Delhi Election Result 2025: ಎಎಪಿಗೆ ಕೈ ಹಿಡಿಯದ 'ಗ್ಯಾರಂಟಿ': 27 ವರ್ಷದ ಬಳಿಕ ಬಿಜೆಪಿ ಅಧಿಕಾರಕ್ಕೆ?
ನವದೆಹಲಿ, ಫೆಬ್ರವರಿ 08: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುಣಾವಣೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆಡಳಿತರೂಢ ಎಎಪಿ ಸತತ ಮೂರನೇ ಬಾರಿಗೆ ಅಧಿಕಾರ ಹಿಡಯುವ ಕನಸು ಕಾಣುತ್ತಿದ್ದು, ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದೆ. ಬರೋಬ್ಬರಿ 27 ವರ್ಷಗಳ ಕಾಲ ಅಧಿಕಾರದಿಂದ ದೂರ ಉಳಿದಿದ್ದ ಬಿಜೆಪಿಯೂ ಈ ಬಾರೀ ಅಧಿಕಾರದ ಗದ್ದುಗೆ ಏರಲು ಹವಣಿಸುತ್ತಿದ್ದರೆ, ಕೈ ಪಡೆಯೂ ಸಹ ಜಯ ನಮ್ಮದೆ ಎನ್ನುವ ಲೆಕ್ಕಾಚಾರವನ್ನ ಹಾಕಿಕೊಂಡಿದೆ.
ಕಳೆದ ಎರಡು ಬಾರಿ ದೆಹಲಿಯಲ್ಲಿ ಅಧಿಕಾರದ ಗದ್ದುಗೆ ಹಿಡಿದಿದ್ದ ಅರವಿಂದ್ ಕೇಜ್ರಿವಾಲ್ ಅವರು ಮೂರನೇ ಬಾರಿಗೂ ಅಧಿಕಾರ ಹಿಡಿಯುವ ಕನಸು ಕಂಡಿದ್ದು, ದೆಹಲಿ ಜನತೆಗೆ ಈ ಬಾರಿಯೂ ಸಹ ಬರೋಬ್ಬರಿ ಗ್ಯಾರಂಟಿ ಯೋಜನೆಗಳನ್ನ ಎಎಪಿ ಪಕ್ಷ ನೀಡಿದೆ. ದೆಹಲಿಯಲ್ಲಿ ಈ ಹಿಂದಿನ ಸಬ್ಸಿಡಿ ಮತ್ತು ಉಚಿತ ಯೋಜನೆಗಳು ಮುಂದೆಯೂ ಇರಲಿವೆ ಎಂದು ಆಪ್ ಹೇಳಿದ್ದು, ಮಹಿಳೆಯರಿಗೆ ಮಾಸಿಕ 2,100 ರೂಪಾಯಿ ಸಹಾಯಧನ, 60 ವರ್ಷ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆ, ಅರ್ಚಕರಿಗೆ ತಿಂಗಳಿಗೆ 18,000 ರೂಪಾಯಿ ಗೌರವಧನ ಮತ್ತು ಉನ್ನತ ಶಿಕ್ಷಣ ಪಡೆಯಲು ಬಯಸುವ ದಲಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ 24x7 ನೀರು ಪೂರೈಸುವ ವಾಗ್ದಾನವನ್ನ ಎಎಪಿ ನೀಡಿದೆ.

ದಿಲ್ಲಿ ವಿಧಾನಸಭೆ ಚುನಾವಣೆಗೆ ಮೂರೂ ಪಕ್ಷಗಳು ಉಚಿತ ಘೋಷಣೆಗಳನ್ನು ಮಾಡಿದ್ದು, ಕಾಂಗ್ರೆಸ್ ಸಹ ಕರ್ನಾಟಕ ಮಾದರಿಯಲ್ಲಿಯೇ ದೆಹಲಿಯಲ್ಲಿಯೂ ಗ್ಯಾರಂಟಿ ಯೋಜನೆಗಳನ್ನ ಘೋಷಣೆ ಮಾಡಿದೆ. 25 ಲಕ್ಷ ರೂ.ವರೆಗೆ ಆರೋಗ್ಯ ವಿಮೆ ಮತ್ತು ಮಹಿಳೆಯರಿಗೆ ಮಾಸಿಕ 2,500 ರೂಪಾಯಿ ಸಹಾಯಧನ ಸೇರಿದಂತೆ ಆರು ಕೊಡುಗೆಗಳನ್ನು ಕಾಂಗ್ರೆಸ್ ಘೋಷಿಸಿತ್ತು. ಇನ್ನು ಬಿಜೆಪಿಯೂ ಸಹ 300 ಯೂನಿಟ್ವರೆಗೆ ಉಚಿತ ವಿದ್ಯುತ್ ಸೇರಿದಂತೆ ಹಲವು ಭರವಸೆಯನ್ನ ನೀಡಿದೆ.
