ದೀಪಾವಳಿಗೆ ಸಿಹಿಸುದ್ದಿ: ಮುಖಕ್ಕೆ ಮಾಸ್ಕ್ ಹಾಕಿದ್ರೇನು, ಬಿಟ್ರೇನು, ದಂಡ ಕಟ್ಟಬೇಕಾಗಿಲ್ಲ!
ನವದೆಹಲಿ, ಅಕ್ಟೋಬರ್ 20: ದೀಪಾವಳಿ ಹೊಸ್ತಿಲಿನಲ್ಲಿ ಸಾರ್ವಜನಿಕರಿಗೆ ದೆಹಲಿ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದೆ. ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಇಳಿಮುಖವಾದ ಹಿನ್ನೆಲೆ ಸಾಂಕ್ರಾಮಿಕ ಕಾಯ್ದೆಯಡಿಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವ ನಿಯಮವನ್ನು ವಿಸ್ತರಿಸುವುದಿಲ್ಲ ಎಂದು ಹೇಳಿದೆ.
ಕಳೆದ ಸೆಪ್ಟೆಂಬರ್ 30ರವರಗೂ ವಿಸ್ತರಣೆಯಾಗಿದ್ದ ಕಡ್ಡಾಯ ಮಾಸ್ಕ್ ನಿಯಮವನ್ನು ವಾಪಸ್ ತೆಗೆದುಕೊಳ್ಳುವುದಾಗಿ ಸರ್ಕಾರವು ಸ್ಪಷ್ಟಪಡಿಸಿದೆ. ಮಾಸ್ಕ್ ಧರಿಸದ ಕಾರಣಕ್ಕೆ 500 ರೂಪಾಯಿ ದಂಡವನ್ನು ಪಾವತಿ ಮಾಡಬೇಕಾಗಿಲ್ಲ ಎಂದು ತಿಳಿಸಿದೆ. ಈ ಹಿಂದೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ದರೆ 500 ರೂಪಾಯಿ ದಂಡವನ್ನು ವಿಧಿಸಲಾಗುತ್ತಿತ್ತು.
ದೆಹಲಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದ ಸಾರ್ವಜನಿಕರಿಗೆ 500 ರೂಪಾಯಿ ದಂಡ ವಿಧಿಸುವ ನಿಬಂಧನೆಯನ್ನು ಹಿಂಪಡೆಯಲಾಗಿದೆ. ಆದಾಗ್ಯೂ, ಕಿಕ್ಕಿರಿದ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಾ ಸಾರ್ವಜನಿಕರಿಗೆ ಮಾಸ್ಕ್ ಧರಿಸಲು ಸೂಚಿಸಲಾಗಿದೆ ಎಂದು ದೆಹಲಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಏಪ್ರಿಲ್ನಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದ್ದ ಸರ್ಕಾರ
ಕಳೆದ ಏಪ್ರಿಲ್ನಲ್ಲಿ ಕೋವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿತ್ತು. ಈ ಹಿನ್ನೆಲೆ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು, ಈ ನಿಯಮ ಉಲ್ಲಂಘಿಸಿದರೆ 500 ರೂಪಾಯಿ ದಂಡವನ್ನು ವಿಧಿಸಲಾಗಿತ್ತು. ಆದಾಗ್ಯೂ, ಕಳೆದ ತಿಂಗಳು ನಡೆದ ಸಭೆಯಲ್ಲಿ ಮುಂಬರುವ ಹಬ್ಬಗಳನ್ನು ಗಮನದಲ್ಲಿ ಇಟ್ಟುಕೊಂಡು ಸೆಪ್ಟೆಂಬರ್ 30ರ ನಂತರ ಮಾಸ್ಕ್ ಅನ್ನು ಧರಿಸುವುದನ್ನು ನಿಲ್ಲಿಸಲು ನಿರ್ಧರಿಸಿದ್ದರು.

