Caste Census: ಜಾತಿ ಗಣತಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?
ಛತ್ತೀಸ್ಗಢ: ಬಿಹಾರ ಜಾತಿ ಗಣತಿ ವರದಿ ರಿಲೀಸ್ ಮಾಡುತ್ತಿದ್ದಂತೆ, ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಯಾಗಿದೆ. ಒಂದ್ಕಡೆ ವಿಪಕ್ಷ ನಾಯಕರು ಇದೇ ಅಸ್ತ್ರ ಹಿಡಿದು ಎನ್ಡಿಎ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ ಬಿಜೆಪಿ ನಾಯಕರು ಈ ನಡೆ ದೇಶವನ್ನು ವಿಭಜನೆ ಮಾಡುವ ಹುನ್ನಾರ ಎಂದು ಆರೋಪ ಮಾಡುತ್ತಿದ್ದಾರೆ. ಹೀಗೆ ಇಬ್ಬರ ನಡುವಿನ ಜಗಳದ ಮಧ್ಯೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.
ಹೌದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜಾತಿ ಗಣತಿ ಕುರಿತು ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗಗಳ ಜನಗಣತಿ ನಡೆಸಲು ಬಯಸುತ್ತೆ ಇದರಿಂದ ಹಿಂದುಳಿದ ವರ್ಗಗಳ ಸ್ಥಿತಿಗತಿ ತಿಳಿಯಲಿದೆ. ಕಲ್ಯಾಣ ಕಾರ್ಯಕ್ರಮಗಳ ಕೈಗೊಳ್ಳಲು ಸಹಾಯಕ ಎಂದು ಪ್ರತಿಪಾದಿಸಿದ್ದಾರೆ. ಹಾಗೆ ದೇಶವನ್ನ ಇಬ್ಭಾಗಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಆರೋಪದ ಬಗ್ಗೆ ಕೂಡ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಹಾಗೂ ಎನ್ಡಿಎಗೆ ಹೊಸ ಸವಾಲು ಹಾಕಿದ್ದಾರೆ.

ಅವರ ಆಟ ನಡೆಯುವುದಿಲ್ಲ!
2024ರ ಚುನಾವಣೆಯಲ್ಲಿ ಅವರ ಆಟ ನಡೆಯುವುದಿಲ್ಲ. ಜನ ಜಾಗೃತರಾಗಿದ್ದಾರೆ ಎಂದಿರುವ ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ಹಾಗೂ ಎನ್ಡಿಎಗೆ ಹೊಸ ಸವಾಲು ಹಾಕಿದ್ದಾರೆ. ಛತ್ತೀಸ್ಗಢದ ರಾಯಗಢ ಜಿಲ್ಲೆ ಕೋಡಾತರಾಯಿಯಲ್ಲಿ ಕಾಂಗ್ರೆಸ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಖರ್ಗೆ ಅವರು, ಬಿಜೆಪಿ & ಆರೆಸ್ಸೆಸ್ ಮಹಿಳಾ ವಿರೋಧಿ ಸಿದ್ಧಾಂತ ಹೊಂದಿವೆ. ಒಂದೊಮ್ಮೆ ಮಹಿಳೆಯರ ಬಗ್ಗೆ ಕಾಳಜಿ ಇದ್ದರೆ ಹಿಂದುಳಿದ ವರ್ಗಗಳ, ಬಡ ಮಹಿಳೆಯರನ್ನು ಮಹಿಳಾ ಮೀಸಲಾತಿ ಮಸೂದೆ ಅಡಿಯಲ್ಲಿ ತರಲಿ ಎಂದು ಇದೇ ವೇಳೆ ಸವಾಲು ಹಾಕಿದರು.
ಮಹಿಳೆಯರ ಬೆಳವಣಿಗೆ ಅವರಿಗೆ ಬೇಕಿಲ್ಲ!
ಅಲ್ಲದೆ ಮಹಿಳಾ ಮೀಸಲಾತಿ ಮಸೂದೆಗೆ ಕಾಂಗ್ರೆಸ್ ವಿರೋಧಿಸಿತ್ತು ಎಂದು ಬಿಜೆಪಿ ಹೇಳುತ್ತಿದೆ. ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲು ಸಂವಿಧಾನ ತಿದ್ದುಪಡಿ ತಂದವರು ಯಾರು? ಎಂದು ಪ್ರಶ್ನೆ ಹಾಕುವ ಮೂಲಕ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಹಿಂದಿನ ಜನಸಂಘ, ಬಿಜೆಪಿ ಅಥವಾ ಆರೆಸ್ಸೆಸ್ ಸಿದ್ಧಾಂತಗಳು ಮಹಿಳಾ ವಿರೋಧಿಯೇ ಆಗಿವೆ. ಮಹಿಳೆಯರ ಬೆಳವಣಿಗೆ ಅವರಿಗೆ ಬೇಕಿಲ್ಲ ಎನ್ನುವ ಮೂಲಕ ಬಿಜೆಪಿ ಮತ್ತು ಎನ್ಡಿಎ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ ಎಐಸಿಸಿ ಅಧ್ಯಕ್ಷರು.

