ಕೊನೆಗೂ ಕೂಡಿ ಬಂತು ದೆಹಲಿ-ಆಶ್ರಮ ಮೇಲ್ಸೇತುವೆ ಉದ್ಘಾಟನೆಯ ಸಮಯ: ಇಂದು ಸಿಎಂ ಅರವಿಂದ್ ಕೇಜ್ರಿವಾಲ್ ಉದ್ಘಾಟನೆ
ದೆಹಲಿ-ಆಶ್ರಮ ಮೇಲ್ಸೇತುವೆಯನ್ನು ಇಂದು ಅರವಿಂದ್ ಕೇಜ್ರಿವಾಲ್ ಉದ್ಘಾಟನೆ ಮಾಡಲಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ ಮಾರ್ಚ್ 6: ಬಹು ನಿರೀಕ್ಷಿತ ದೆಹಲಿಯ ಆಶ್ರಮ ಮೇಲ್ಸೇತುವೆ ವಿಸ್ತರಣಾ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಅದರ ಉದ್ಘಾಟನೆ ಇಂದು ನಡೆಯಲಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮೇಲ್ಸೇತುವೆಯನ್ನು ಉದ್ಘಾಟಿಸಲಿದ್ದಾರೆ. ಇದನ್ನು ಫೆಬ್ರವರಿ 28 ರಂದು ಉದ್ಘಾಟನೆ ಮಾಡಬೇಕಾಗಿತ್ತು. ಆದರೆ ಅದನ್ನು ಮುಂದೂಡಲಾಯಿತು. ಹೊಸದಾಗಿ ನೇಮಕಗೊಂಡಿರುವ ಪಿಡಬ್ಲ್ಯುಡಿ ಸಚಿವ ಕೈಲಾಶ್ ಗಹ್ಲೋಟ್ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿಯವರು ಮೇಲ್ಸೇತುವೆಯನ್ನು ಉದ್ಘಾಟಿಸಲಿದ್ದಾರೆ.
ಆಗಿನ ಪಿಡಬ್ಲ್ಯುಡಿ ಹಾಗೂ ಸಚಿವ ಮನೀಶ್ ಸಿಸೋಡಿಯಾ ಅವರ ಬಂಧನದಿಂದಾಗಿ ಮೇಲ್ಸೇತುವೆ ಉದ್ಘಾಟನಾ ಕಾರ್ಯ ವಿಳಂಬವಾಗಿತ್ತು. ಆದರೆ ಮುಖ್ಯಮಂತ್ರಿ ಕೇಜ್ರಿವಾಲ್ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೆಲವು ಬಾಕಿ ಉಳಿದಿರುವ ಕಾರಣ ಮೇಲ್ಸೇತುವೆ ಉದ್ಘಾಟಿಸಲಾಗಿಲ್ಲ ಎಂದು ಹೇಳಿದರು. ಜೊತೆಗೆ ಸೋಮವಾರ ಉದ್ಘಾಟನೆಯಾಗುವ ಸಾಧ್ಯತೆ ಇದೆ. ಮುಂದೂಡಿಕೆಗೆ ಸಿಸೋಡಿಯಾ ಬಂಧನ ಕಾರಣವಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದರು.

ಸಿಸೋಡಿಯಾ ಅವರ ರಾಜೀನಾಮೆಯ ನಂತರ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಹೆಚ್ಚುವರಿ ಉಸ್ತುವಾರಿ ವಹಿಸಿಕೊಂಡಿರುವ ಕೈಲಾಶ್ ಗಹ್ಲೋಟ್ ಅವರು ಇಂದು ಫ್ಲೈಓವರ್ ವಿಸ್ತರಣೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಪ್ರಸ್ತುತ ಡಿಎನ್ಡಿ ಲೂಪ್ನಿಂದ ಆಶ್ರಮ ಛೇದನದವರೆಗೆ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಕಿಲೋಕರಿಯಿಂದ ರಿಂಗ್ ರೋಡ್ಗೆ 150 ಮೀಟರ್ ದೂರದಲ್ಲಿ ವಾಹನಗಳು ಈಗ ರಸ್ತೆ ದಾಟಲು ದೀರ್ಘ ಮಾರ್ಗವನ್ನು ತೆಗೆದುಕೊಳ್ಳಬೇಕಾಗಿದೆ. ಆದರೀಗ ಚಾಲಕರು ಮಹಾರಾಣಿ ಬಾಗ್ ಅಥವಾ ದಕ್ಷಿಣ ದೆಹಲಿಯನ್ನು ತಲುಪಲು ಯು-ಟರ್ನ್ ತೆಗೆದುಕೊಳ್ಳುವ ಮೂಲಕ ರಸ್ತೆ ದಾಟಲು ಸಾಧ್ಯವಾಗುತ್ತದೆ.

ಅದೇ ರೀತಿ ಮಹಾರಾಣಿ ಬಾಗ್ನಿಂದ ಸರಾಯ್ ಕಾಲೇ ಖಾನ್, ನೋಯ್ಡಾ, ಐಟಿಒ ಮತ್ತು ಗಾಜಿಯಾಬಾದ್ಗೆ ಹೋಗುವ ವಾಹನಗಳು ಹೆಚ್ಚು ದೂರ ಹೋಗಬೇಕಾಗಿಲ್ಲ. ಪಾದಚಾರಿಗಳಿಗೆ ಸುರಂಗಮಾರ್ಗವನ್ನು ಸಹ ಇಲ್ಲಿ ನಿರ್ಮಿಸಲಾಗುತ್ತಿದೆ.
ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದ ನಂತರ ಜೂನ್ 2020 ರಲ್ಲಿ ಫ್ಲೈಓವರ್ ವಿಸ್ತರಣೆಯ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಯೋಜನೆಯ ಒಟ್ಟು ವೆಚ್ಚ 128.25 ಕೋಟಿ ರೂ.ಗಳಾಗಿದ್ದು, ರಾಂಪ್ ಸೇರಿದಂತೆ ಫ್ಲೈಓವರ್ ಒಟ್ಟು ಉದ್ದ 1,425 ಮೀಟರ್ ನಿರ್ಮಾಣವಿದೆ.












Click it and Unblock the Notifications