ಕೋವಿಡ್-19 ಹೊಸ ತಳಿಗಳ ಕುರಿತು ಜಾಗೃತಿ
ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಇಳಿಮುಖವಾಗಿದೆ. ಆದರೆ ಓಮಿಕ್ರಾನ್ ರೂಪಾಂತರಕ್ಕೆ ಸಂಬಂಧಿಸಿದ ಹೊಸ ತಳಿಗಳು ವರದಿ ಆಗುತ್ತಿರುವುದು ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ. ಹೀಗಾಗಿ ದೆಹಲಿಯ AIIMS ಮಾಜಿ ನಿರ್ದೇಶಕ ಡಾ ರಣದೀಪ್ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ. ಸಾಮಾನ್ಯ ಜನರು ಕೋವಿಡ್-19 ನಿಯಮಗಳ ಪಾಲನೆ ಮೇಲೆ ಹೆಚ್ಚು ನಿಗಾ ವಹಿಸುವಂತೆ ಒತ್ತಾಯಿಸಿದ್ದಾರೆ.

ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಗುಲೇರಿಯಾ ಸಲಹೆ
"ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಓಮಿಕ್ರಾನ್ ರೂಪಾಂತರಿಗೆ ಸಂಬಂಧಿಸಿದ ಹೊಸ ತಳಿಗಳು ಪತ್ತೆಯಾಗುತ್ತಿವೆ. ಹೀಗಾಗಿ ಜನರು ಹೊರಗೆ ಹೋಗುವ ಸಂದರ್ಭಗಳಲ್ಲಿ, ಅದರಲ್ಲೂ ಜನನಿಬಿಡ ಪ್ರದೇಶಗಳಿಗೆ ತೆರಳುವ ವೇಳೆಯಲ್ಲಿ ಕಡ್ಡಾಯವಾಗಿ ಮಾಸ್ಕ್ ಅನ್ನು ಧರಿಸಬೇಕು ಎಂದು ನಾನು ಸಲಹೆ ನೀಡುತ್ತೇನೆ. ಈ ಹಂತದಲ್ಲಿ ವಯಸ್ಕರು ಹೆಚ್ಚಾಗಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಏಕೆಂದರೆ ಹೊಸ ತಳಿಗಳಿಂದ ವಯಸ್ಕರು ಹೆಚ್ಚು ಅಪಾಯವನ್ನು ಎದುರಿಸಬಹುದು," ಎಂದು AIIMS ಮಾಜಿ ನಿರ್ದೇಶಕ ಡಾ ರಣದೀಪ್ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ.

ಜನರಿಗೆ ಕೋವಿಡ್-19 ಬಗ್ಗೆ ಮುನ್ನೆಚ್ಚರಿಕೆ ಏಕಿಲ್ಲ?
ಈ ಮೊದಲು ಕೊರೊನಾವೈರಸ್ ಕಾಣಿಸಿಕೊಂಡ ಸಂದರ್ಭದಲ್ಲಿ ಜನರು ಸಾಕಷ್ಟು ಮುನ್ನೆಚ್ಚರಿಕೆ ಅನ್ನು ತೆಗೆದುಕೊಳ್ಳುತ್ತಿದ್ದರು. ಆಗ ಯಾವುದೇ ಲಸಿಕೆಗಳು ಇರಲಿಲ್ಲ. ಈಗ ಜನರು ಕೋವಿಡ್-19 ಲಸಿಕೆ ಅನ್ನು ಪಡೆದುಕೊಂಡಿದ್ದಾರೆ, ಆದರೆ ಮುನ್ನೆಚ್ಚರಿಕೆ ವಹಿಸುವುದನ್ನೇ ಮರೆತು ಬಿಟ್ಟಿದ್ದಾರೆ. ಇದರ ಮಧ್ಯ ಹಬ್ಬದ ಸೀಸನ್ ಬರುತ್ತಿರುವಾಗ ಜನರು ಹೆಚ್ಚಾಗಿ ಮಾರುಕಟ್ಟೆಗಳಲ್ಲಿ ಸೇರುತ್ತಾರೆ. ಇಂಥ ಸಂದರ್ಭದಲ್ಲಿ ಸೋಂಕು ಹರಡುವ ಅಪಾಯ ಹೆಚ್ಚಾಗಿರುತ್ತದೆ ಎಂದು ವಿವರಿಸಿದ್ದಾರೆ.












Click it and Unblock the Notifications