪಾಯಿ ದೇಣಿಗೆ ನೀಡುವುದಾಗಿ ಶಿವಸೇನೆ ಬಂಡಾಯ ಶಾಸಕರ ನಾಯಕ ಏಕನಾಥ್ ಶಿಂಧೆ ತಿಳಿಸಿದ್ದಾರೆ.
ತನ್ನದೇ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ ಶಿಂಧೆ ಮತ್ತು ತಂಡ ಮೊದಲು ಗುಜರಾತ್ನ ಹೋಟೆಲ್ ಒಂದರಲ್ಲಿ ಬೀಡು ಬಿಟ್ಟಿತ್ತು, ನಂತರ ಬಿಜೆಪಿ ಆಡಳಿತದ ಮತ್ತೊಂದು ರಾಜ್ಯವಾದ ಅಸ್ಸಾಂ ರಾಜಧಾನಿ ಗುವಾಹಟಿಯ ರಾಡಿಸನ್ ಬ್ಲೂ ಐಷಾರಾಮಿ ಹೋಟೆಲ್ಗೆ ಶಿಫ್ಟ್ ಆಗಿದ್ದರು. ಇಡೀ ಮಹಾರಾಷ್ಟ್ರ ರಾಜಕೀಯದ ಹೈಡ್ರಾಮ ವೇಳೆ ಶಿವಸೇನೆಯ ಹಲವು ಶಾಸಕರು, ಸಚಿವರು ಹೋಟೆಲ್ಗೆ ಸೇರಿಕೊಂಡಿದ್ದರು.
ಪ್ರವಾಹ ಪೀಡಿತ ಅಸ್ಸಾಂನಲ್ಲಿ ಶಾಸಕರು ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಅಸ್ಸಾಂನಲ್ಲಿ ಜನ ಸಾಯುತ್ತಿದ್ದರೆ ಜನಪ್ರತಿನಿಧಿಗಳು ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಬಂಡಾಯ ಶಾಸಕರು ಅನರ್ಹತೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ವಿಚಾರಣೆ ನಂತರ ಗುರುವಾರ 11 ಗಂಟೆಗೆ ಬಹುಮತ ಸಾಬೀತು ಪಡಿಸಲು ಉದ್ದವ್ ಠಾಕ್ರೆಗೆ ರಾಜ್ಯಪಾಲ ಬಿಎಸ್ ಕೋಶ್ಯಾರಿ ಸೂಚನೆ ನೀಡಿದ್ದಾರೆ.
ಜೂನ್ 30ರಂದು ಉದ್ಧವ್ ಠಾಕ್ರೆ ಸರ್ಕಾರಕ್ಕೆ ಅಗ್ನಿ ಪರೀಕ್ಷೆ!
ಗೋವಾದಲ್ಲಿ ವಾಸ್ತವ್ಯ ಹೂಡಲಿರುವ ಬಂಡಾಯ ಶಾಸಕರು
ಗುವಾಹಟಿ ಐಷಾರಾಮಿ ತೊರೆಯಲು ನಿರ್ಧರಿಸಿರುವ ಬಂಡಾಯ ಶಾಸಕರು ಗೋವಾಕ್ಕೆ ಹಾರಲಿದ್ದಾರೆ. ಶಿಂಧೆ ಹೇಳಿರುವಂತೆ ಅವರ ಬೆಂಬಲಕ್ಕೆ 50 ಶಾಸಕರಿದ್ದಾರೆ. ಎಲ್ಲಾ ಶಾಸಕರು ರಾಡಿಸನ್ ಬ್ಲೂ ಹೋಟೆಲ್ ತೊರೆದು ಗೋವಾಗೆ ಚಾರ್ಟರ್ಡ್ ವಿಮಾನದ ಮೂಲಕ ಗೋವಾಕ್ಕೆ ತೆರಳಲಿದ್ದಾರೆ.
ಗೋವಾದ ತಾಜ್ ರೆಸಾರ್ಟ್ ಮತ್ತು ಕನ್ವೆನ್ಷನ್ ಸೆಂಟರ್ನಲ್ಲಿ 70 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.
Breaking: ದೇವೇಂದ್ರ ದೆಹಲಿಗೆ, ಪಿಜಿಪಿ ರಾಜಭವನಕ್ಕೆ ಅಘಾಡಿ ಆಯ್ತ ಲಗಾಡಿ!
