ನೋಟಿನಾಗೆ ಚಾಟಿ ಬೀಸಿ, ಮಲ್ಲಿಕಾಗೆ ಏಟು ಬಿದ್ದು, ಖರ್ಗೆ ಸಿಟ್ಟು ಮಾಡ್ಕೊಂಡು
ಇಡೀ ದೇಶದಲ್ಲಿ ನೋಟಿನ ಸದ್ದು. ಎರಡು ಸಾವಿರ ರುಪಾಯಿ ನೋಟು ನೋಡಿದಾಗಲೂ ಜನರ ಮುಖದ ಮೇಲೆ ನಗೆಯಿಲ್ಲ. ಹತ್ತು, ಇಪ್ಪತ್ತು, ಐವತ್ತು, ನೂರು ರುಪಾಯಿ ನೋಟು ನೋಡಿದವರ ಕಣ್ಣಲ್ಲಿ ಫಳಾರನೆ ಬೆಳಕು. ಸಿನಿಮಾಗಳಾಲ್ಲಿ ನೋಡಿದ್ದ ದೃಶ್ಯಗಳನ್ನು ಹೀಗೆ ಕಣ್ಣೆದುರು ನೋಡಬಹುದು ಎಂಬ ಕಲ್ಪನೆ ಕೂಡ ಇರಲಿಲ್ಲ. ಆದರೆ ಈಗ ನೋಡುವಂತಾಗಿದೆ.
ಮಲ್ಲಿಕಾ ಶೆರಾವತ್ ನೇ ದೋಚುವುದಕ್ಕೆ ಪ್ರಯತ್ನಿಸಿದ್ದಾರೆ ಫ್ರಾನ್ಸ್ ನಲ್ಲಿ. ನಮ್ಮ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೋಟು ರದ್ದು ವಿಚಾರದ ಬಗ್ಗೆ ಅಸಾಧ್ಯ ಸಿಟ್ಟಿದೆ. ನವೆಂಬರ್ ಹತ್ತೊಂಬತ್ತಕ್ಕೆ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರದು ನೂರನೇ ಜನ್ಮದಿನದ ಸಂಭ್ರಮ.[ವಾರಾಂತ್ಯಕ್ಕೆ ಮನಮುದಗೊಳಿಸುವ ವಿಶೇಷ ಲೇಖನಗಳ ಗುಚ್ಛ]
ಕಪ್ಪು ಹಣ ಬದಲಿಸುವಾಗ ಸಿಕ್ಕಿಬಿದ್ದ ಖದೀಮರನ್ನು ಕೋರ್ಟ್ ಮುಂದೆ ನಿಲ್ಲಿಸಿದ್ದಾರೆ ಪೊಲೀಸರು. ಅಂದಹಾಗೆ ಆ ಮೊತ್ತ ಎಷ್ಟು ಗೊತ್ತಾ? ಬರೋಬ್ಬರಿ ಮೂರು ಕೋಟಿ ರುಪಾಯಿ. ಒಟ್ಟಿನಲ್ಲಿ ದೇಶವಾಸಿಗಳು ಒಂದೊಂದು ರೀತಿ ಕಷ್ಟದಲ್ಲಿದ್ದಾರೆ. ಎಲ್ಲೆಲೂ ಜನರು. ಆ ರೀತಿ ಜನಜಂಗುಳಿ ಇದ್ದರೆ ಆ ದೃಶ್ಯ ಒಂದೋ ಎಟಿಎಂದಾಗಿರಬೇಕು ಅಥವಾ ಬ್ಯಾಂಕ್ ನದಾಗಿರಬೇಕು. ಇವೆರಡು ಅಲ್ಲದಿದ್ದರೆ ಖಂಡಿತಾ ಪ್ರತಿಭಟನೆಯೇ.
ಬಿಸಿ ತಂದ ನೋಟು ಹಾಗೂ ಐಸ್ ಕ್ರೀಮು
ದಣಿವು ಎಲ್ಲರಿಗೂ ಒಂದೇ. ಆದರೆ ಆ ಸಂದರ್ಭದಲ್ಲಿ ಅಯ್ಯೋ ಎನ್ನುವ ಜೀವ ಹಾಗೂ ಆ ಕ್ಷಣಕ್ಕೆ ದೊರಕಿಸಬಹುದಾದ ಸಹಾಯಕ್ಕೆ ಕೈ ಚಾಚಬೇಕು ಅಲ್ಲವೆ? ಶುಕ್ರವಾರ ಅಹಮದಾಬಾದ್ ನಲ್ಲಿ ಬ್ಯಾಂಕ್ ಎದುರು ತಮ್ಮ ನೋಟು ಬದಲಿಸಿಕೊಳ್ಳಲು ನಿಂತವರಿಗೆ ಐಸ್ ಕ್ರೀಂ ಕೊಟ್ಟಿದ್ದಾರೆ. ಹೊಡೀರಿ ಚಪ್ಪಾಳೆ.
