Get Updates
Get notified of breaking news, exclusive insights, and must-see stories!

Delhi Election 2025 Exit Poll: ಸಮೀಕ್ಷೆಗಳಂತೆ ಎಎಪಿ ದೆಹಲಿ ಅಧಿಕಾರ ಕಳೆದುಕೊಂಡ್ರೆ ಕಾರಣ ಯಾರು?

ನವದೆಹಲಿ, ಫೆಬ್ರವರಿ 06: ಬಹಳ ದಿನಗಳಿಂದ ಕಾಯುತ್ತಿದ್ದ ಮತ್ತು ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದ ದೆಹಲಿ ವಿಧಾನಸಭಾ ಚುನಾವಣೆ ಮುಗಿದಿದೆ. ಜತೆಗೆ ಚುನಾವಣೋತ್ತರ ಸಮೀಕ್ಷೆಗಳು ಹೊರಬಂದಿವೆ. ಆದರೆ ಸಮೀಕ್ಷೆಗಳು ಏನೇ ಹೇಳಿದರೂ ಫಲಿತಾಂಶ ಬರುವ ತನಕ ಕಾಯಲೇ ಬೇಕಾಗಿದೆ. ಅದುವೇ ಅಂತಿಮವಾಗಲಿದೆ. ಈ ಬಾರಿಯ ದೆಹಲಿ ಚುನಾವಣೆ ಹತ್ತು ಹಲವು ಕಾರಣಗಳಿಗೆ ಗಮನಾರ್ಹವಾಗಿದೆ. ಹೀಗಾಗಿಯೇ ಕೇವಲ ದೆಹಲಿಯ ಜನರು ಮಾತ್ರವಲ್ಲದೆ ಇಡೀ ದೇಶದ ಜನ ಕುತೂಹಲದಿಂದ ಕಾಯುತ್ತಿದ್ದಾರೆ.

ಬುಧವಾರ(ಫೆ.5) ಚುನಾವಣೆ ನಡೆದಿದ್ದು, ಕಳೆದ ಬಾರಿಗೆ ಹೋಲಿಸಿದರೆ ಶೇಕಡವಾರು ಮತದಾನ ಕಡಿಮೆಯೇ ಆಗಿದೆ. ಈ ಬಾರಿ ಶೇ.60ರಷ್ಟು ಮತದಾನವಾಗಿದ್ದು, ಮತದಾರರು ಯಾರಿಗೆ ಜೈ ಎಂದಿದ್ದಾರೆ ಎನ್ನುವುದು ರಹಸ್ಯವಾಗಿ ಉಳಿದಿದೆ. ಆದರೆ ಸಮೀಕ್ಷೆಗಳ ಪ್ರಕಾರ ಎಎಪಿಗೆ ಮುಳುಗು ನೀರು ತಂದಿರುವ ಬಿಜೆಪಿ ಅಧಿಕಾರ ಹಿಡಿಯುತ್ತದೆ ಎಂಬುದಾಗಿ ಹೇಳಲಾಗುತ್ತಿದೆಯಾದರೂ ಇತ್ತೀಚೆಗಿನ ಚುನಾವಣೆಗಳಲ್ಲಿ ಸಮೀಕ್ಷೆಗಳು ವಿಫಲವಾಗಿರುವುದರಿಂದ ಇದನ್ನು ಒಪ್ಪಿಕೊಳ್ಳಲು ರಾಜಕೀಯ ನಾಯಕರು ಸುತರಾಂ ತಯಾರಿಲ್ಲ.

Delhi Elections 2025 Impact of Voter Sentiment and Corruption Allegations

ಕಳೆದ ಎರಡು ಅವಧಿಯನ್ನು ಮುಗಿಸಿ ಮೂರನೇ ಅವಧಿಗೆ ರಾಷ್ಟ್ರದ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ನೇತೃತ್ವದ ಎನ್ ಡಿಎಗೆ ಬಹಳಷ್ಟು ರಾಜ್ಯಗಳಲ್ಲಿ ಆಡಳಿತ ನಡೆಸುವ ಅಧಿಕಾರ ಸಿಕ್ಕಿದರೂ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಅಧಿಕಾರ ಪಡೆಯಲು ಸಾಧ್ಯವಾಗಿಲ್ಲ ಎಂಬ ಕೊರಗಂತು ಇದ್ದೇ ಇದೆ. ಎಲ್ಲವನ್ನು ಗೆದ್ದಿರುವ ನರೇಂದ್ರಮೋದಿ ತಮ್ಮ ಅಧಿಕಾರವಧಿಯಲ್ಲಿ ದೆಹಲಿ ಗದ್ದುಗೆಯನ್ನು ಗೆಲ್ಲದೆ ಹೋದರೆ ಅವರ ಇದುವರೆಗಿನ ರಾಜಕೀಯಕ್ಕೊಂದು ಕಪ್ಪು ಚುಕ್ಕೆಯಾಗಿ ಉಳಿದು ಬಿಡಬಹುದು. ಹೀಗಾಗಿಯೇ ದೆಹಲಿ ವಿಧಾನಸಭಾ ಕ್ಷೇತ್ರವನ್ನು ಗೆಲ್ಲಲೇ ಬೇಕೆಂಬ ಹಠಕ್ಕೆ ಅವರು ಬಿದ್ದಿದ್ದರು.