2015 ಹಾಗೂ 2020 ರ ಅವಧಿಯಲ್ಲಿನ ಚುನಾವಣೆಗೂ ಎಎಪಿ ಭರ್ಜರಿ ಗ್ಯಾರಂಟಿಗಳನ್ನ ನೀಡುವ ಮೂಲಕ ದೆಹಲಿ ಜನತೆಯ ಮನಗೆದಿದ್ರು. ಆದರೆ, 2025 ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಮಾತ್ರವಲ್ಲದೇ ಬಿಜೆಪಿ ಹಾಗೂ ಕಾಂಗ್ರೆಸ್ ಸಹ ಗ್ಯಾರಂಟಿ ಅಸ್ತ್ರವನ್ನ ಪ್ರಯೋಗ ಮಾಡಿದೆ. ಅಲ್ಲದೇ ಸಾಲು ಸಾಲು ಗ್ಯಾರಂಟಿಗಳನ್ನ ಕೊಟ್ಟ ಎಎಪಿ ಪಕ್ಷವನ್ನ ಈ ಬಾರಿ ದೆಹಲಿ ಜನತೆ ಕೈ ಹಿಡಿಯುವುದಿಲ್ಲ ಎಂದು ಹಲವು ಸಮೀಕ್ಷೆಗಳಿಂದ ತಿಳಿದು ಬಂದಿದೆ. ಇನ್ನೂ ಅಬಕಾರಿ ಹಗರಣ, ಶೀಷ್ಮಹಲ್ ಬಂಗಲೆ ವಿವಾದ, ಕೇಜ್ರಿವಾಲ್, ಸಿಸೋಡಿಯಾ ಸೇರಿದಂತೆ ಸಚಿವರ ವಿರುದ್ಧ ಸಾಲು ಸಾಲು ಭ್ರಷ್ಟಾಚಾರ ಆರೋಪಗಳು ಆಪ್ಗೆ ಹಿನ್ನಡೆ ತರಬಹುದು ಎಂದು ಹೇಳಲಾಗಿದೆ.
ದೆಹಲಿಯಲ್ಲಿ ಕಳೆದ 27 ವರ್ಷದ ಬಳಿಕ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಎಎಪಿ ಸಂಚಾಲಕ ಹಾಗೂ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕನಸು ಈ ಬಾರಿ ಭಗ್ನಗೊಳ್ಳಲಿದೆ. ಕಾಂಗ್ರೆಸ್ ಮತ್ತೊಮ್ಮೆ ಹೀನಾಯ ಸೋಲು ಅನುಭವಿಸಲಿದೆ ಎಂದು ಸಮೀಕ್ಷೆಗಳು ಅಂದಾಜಿಸಿದ್ದು, 27 ವರ್ಷದ ಬಳಿಕ ದೆಹಲಯಲ್ಲಿ ಬಿಜೆಪಿ ಅಧಿಕಾರಕ್ಕೇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮತಗಟ್ಟೆ ಸಮೀಕ್ಷೆಗಳು ದಿಲ್ಲಿ ವಿಧಾನಸಭೆಯಲ್ಲಿ 27 ವರ್ಷದ ಬಳಿಕ ಬಿಜೆಪಿ ಮರಳಿ ಅಧಿಕಾರ ಹಿಡಿಯಲಿದೆ ಎಂದು ಭವಿಷ್ಯ ನುಡಿದಿವೆ. ಇತ್ತ ಕಾಂಗ್ರೆಸ್ ಮತ್ತೊಮ್ಮೆ ಹೀನಾಯ ಸೋಲು ಅನುಭವಿಸಲಿದೆ ಎಂದು ಸಮೀಕ್ಷೆಗಳು ಅಂದಾಜಿಸಿವೆ. ಕಳೆದ ಎರಡು ವಿಧಾನಸಭೆ ಚುನಾವಣೆಯಲ್ಲಿ ಎರಡಂಕಿ ದಾಟಲು ವಿಫಲವಾಗಿದ್ದ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಅನಿರೀಕ್ಷಿತ ಯಶಸ್ಸು ದಾಖಲಿಸಲಿದೆ ಎಂಬುದು ಸಮೀಕ್ಷೆಗಳಿಂದ ತಿಳಿದು ಬಂದಿದೆ. 