ಕಲ್ಲಿದ್ದಲು ಗಣಿಗಾರಿಕೆ ಅವ್ಯವಹಾರ: 4 ರಾಜ್ಯಗಳ 45 ಸ್ಥಳಗಳಲ್ಲಿ ಸಿಬಿಐ ದಾಳಿ
ನವದೆಹಲಿ, ನವೆಂಬರ್ 28: ಅಕ್ರಮ ಗಣಿಗಾರಿಕೆ ಮತ್ತು ಸರ್ಕಾರಿ ಸ್ವಾಮ್ಯದ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ನಿಂದ (ಇಸಿಎಲ್) ಕಲ್ಲಿದ್ದಲು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾಲ್ಕು ರಾಜ್ಯಗಳಲ್ಲಿನ 45 ಸ್ಥಳಗಳ ಮೇಲೆ ಸಿಬಿಐ ಶನಿವಾರ ಬೆಳಿಗ್ಗೆ ಏಕಕಾಲದಲ್ಲಿ ದಾಳಿ ನಡೆಸಿದೆ.
ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ಗಳಲ್ಲಿ ಇಸಿಎಲ್ ಕಾರ್ಯನಿರ್ವಹಿಸುತ್ತದೆ. ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ಕೂಡ ಸಿಬಿಐ ದಾಳಿ ನಡೆಸಿದೆ.
ಶುಕ್ರವಾರ ದಾಖಲಾದ ಎಫ್ಐಆರ್ಗೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಇಸಿಎಲ್ನ ಇಬ್ಬರು ಪ್ರಧಾನ ವ್ಯವಸ್ಥಾಪಕರು, ಇಬ್ಬರು ಇತರೆ ಅಧಿಕಾರಿಗಳು ಮತ್ತು ಮುಖ್ಯ ಭದ್ರತಾ ಅಧಿಕಾರಿ ಹಾಗೂ ಖಾಸಗಿ ವ್ಯಕ್ತಿ ಅನೂಪ್ ಮಾಝಿ ಹೆಸರನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.

ಅನೂಪ್ ಮಾಝಿ ಪಶ್ಚಿಮ ಬಂಗಾಳದಲ್ಲಿ ಮುಖ್ಯವಾಗಿ ನಡೆಯುವ ಅಕ್ರಮ ಕಾರ್ಯಾಚರಣೆಗಳ ಪ್ರಮುಖ ಕಿಂಗ್ ಪಿನ್ ಎನ್ನಲಾಗಿದೆ. ಅನೂಪ್ ಮನೆ ಮತ್ತು ಕಚೇರಿಗಳ ಮೇಲೆ ವ್ಯಾಪಕ ಪರಿಶೀಲನೆ ನಡೆಸಲಾಗಿದ್ದು, ಆತನ ಸಹವರ್ತಿಗಳ ಮನೆ ಮೇಲೂ ದಾಳಿ ನಡೆದಿದೆ.
ಅಸಾನ್ಸೋಲ್, ದುರ್ಗಾಪುರ, ರಾಣಿಗಂಜ್, ಬಿಷ್ಣುಪುರ್ ಮುಂತಾದ ಸ್ಥಳಗಳಲ್ಲಿ ಕೂಡ ದಾಳಿ ನಡೆದಿದೆ. ಲಾಲಾ ಎಂದು ಗುರುತಿಸಿಕೊಳ್ಳುತ್ತಿದ್ದ ಮಾಝಿ, ಬಂಗಾಳ-ಜಾರ್ಖಂಡ್ ಗಡಿಯಲ್ಲಿ ಅಕ್ರಮವಾಗಿ ಕಲ್ಲಿದ್ದಲು ಗಣಿಗಾರಿಕೆ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ.
ಆದಾಯ ತೆರಿಗೆ ಇಲಾಖೆ ಕೂಡ ಆತನ ತನಿಖೆ ಮಾಡುತ್ತಿದ್ದು, ಈ ತಿಂಗಳ ಆರಂಭದಲ್ಲಿ ಆತನಿಗೆ ನೋಟಿಸ್ ನೀಡಿತ್ತು. ಅಮಿತ್ ಶಾ ಅವರ ಎರಡು ದಿನ ಕೋಲ್ಕತಾ ಭೇಟಿ ಸಮಯದಲ್ಲಿಯೇ ಈ ನೋಟಿಸ್ ನೀಡಲಾಗಿತ್ತು. 'ಲಾಲಾ ಮೇಲಿನ ದಾಳಿಗಳಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಏಕೆ ಕಳವಳ ಹೊಂದಿದ್ದಾರೆ?' ಎಂದು ಸುದ್ದಿಗೋಷ್ಠಿಯಲ್ಲಿ ಅಮಿತ್ ಶಾ ಪ್ರಶ್ನಿಸಿದ್ದರು.












Click it and Unblock the Notifications