ಇಂದಿರಾ ಶತಮಾನ
ವಿಪಕ್ಷಗಳಿಂದ ದುರ್ಗೆ ಎಂದು ಕರೆಸಿಕೊಂಡ ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರ ನೂರನೇ ಜನ್ಮದಿನಾಚರಣೆ ನವೆಂಬರ್ 19ಕ್ಕೆ. ಅದಕ್ಕೆ ಒಂದು ದಿನ ಮೊದಲು ಅಂದರೆ ಶುಕ್ರವಾರ ಅವರ ಪುತ್ಥಳಿಗೆ ನೀರು ಹಾಕಿ, ಸ್ವಚ್ಛಗೊಳಿಸುತ್ತಿರುವ ಕಾರ್ಮಿಕ ಕಂಡುಬಂದಿದ್ದು ಅಲಹಾಬಾದ್ ನಲ್ಲಿ.
ಮಲ್ಲಿಕಾರ್ಜುನ ಕೋಪ-ತಾಪ
ಅದೇನು ಚಳಿಗಾಲದ ಸಂಸತ್ ಅಧಿವೇಶನವೋ ಐದು ರುಪಾಯಿಯ ಒಂದು ನೋಟನ್ನು ಕಂಡರೂ ಹೊತ್ತು ಉರಿಯುವ ಸಿಟ್ಟು ಪ್ರದರ್ಶಿಸುತ್ತಿವೆ ವಿಪಕ್ಷಗಳು. ಅಧಿವೇಶನದಲ್ಲಿ ರೋಷಾವೇಶದ ಮಾತಿನ ವೇಳೆ ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆ ಕ್ಯಾಮೆರಾ ಕಣ್ಣಲ್ಲಿ ಕಂಡಿದ್ದು ಹೀಗೆ.
ಮಲ್ಲಿಕಾ ಮನಮೋಹಕ
ಇದು ಮಲ್ಲಿಕಾ ಶೆರಾವತ್ ಳ ಸಂಗ್ರಹ ಚಿತ್ರ. ಈಚೆಗೆ ಪ್ಯಾರಿಸ್ ನಲ್ಲಿ ಆಕೆ ಮೇಲೆ ಹಲ್ಲೆಯಾಗಿದೆ. ಫ್ರಾನ್ಸ್ ನ ಜನ ನಿಬಿಡ ಪ್ರದೇಶದಲ್ಲಿ ಆಕೆಯನ್ನು ದೋಚಲು ಯತ್ನಿಸಿದ್ದಾರೆ. ಈ ಸುದ್ದಿ ಕೇಳಿ ವಿಶ್ವದಾದ್ಯಂತ ಇರುವ ಮಲ್ಲಿಕಾ ಶೆರಾವತ್ ಅಭಿಮಾನಿಗಳ ಸಂಘ ಎಷ್ಟು ನೊಂದಿತೋ ಏನೋ?
ಮೊಬೈಲ್ ವ್ಯಾನ್ ಬ್ಯಾಂಕಿಂಗ್
ಬ್ಯಾಂಕ್, ಎಟಿಎಂಗಳು ಮುಗಿದು, ಇದೀಗ ಮೊಬೈಲ್ ವ್ಯಾನ್ ಗಳತ್ತ ಜನರು ನಡೆದು ಬರುತ್ತಿದ್ದಾರೆ. ಇನ್ನ್ಯಾಕೆ ಬರ್ತಾರೆ ಹೇಳಿ, ಅದೇ ನೋಟು ಬವಣೆ, ಕ್ಷಮಿಸಿ ನೊಟು ಬದಲಾವಣೆಗೆ. ಅಹಮದಾಬಾದ್ ನಲ್ಲಿ ಅಂಥದ್ದೇ ಮೊಬೈಲ್ ವ್ಯಾನ್ ನ ಎದುರು ಮಹಿಳೆಯೊಬ್ಬರು ನೋಟು ಬದಲಾವಣೆ ಸಾಲಿನಲ್ಲಿ.
ಕಪ್ಪು ಖದೀಮರು
ಸೀಸನ್ ವ್ಯವಹಾರ ಅಂತಾರಲ್ಲ, ಅಂದರೆ ಮಾವಿನ ಕಾಲದಲ್ಲಿ ಮಾವು, ಅವರೆಕಾಯಿ ಕಾಲದಲ್ಲಿ ಅವರೇಕಾಯಿ. ಹಾಗೆ ಈಗ ಕಪ್ಪುಹಣ ಬದಲಾವಣೆ ಕಾಲ. ಮೂರು ಕೋಟಿ ರುಪಾಯಿ ಕಪ್ಪು ಹಣವನ್ನು ಬದಲಿಸಲು ಯತ್ನಿಸುತ್ತಿದ್ದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿ, ಮುಂಬೈನ ಬಾಂದ್ರಾ ಕೋರ್ಟ್ ಮುಂದೆ ನಿಲ್ಲಿಸೋಕು ಮುಂಚಿನ ಚಿತ್ರವಿದು.
ಇವು ನಕಲಿ ನೋಟು
ನವದೆಹಲಿಯಲ್ಲಿ ನೋಟು ರದ್ದು ಮಾಡಿದ ಕೇಂದ್ರ ಸರಕಾರದ ವಿರುದ್ಧ ಶುಕ್ರವಾರ ದೊಡ್ಡ ಪ್ರತಿಭಟನೆ ನಡೆಯಿತು. ಯುವ ಕಾಂಗ್ರೆಸ್ ಕಾರ್ಯಕರ್ತ ಸಿಟ್ಟಿನಿಂದ 500, 1000 ರುಪಾಯಿ ನಕಲಿ ನೋಟುಗಳನ್ನು ಪ್ರದರ್ಶಿಸಿದ ಬಗೆ ಇದು.