ಶಿಂಧೆ ಮತ್ತು ಶಾಸಕರ ಪರವಾಗಿ 51 ಲಕ್ಷ ದೇಣಿಗೆ
ಅಸ್ಸಾಂನ ಬ್ಲೂ ರಾಡಿಸನ್ ಹೋಟೆಲ್ನಲ್ಲಿ ತಂಗಿದ್ದ ವೇಳೆ ಬಂಡಾಯ ಶಾಸಕರ ನಡೆಗೆ ಟೀಕೆ ವ್ಯಕ್ತವಾಗಿತ್ತು. ಪ್ರವಾಹ ಪೀಡಿತ ಪ್ರದೇಶದಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹೋಟೆಲ್ ಎದುರು ಎನ್ಸಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ಅಲ್ಲದೆ ಬಂಡಾಯ ಶಾಸಕರಿಗೆ ಅಸ್ಸಾಂ ಬಿಜೆಪಿ ಸರ್ಕಾರ ಬೆಂಬಲ ನೀಡುತ್ತಿದೆ ಎನ್ನುವ ಆರೋಪ ಕೇಳಿಬಂದಿತ್ತು. ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ವಿರುದ್ಧ ಕೂಡ ಟೀಕೆ ವ್ಯಕ್ತವಾಗಿತ್ತು. ಈಗ ಅಸ್ಸಾಂ ತೊರೆಯುವ ಮುನ್ನ 51 ಲಕ್ಷ ರು. ದೇಣಿಗೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಏಕನಾಥ್ ಶಿಂಧೆ, "ಎಲ್ಲಾ ಶಿವಸೇನೆ ಮತ್ತು ಮಿತ್ರ ಪಕ್ಷಗಳ ಶಾಸಕರ ಪರವಾಗಿ, ಅಸ್ಸಾಂನಲ್ಲಿ ಪ್ರವಾಹ ಪೀಡಿತ ಸಹೋದರರಿಗೆ ಸಹಾಯ ಮಾಡಲು ಅಸ್ಸಾಂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 51 ಲಕ್ಷ ರು. ದೇಣಿಗೆ ನೀಡಲು ನಿರ್ಧರಿಸಲಾಗಿದೆ," ಎಂದು ಟ್ವೀಟ್ ಮಾಡಿದ್ದಾರೆ.
ಟೀಕೆಗಳಿಗೆ ಸಿಎಂ ಹಿಮಂತ್ ಶರ್ಮಾ ಸ್ಪಷ್ಟನೆ
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ್ದು, "ನಾವು ಎಲ್ಲಾ ಪ್ರವಾಸಿಗರನ್ನು ಸ್ವಾಗತಿಸುತ್ತೇವೆ. ಪ್ರವಾಹವನ್ನು ಎದುರಿಸಲು ನಮಗೆ ಹಣ ಬೇಕು" ಎಂದು ಹೇಳಿದರು.
"ರಾಜ್ಯಕ್ಕೆ ಜಿಎಸ್ಟಿ ಮೂಲಕ ಆದಾಯ ಬರುತ್ತದೆ. ನಮ್ಮ ಹೆಚ್ಚಿನ ಹೋಟೆಲ್ಗಳು ಖಾಲಿಯಾಗಿರುವಾಗ ಗ್ರಾಹಕರನ್ನು ಏಕೆ ದೂರವಿಡಬೇಕು?" ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರವಾಹದ ಹೊಡೆತಕ್ಕೆ ನಲುಗಿರುವ ಅಸ್ಸಾಂ
ಕಳೆದ ಒಂದು ವಾರದಿಂದ ಅಸ್ಸಾಂ ಪ್ರವಾಹ, ಭೂಕುಸಿತದಿಂದ ನಲುಗಿಹೋಗಿದೆ. 120ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 50 ಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ.
ಅಸ್ಸಾಂ ಪ್ರವಾಹವು ರಾಷ್ಟ್ರೀಯ ವಿಪತ್ತು ಏಜೆನ್ಸಿಗಳು ಮತ್ತು ಭಾರತೀಯ ವಾಯುಪಡೆಯಿಂದ ದೊಡ್ಡ ಪ್ರಮಾಣದ ಪರಿಹಾರ ಕಾರ್ಯಗಳನ್ನು ನಡೆಸಿವೆ. ಕಳೆದ ಆರು ದಿನಗಳಲ್ಲಿ ಅಸ್ಸಾಂ ಮತ್ತು ಮೇಘಾಲಯಕ್ಕೆ 517 ಟನ್ ಪರಿಹಾರ ಸಾಮಗ್ರಿಗಳನ್ನು ವಿಮಾನದಲ್ಲಿ ರವಾನಿಸಿದೆ.
Recommended Video