ಭ್ರಷ್ಟಾಚಾರದ ಸಂಕೋಲೆಯಲ್ಲಿ ಎಎಪಿ

ಇನ್ನು ಎರಡು ಅವಧಿಯನ್ನು ಮುಗಿಸಿ ಮೂರನೇ ಅವಧಿಗೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷವೂ ಭರ್ಜರಿಯಾಗಿಯೇ ಎಂಟ್ರಿ ಕೊಟ್ಟಿತ್ತು. ಎರಡ್ಮೂರು ತಿಂಗಳ ಹಿಂದೆಯೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಲ್ಲದೆ, ಚುನಾವಣಾ ತಂತ್ರಗಳನ್ನು ಹೇಗೆಲ್ಲ ಬಳಸಬಹುದೋ ಅದೆಲ್ಲವನ್ನು ಬಳಸಲಾರಂಭಿಸಿತ್ತು. ಆದರೆ ಈ ಬಾರಿ ಭ್ರಷ್ಟಾಚಾರದ ವಿರುದ್ಧವಾಗಿ ಮಾತನಾಡುವ ಅರ್ಹತೆಯನ್ನು ಎಎಪಿ ಉಳಿಸಿಕೊಂಡಿರಲಿಲ್ಲ. ಹೀಗಾಗಿ ಬೇರೆ, ಬೇರೆ ವಿಚಾರಗಳನ್ನು ಮುಂದಿಟ್ಟುಕೊಂಡು, ಇಲ್ಲಸಲ್ಲದ ಆರೋಪ, ಪ್ರತ್ಯಾರೋಪಗಳನ್ನು ಮಾಡಿಕೊಂಡು ಚುನಾವಣೆಗೆ ಹೋಗುವಂತಾಗಿತ್ತು.

Delhi Elections 2025 Impact of Voter Sentiment and Corruption Allegations

ಈ ಬಾರಿ ಭ್ರಷ್ಟಾಚಾರದ ಆರೋಪಗಳು ಕೇಜ್ರಿವಾಲ್ ಸೇರಿದಂತೆ ಸಂಪುಟದ ಸಚಿವರ ಮೇಲೆ ಸುತ್ತಿಕೊಂಡಿತ್ತಲ್ಲದೆ, ಭ್ರಷ್ಟಾಚಾರದ ಆರೋಪದಲ್ಲಿ ಜೈಲಿಗೂ ಹೋಗಿ ಬಂದಿದ್ದರು. ಅಷ್ಟೇ ಅಲ್ಲದೆ ಕೇಜ್ರಿವಾಲ್ ರಾಜೀನಾಮೆ ನೀಡಿರುವುದು ಎಲ್ಲವೂ ಎಎಪಿಯನ್ನು ಇಷ್ಟಪಟ್ಟು ಬೆಂಬಲಿಸಿದ ಮತದಾರರಿಗೆ ಮರೀಚಿಕೆಯಾಗಿತ್ತು. ಭ್ರಷ್ಟಾಚಾರದ ವಿರುದ್ಧದ ಹೋರಾಟದ ವೇದಿಕೆಯಿಂದ ಉದಯಗೊಂಡ ಪಕ್ಷ ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗುತ್ತದೆ ಎನ್ನುವುದಾದರೆ ಅದನ್ನು ಸಹಿಸಿಕೊಳ್ಳುವುದು ಕಷ್ಟವೇ.. ರಾಜಕೀಯವಾಗಿ ಮಾತನಾಡುತ್ತಾ ರಾಜಕೀಯ ದ್ವೇಷಕ್ಕೆ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಲಾಯಿತು ಎಂದು ಎಎಪಿ ನಾಯಕರು ಬಡಬಡಿಸಬಹುದಷ್ಟೆ.

ಕೈನಾಯಕರ ಆಲೋಚನೆಗಳೇ ಬೇರೆಯಾಗಿತ್ತು!

