ಬಡ ಎಚ್ಐವಿ ರೋಗಿಗಳಿಗೆ ಉಚಿತ ಆಹಾರ, ಚಿಕಿತ್ಸೆ ನೀಡಲು ದೆಹಲಿ ಹೈಕೋರ್ಟ್ ಆದೇಶ
ನವದೆಹಲಿ, ಜ. 03: ಬಡತನ ರೇಖೆಗಿಂತ ಕೆಳಗಿರುವ ಎಚ್ಐವಿ ಪೀಡಿತ ವ್ಯಕ್ತಿಗಳಿಗೆ ಉಚಿತ ಆಹಾರ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ನೀಡುವಂತೆ ದೆಹಲಿ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಎಚ್ಐವಿ ಪೀಡಿತ ರೋಗಿಗಳ ಕುಂದುಕೊರತೆಗಳ ಬಗೆಗಿನ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ದೆಹಲಿ ಹೈಕೋರ್ಟ್ ಸ್ಥಳೀಯ ಸರ್ಕಾರಕ್ಕೆ ತಿಳಿಸಿದೆ.
World Aids Day 2022: ವಿಶ್ವ ಏಡ್ಸ್ ದಿನದ ಆಚರಣೆ, ಮಹತ್ವ, ಇತಿಹಾಸದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ
ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ಪೀಠವು ಎಚ್ಐವಿ ಪಾಸಿಟಿವ್ ರೋಗಿಗಳಿಗೆ ನೆರವು ಮತ್ತು ಸಹಾಯವನ್ನು ಒದಗಿಸಲು ದೆಹಲಿ ಸರ್ಕಾರವು ಕೈಗೆಟುಕುವ ದರದಲ್ಲಿ ಚಿಕಿತ್ಸೆ ಸೇರಿದಂತೆ ಹಲವಾರು ಪುನರ್ವಸತಿ ಯೋಜನೆಗಳು ಮತ್ತು ಕ್ರಮಗಳನ್ನು ಜಾರಿಗೆ ತಂದಿದೆ ಎಂಬುದನ್ನು ಗಮನಿಸಿದೆ ಎಂದು ತಿಳಿಸಿದೆ.
ದೆಹಲಿ ಸರ್ಕಾರವು ಏಡ್ಸ್ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯಿದೆ, 2017 ರ ಅಡಿಯಲ್ಲಿ ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದಿರುವ ನ್ಯಾಯಪೀಠವು, ಬಡತನ ರೇಖೆಗಿಂತ ಕೆಳಗಿರುವ ಸೋಂಕಿತರಿಗೆ ಉಚಿತ ಆಹಾರ ಮತ್ತು ಚಿಕಿತ್ಸೆ ನೀಡಬೇಕು ಎಂದಿದೆ.
"2017 ರ ಕಾಯಿದೆಯ ಶಾಸನಬದ್ಧ ನಿಬಂಧನೆಗಳ ಅಡಿಯಲ್ಲಿ ಸರ್ಕಾರ ಕಟ್ಟುನಿಟ್ಟಾದ ಕ್ರಮಗಳನ್ನು ತರಗರದುಕೊಳ್ಳುತ್ತಿದೆ ಎಂಬುದು ಹೇರಳವಾಗಿ ಸ್ಪಷ್ಟವಾಗಿದೆ. ಇದಲ್ಲದೆ, ಎಚ್ಐವಿ, ಏಡ್ಸ್ ಪೀಡಿತ ವ್ಯಕ್ತಿಗಳಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ಲಭ್ಯವಾಗುವಂತೆ ಮಾಡಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ. ಹಾಗೆ ಮಾಡಲು ಹಣಕಾಸಿನ ಸಾಮರ್ಥ್ಯ ಕೂಡ ಇದೆ" ಎಂದು ಹೈಕೋರ್ಟ್ ಪೀಠವು ಆದೇಶದಲ್ಲಿ ತಿಳಿಸಿದೆ.
" ಜೊತೆಗೆ 2017 ರ ಕಾಯಿದೆಯಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಎಚ್ಐವಿ ಪಾಸಿಟಿವ್ ವ್ಯಕ್ತಿಗಳಿಗೆ ಉಚಿತ ಆಹಾರ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರಕ್ಕೆ ನಿರ್ದೇಶಿಸಲಾಗಿದೆ. ಈ ಸೋಂಕಿತರು ಬಡತನ ರೇಖೆಗಿಂತ ಕೆಳಗಿರುವ ಕಾರಣ ಅವರಿಗೆ ಆಹಾರ ಮತ್ತು ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ" ಎಂದು ಕಾಳಜಿ ವ್ಯಕ್ತಪಡಿಸಿದೆ.
ಎಚ್ಐವಿ, ಏಡ್ಸ್ ಸೋಂಕಿಗೆ ಒಳಗಾಗಿ ಬಳಲುತ್ತಿರುವವರಿಗೆ ವಸತಿ, ಆಹಾರ, ವೈದ್ಯಕೀಯ ನೆರವು ಇತ್ಯಾದಿಗಳನ್ನು ಒದಗಿಸಲು ದೆಹಲಿ ಸರ್ಕಾರ ಮತ್ತು ಕೇಂದ್ರಕ್ಕೆ ನಿರ್ದೇಶನ ನಿಡುವಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಲೆ ಪೀಠ ಈ ಆದೇಶ ನೀಡಿದೆ.
ಕೇಂದ್ರದ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ ತಾಂತ್ರಿಕ ಮತ್ತು ಆರ್ಥಿಕ ಬೆಂಬಲದ ಅಡಿಯಲ್ಲಿ ದೆಹಲಿ ರಾಜ್ಯ ಏಡ್ಸ್ ಸೊಸೈಟಿಯು 1998 ರಿಂದ ರಾಜಧಾನಿಯಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ ಎಂದು ದೆಹಲಿ ಸರ್ಕಾರವು ಉತ್ತರ ಸಲ್ಲಿಸಿದೆ.