ಬಿಹಾರ ಸರ್ಕಾರದ ನಡೆಯಿಂದ ಸಂಚಲನ!
ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು ದೇಶದಲ್ಲಿ ಮೊದಲ ಬಾರಿಗೆ ಜಾತಿ ಗಣತಿ ಸಮೀಕ್ಷೆ ವರದಿ ಬಿಡುಗಡೆ ಮಾಡಿದೆ. ಬಿಹಾರದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 36ರಷ್ಟು ಅತ್ಯಂತ ಹಿಂದುಳಿದ ಸಮುದಾಯದ ಜನರಿದ್ದಾರೆ. ಇನ್ನು ಶೇಕಡಾ 27ರಷ್ಟು ಹಿಂದುಳಿದ ವರ್ಗದ ಸಮುದಾಯ ಇದೆ. ಶೇ.19.7ರಷ್ಟು ಜನ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ್ದು, ಶೇ. 1.7ರಷ್ಟು ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಇದ್ದಾರೆ. ಬಿಹಾರ ಒಟ್ಟು ಜನಸಂಖ್ಯೆ 13.1 ಕೋಟಿಯಾಗಿದ್ದು, ಈ ಪೈಕಿ ಶೇಕಡಾ 15.5ರಷ್ಟು ಜನ ಸಾಮಾನ್ಯ ವರ್ಗಕ್ಕೆ ಸೇರಿದವರಿದ್ದಾರೆ ಎಂದಿದೆ ಬಿಹಾರ ಜಾತಿ ಗಣತಿ ವರದಿ. ಹೀಗಾಗಿ ರಾಷ್ಟ್ರ ರಾಜಕೀಯದಲ್ಲಿ ಇದೀಗ ಸಂಚಲನ ಸೃಷ್ಟಿಯಾಗಿದೆ.
ಕರ್ನಾಟಕದಲ್ಲೂ ಸಿದ್ಧವಾಗಿದೆ ಜಾತಿ ಗಣತಿ
2015ರಲ್ಲಿ ಜಾತಿ ಜನಗಣತಿ ವರದಿ ಸೋರಿಕೆ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಈ ವರದಿಯನ್ನ ಇಟ್ಟುಕೊಂಡೇ ವಿಪಕ್ಷಗಳು ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದವು. 2013ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಾತಿ ಜನಗಣತಿ ಶುರು ಆಗಿತ್ತು. ಇದನ್ನು 2015ರ ಏಪ್ರಿಲ್-ಮೇ ತಿಂಗಳಲ್ಲಿ ನಡೆಸಲಾಗಿತ್ತು. ಅಲ್ಲದೆ 162 ಕೋಟಿ ರೂಪಾಯಿ ಜಾತಿ ಗಣತಿಗೆ ಖರ್ಚಾಗಿತ್ತು. ಇಷ್ಟೆಲ್ಲಾ ಖರ್ಚು ಮಾಡಿ ಸಿದ್ಧಗೊಳಿಸಿದ್ದ ವರದಿ ಮಾತ್ರ 8 ವರ್ಷವಾದ್ರೂ ಹೊರಬಿದ್ದಿಲ್ಲ. ಈ ಸಮಯದಲ್ಲೇ ಬಿಹಾರ ಜಾತಿ ಗಣತಿ ಹೊರಬಿದ್ದಿದ್ದು, ಕರ್ನಾಟಕದಲ್ಲೂ ಜಾತಿ ಗಣತಿಯ ವರದಿ ಬಿಡುಗಡೆ ಆಗುತ್ತಾ? ಎಂಬ ಕುತೂಹಲ ಹೆಚ್ಚಾಗಿದೆ.












Click it and Unblock the Notifications