ಚುನಾವಣಾ ಸಮಯದಲ್ಲಿ ಎಎಪಿ ಪಕ್ಷದ ಮತ್ತು ಅದರ ಸಂಸ್ಥಾಪಕ ಕೇಜ್ರಿವಾಲ್ ವಿರುದ್ಧ ಬಿಜೆಪಿ ಮಾತ್ರ ಆರೋಪ ಮಾಡಿದ್ದರೆ ಅದನ್ನು ರಾಜಕೀಯ ಪ್ರೇರಿತ ಅಥವಾ ರಾಜಕೀಯ ದ್ವೇಷ ಎಂದೇ ಹೇಳಬಹುದಿತ್ತೇನೋ ಆದರೆ ಕಾಂಗ್ರೆಸ್ ಕೂಡ ಕೇಜ್ರಿವಾಲ್ ಸರ್ಕಾರದ ಭ್ರಷ್ಟಾಚಾರವನ್ನೇ ಪ್ರತಿ ಚುನಾವಣಾ ಪ್ರಚಾರಗಳಲ್ಲಿ ಹೇಳುತ್ತಾ ಬಂದಿತ್ತು. ಒಂದು ವೇಳೆ ಸಮೀಕ್ಷೆಗಳು ಹೇಳಿದಂತೆಯೇ ಎಎಪಿಗೆ ಸೋಲಾದರೆ ಅದಕ್ಕೆ ಮುಖ್ಯ ಕಾರಣವಾಗುವುದು ಬಿಜೆಪಿ ಅಂತು ಅಲ್ಲವೇ ಅಲ್ಲ ಅದು ಕಾಂಗ್ರೆಸ್ ಆಗಿರುತ್ತದೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.

Delhi Elections 2025 Impact of Voter Sentiment and Corruption Allegations

ಕಾಂಗ್ರೆಸ್ ನಾಯಕರಿಗೂ ತಾವು ಹೆಚ್ಚಿನ ಸ್ಥಾನ ಗೆಲ್ಲುವುದಿಲ್ಲ ಎನ್ನುವುದು ಗೊತ್ತಿಲ್ಲದ ವಿಚಾರವೇನಲ್ಲ. ಒಂದು ವೇಳೆ ಅತಂತ್ರ ಸ್ಥಿತಿ ನಿರ್ಮಾಣವಾದರೆ ಎಎಪಿಗೆ ತಮ್ಮ ಅಗತ್ಯತೆ ಅನಿವಾರ್ಯವಾಗುತ್ತದೆ. ಆಗ ರಾಜಕೀಯ ದ್ವೇಷ ಮರೆತು ಒಂದಾಗಿ ಸರ್ಕಾರ ರಚನೆಯ ಉದ್ದೇಶವೂ ಇಲ್ಲದಿಲ್ಲ. ಸಮೀಕ್ಷೆಗಳನ್ನು ಗಮನಿಸಿದರೆ ಅದಕ್ಕೆ ಅವಕಾಶವೇ ಇಲ್ಲ ಎನ್ನುವುದು ಗೊತ್ತಾಗುತ್ತದೆ. ಒಂದು ರಾಜಕೀಯ ಪಕ್ಷ ದೀರ್ಘಕಾಲದ ತನಕ ಜನಪ್ರಿಯತೆಯನ್ನು ಉಳಿಸಿಕೊಂಡು ಹೋಗುವುದು ಸುಲಭವೇನಲ್ಲ. ಅದರಲ್ಲೂ ಉಚಿತ ಭಾಗ್ಯಗಳ ಮೂಲಕ ಅಧಿಕಾರ ಹಿಡಿದ ಪಕ್ಷವೊಂದು ಅಷ್ಟಕ್ಕೇ ಸೀಮಿತವಾದರೆ ಅದರ ಪರಿಣಾಮಗಳು ಬೇರೆಯದ್ದೇ ಆಗಿರುತ್ತದೆ.