13ಕ್ಕೂ ಹೆಚ್ಚು ಮತಗಟ್ಟೆ ಸಮೀಕ್ಷೆಗಳಲ್ಲಿ ಬಿಜೆಪಿ 35 ರಿಂದ 60 ಸ್ಥಾನಗಳವರೆಗೆ ಗೆಲ್ಲಬಹುದು ಎಂದು ಅಂದಾಜು ಮಾಡಲಾಗಿದೆ. ಹೀಗಾಗಿ ಈ ಬಾರಿ ಬಿಜೆಪಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಇನ್ನೂ ಎಎಪಿ 40 ರಿಂದ 49 ಸ್ಥಾನ ಗೆದ್ದುಕೊಂಡು ಮರಳಿ ಅಧಿಕಾರ ಹಿಡಿಯಲಿದೆ ಎಂದು ಎರಡು ಸಮೀಕ್ಷೆಗಳು ಮಾತ್ರ ಭವಿಷ್ಯ ನುಡಿದಿವೆ. ಇನ್ನೂ ಬಹುತೇಕ ಸಮೀಕ್ಷೆಗಳಲ್ಲಿ ಕಾಂಗ್ರೆಸ್ 0 ಯಿಂದ 2 ಸ್ಥಾನ ಗೆಲ್ಲಬಹುದು ಎಂದು ಹೇಳಿವೆ. ಒಟ್ಟಾರೆ ಪೋಲ್ ಆಫ್ ಪೋಲ್ ಪ್ರಕಾರ ಬಿಜೆಪಿ 43, ಆಪ್ 26, ಕಾಂಗ್ರೆಸ್ 01 ಸ್ಥಾನ ಗೆಲ್ಲಬಹುದು ಎಂದು ಅಂದಾಜು ಮಾಡಲಾಗಿದೆ. 70 ಸದಸ್ಯ ಬಲದ ದಿಲ್ಲಿ ವಿಧಾನಸಭೆಯಲ್ಲಿ ಬಹುಮತಕ್ಕೆ 36 ಸ್ಥಾನಗಳು ಅಗತ್ಯವಾಗಿದ್ದು,
70 ಸದಸ್ಯ ಬಲದ ದಿಲ್ಲಿ ವಿಧಾನಸಭೆಯಲ್ಲಿ ಬಹುಮತಕ್ಕೆ 36 ಸ್ಥಾನಗಳು ಅಗತ್ಯವಾಗಿದ್ದು, 36 ಅಥವಾ ಅದಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಜಯ ಗಳಿಸುವ ಪಕ್ಷ ಅಥವಾ ಮೈತ್ರಿಕೂಟ ಅಧಿಕಾರಕ್ಕೇರಲಿದೆ. ಇನ್ನು ಮತಗಟ್ಟೆ ಸಮೀಕ್ಷೆಗಳು ಪ್ರತಿ ಬಾರಿಯೂ ನಿಜವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಹೀಗಾಗಿ ಇಂದು ಚುನಾವಣಾ ಫಲಿತಾಂಶ ಏನಾಗುತ್ತದೆ. ಯಾವ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂಬುದನ್ನ ಕಾದು ನೋಡ್ಬೇಕಾಗಿದೆ.












Click it and Unblock the Notifications