ದಾಳಿ ಮುಂದುವರಿಸಿ, ನಾನಿದ್ದೇನೆ: ಐಟಿ ಅಧಿಕಾರಿಗಳಿಗೆ ಮೋದಿ ಅಭಯ
ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಅಪರೂಪಕ್ಕೆ ಎನ್ನುವಂತೆ, ಆದಾಯ ತೆರಿಗೆ ಅಧಿಕಾರಿಗಳ ಜೊತೆ ನೇರ ಸಂಪರ್ಕ ಪಡೆದುಕೊಂಡಿರುವ ಪ್ರಧಾನಿ ಮೋದಿ, ರೈಡ್ ನಡೆಸಿ.. ನಾನಿದ್ದೇನೆ ಎಂದು ಅಭಯ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನವದೆಹಲಿ, ಡಿ 2: ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಅಪರೂಪಕ್ಕೆ ಎನ್ನುವಂತೆ, ಆದಾಯ ತೆರಿಗೆ ಅಧಿಕಾರಿಗಳ ಜೊತೆ ನೇರ ಸಂಪರ್ಕ ಪಡೆದುಕೊಂಡಿರುವ ಪ್ರಧಾನಿ ಮೋದಿ, ರೈಡ್ ನಡೆಸಿ.. ನಾನಿದ್ದೇನೆ ಎಂದು ಅಭಯ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಐನೂರು, ಸಾವಿರ ರೂಪಾಯಿ ನೋಟನ್ನು ನಿಷೇಧಗೊಳಿಸಿದ ನಂತರ, ರಂಗೋಲಿ ಕೆಳಗೆ ನುಗ್ಗುವ ಅಧಿಕಾರಿಗಳನ್ನು ಹೆಡೆಮುರಿ ಕಟ್ಟಿ ಎಂದು ಆದಾಯ ತೆರಿಗೆ ಇಲಾಖೆಗೆ ಮೋದಿ ಫರ್ಮಾನು ಹೊರಡಿಸಿದ್ದಾರೆ. (500 ನೋಟು ಚಲಾವಣೆಗೆ ಡಿಸೆಂಬರ್ 2 ಕೊನೆ ದಿನ)
ನಾನು ಮತ್ತು ನನ್ನ ಸರಕಾರ ನಿಮ್ಮ ಜೊತೆಗಿದ್ದೇವೆ, ಭಯ ಪಡಬೇಡಿ, ದಾಳಿ ಮುಂದುವರಿಸಿ ಎಂದು ಮೋದಿ, ಆದಾಯ ತೆರಿಗೆ ಇಲಾಖೆಗೆ ಅಭಯಹಸ್ತ ನೀಡಿದ್ದಾರೆಂದು ಟಿವಿ ಮಾಧ್ಯಮಗಳು ವರದಿ ಮಾಡುತ್ತಿವೆ.
ಇದರ ಮಧ್ಯೆ, ಕಾನೂನು ಪಾಲಿಸಬೇಕಾದ ಸಾರ್ವಜನಿಕ ವಲಯದ 27 ಬ್ಯಾಂಕ್ ಅಧಿಕಾರಿಗಳನ್ನು ಹಣಕಾಸು ಸಚಿವಾಲಯ ಅಮಾನತುಗೊಳಿಸಿದೆ. ನಿಯಮವನ್ನು ಉಲ್ಲಂಘಿಸಿ ಹಣವನ್ನು ವರ್ಗಾವಣೆ ಮಾಡಿದ ಆರೋಪ ಈ ಅಧಿಕಾರಿಗಳ ಮೇಲಿದೆ.
ದೇಶಾದ್ಯಂತ ನಡೆಯುತ್ತಿರುವ ಐಟಿ ಅಧಿಕಾರಿಗಳ ಮೇಲೆ ದಾಳಿಯ ವೇಳೆ, ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳು ಸರಕಾರಿ ಮತ್ತು ಪ್ರಭಾವಿಗಳ ಮನೆ/ಕಚೇರಿಯಲ್ಲಿ ಪತ್ತೆಯಾದ ನಂತರ, ಪ್ರಧಾನಿ ಮೋದಿ ಈಗ ಆಖಾಡಕ್ಕಿಳಿದಿದ್ದಾರೆ.
ಐಟಿ ಅಧಿಕಾರಿಗಳು ದೇಶದ ಹಲವೆಡೆ ದಾಳಿ ನಡೆಸಿ ಹೊಸ ನೋಟುಗಳನ್ನು ಪತ್ತೆ ಮಾಡಿದಾಗ, ಕೆಲವೊಂದು ಬ್ಯಾಂಕ್ ಅಧಿಕಾರಿಗಳೇ ಈ ದಂಧೆಯಲ್ಲಿ ಶಾಮೀಲಾಗಿರುವ ವಿಚಾರ ಬೆಳಕಿಗೆ ಬಂದ ನಂತರ ಮೋದಿ ನೇರವಾಗಿ ಆದಾಯ ತೆರಿಗೆ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ.
ಎಟಿಎಂ ಮತ್ತು ಬ್ಯಾಂಕುಗಳಲ್ಲಿ ಪ್ರಾಮಾಣಿಕ ಹಣಕಾಸು ವ್ಯವಹಾರಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಲು ಕೇಂದ್ರ ಸರಕಾರ ಹಗಲು ರಾತ್ರಿ ಕೆಲಸ ಮಾಡುತ್ತಿದೆ.
ಕಾನೂನ ಬಾಹಿರವಾಗಿ ನಡೆದುಕೊಂಡು, ಅಕ್ರಮ ವ್ಯವಹಾರಗಳಲ್ಲಿ ಭಾಗಿಯಾದರೆ ಕಠಿಣ ಕ್ರಮ ಎದುರಿಸಿ ಎಂದು ಕೇಂದ್ರ ಸರ್ಕಾರ ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.