ಕೇಜ್ರಿಗೆ ಮಗ್ಗುಲ ಮುಳ್ಳಾದ್ರಾ ರಾಹುಲ್ ಗಾಂಧಿ

ಇವತ್ತು ಕೇಜ್ರಿವಾಲ್ ಏನು ಘೋಷಣೆ ಮಾಡಿದರೋ ಅದಕ್ಕಿಂತ ಹೆಚ್ಚಿದನ್ನು ಬಿಜೆಪಿ ಕಾಂಗ್ರೆಸ್ ಘೋಷಣೆ ಮಾಡಿವೆ. ಹೀಗಿರುವಾಗ ಮತದಾರರು ತಮಗೆಷ್ಟು ಲಾಭವಿದೆ ಎಂಬುದನ್ನು ಗಮನಿಸಿಯೇ ಗಮನಿಸಿರುತ್ತಾನೆ. ಹೀಗಾಗಿ ಪಕ್ಷ ಮರೆತು ತನ್ನ ಹಿತದ ಬಗ್ಗೆ ಚಿಂತಿಸಿದ್ದರೂ ಅಚ್ಚರಿಯಿಲ್ಲ. ಎನ್ ಡಿಎ ಅರ್ಥಾತ್ ನರೇಂದ್ರಮೋದಿಯನ್ನು ಮಣಿಸಲೇ ಬೇಕೆಂದು ರಾಹುಲ್ ಗಾಂಧಿ, ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಶರದ್ ಪವಾರ್ ಸೇರಿದಂತೆ ಹತ್ತಾರು ಘಟಾನುಘಟಿ ನಾಯಕರು ಮತ್ತು ಪ್ರಾದೇಶಿಕ ಪಕ್ಷಗಳಿಂದ ಹುಟ್ಟಿಕೊಂಡ ಐಎನ್ ಡಿಐಎ ಮೂಲಕ ದೆಹಲಿಯಲ್ಲಿ ಚುನಾವಣೆ ನಡೆಸಿದ್ದರೆ ಬಹುಶಃ ಅದರ ಫಲಿತಾಂಶವೇ ಬೇರೆಯಾಗಿರುತ್ತಿತ್ತೇನೋ?

ಆದರೆ ವಿಧಾನಸಭಾ ಚುನಾವಣೆಗೂ ಇಂಡಿ ಒಕ್ಕೂಟವನ್ನು ಎಳೆದು ತಂದರೆ ತಮ್ಮ ಅಸ್ಥಿತ್ವಕ್ಕೆ ಧಕ್ಕೆಯಾಗಬಹುದು ಎಂಬ ಭಯ ಕೇಜ್ರಿವಾಲ್ ಅವರಿಗಿತ್ತು. ಅದಕ್ಕಾಗಿಯೇ ಅವರು ಪ್ರತ್ಯೇಕವಾಗಿ ಚುನಾವಣೆಗೆ ಹೋದರು. ಕಾಂಗ್ರೆಸ್ ಬಿಜೆಪಿಯನ್ನಷ್ಟೆ ಟಾರ್ಗೆಟ್ ಮಾಡುತ್ತದೆ ಎಂದು ಕೇಜ್ರಿವಾಲ್ ಅಂದುಕೊಂಡಿದ್ದರು. ಆದರೆ ಕಾಂಗ್ರೆಸ್ ಬಿಜೆಪಿಗಿಂತ ಹೆಚ್ಚಾಗಿ ಕೇಜ್ರಿವಾಲ್ ಅವರನ್ನೇ ಹೋದಲ್ಲಿ ಬಂದಲ್ಲಿ ಜಾಡಿಸಿದ್ದರು. ಹೀಗಾಗಿ ಕೇಜ್ರಿವಾಲ್ ಎರಡು ರಾಷ್ಟ್ರೀಯ ಪಕ್ಷಗಳನ್ನು ಎದುರಿಸಿಕೊಂಡು ಚುನಾವಣೆಯನ್ನು ಎದುರಿಸಬೇಕಾಯಿತು.

ಒಂದು ಕಾಲದಲ್ಲಿ ಕಾಂಗ್ರೆಸ್ ನ್ನು ಬೆಂಬಲಿಸುತ್ತಿದ್ದವರು ಮತ್ತು ಬಿಜೆಪಿಯನ್ನು ದ್ವೇಷಿಸುತ್ತಿದ್ದವರು. ಕಾಂಗ್ರೆಸ್ ಪ್ರಾಬಲ್ಯವಿಲ್ಲದ ಕ್ಷೇತ್ರಗಳಲ್ಲಿ ಅನಿವಾರ್ಯವಾಗಿ ಎಎಪಿಯ ಕೈಹಿಡಿದ್ದರು. ಆದರೆ ಈ ಬಾರಿ ಮತ್ತೆ ಕಾಂಗ್ರೆಸ್ ಕಡೆಗೆ ಮುಖಮಾಡಿರುವುದು ಎಎಪಿಗೆ ಶಾಕ್ ನೀಡಿದೆ. ಅದು ನಿಜನಾ ಎಂಬುದು ಗೊತ್ತಾಗಬೇಕಾದರೆ ಫೆ.8 ಫಲಿತಾಂಶದ ತನಕ ಕಾಯಲೇ ಬೇಕಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+