Delhi Accident Case: ಪ್ರಕರಣದ ವಿಳಂಬದ ಬಗ್ಗೆ ವರದಿ ನೀಡಲು ಪೊಲೀಸರಿಗೆ ಕೋರ್ಟ್ ಸೂಚನೆ
ನವದೆಹಲಿ, ಜ.10: ದೇಶವನ್ನೇ ಆಘಾತಕ್ಕೆ ನೂಕಿದ್ದ ಕಾಂಜಾವಾಲಾ ಹಿಟ್ ಅಂಡ್ ಡ್ರ್ಯಾಗ್ ಪ್ರಕರಣದಲ್ಲಿ ವಿಳಂಬ ಮಾಡಿದ ಕುರಿತು ವರದಿ ನೀಡುವಂತೆ ದೆಹಲಿಯ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ.
ಅಪಘಾತದ ಸಮಯದಲ್ಲಿ ಮಾಡಿದ ಆರಂಭಿಕ ಪಿಸಿಆರ್ ಕರೆಗಳಿಗೆ ಪ್ರತಿಕ್ರಿಯಿಸಲು ಏಕೆ ವಿಳಂಬವಾಯಿತು ಎಂಬ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ನ್ಯಾಯಾಲಯವು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದೆ.
Delhi Accident Case: ಆರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ
ಪ್ರಕರಣದ ಆರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಪೊಲೀಸರಿಗೆ ಈ ಸೂಚನೆ ನೀಡಿದೆ.
"ಬೆಳಗಿನ 3.24 ಕ್ಕೆ ಮತ್ತು 4.11 ಕ್ಕೆ ಮಾಡಿದ್ದ ಆರಂಭಿಕ ಪಿಸಿಆರ್ ಕರೆಗಳಿಗೆ ಏಕೆ ಪೊಲೀಸರು ಪ್ರತಿಕ್ರಿಯಿಸಲಿಲ್ಲ ಎಂಬ ಬಗ್ಗೆ ವಿವರವಾದ ವರದಿಯನ್ನು ಜಂಟಿ ಪೊಲೀಸ್ ಕಮಿಷನರ್ ನೀಡಬೇಕು" ಎಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸನ್ಯಾ ದಲಾಲ್ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
"ಘಟನೆ ನಡೆದ ದಿನದಿಂದ ಇಲ್ಲಿಯವರೆಗೆ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ತಕ್ಷಣವೇ ಸಂರಕ್ಷಿಸುವಂತೆ ಪೊಲೀಸ್ ಅಧಿಕಾರಿಗೆ ಸೂಚಿಸಿದ್ದಾರೆ. ಜೊತೆಗೆ ಯುವತಿಯನ್ನು ಎಳೆದೊಯ್ದ 12 ರಿಂದ 13 ಕಿಲೋಮೀಟರ್ಗಳ ವ್ಯಾಪ್ತಿಯ ಮಾರ್ಗದ ನಕ್ಷೆಯನ್ನು ಮುಂದಿನ ವಿಚಾರಣೆ ದಿನಾಂಕದೊಳಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ಆದೇಶಿಸಿದ್ದಾರೆ.
ನ್ಯಾಯಾಲಯವು ಪ್ರಕರಣದ ಆರು ಆರೋಪಿಗಳಾದ ದೀಪಕ್ ಖನ್ನಾ, ಅಮಿತ್ ಖನ್ನಾ, ಕ್ರಿಶನ್, ಮಿಥುನ್, ಮನೋಜ್ ಮಿತ್ತಲ್ ಮತ್ತು ಅಶುತೋಷ್ ಭಾರದ್ವಾಜ್ ಅವರನ್ನು ಜನವರಿ 23 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಈ ವೇಳೆ ಪ್ರಕರಣದ ತನಿಖೆಯು ಆರಂಭಿಕ ಹಂತದಲ್ಲಿದೆ. ಜೊತೆಗೆ ಆರೋಪಿಗಳ ನ್ಯಾಯಾಂಗ ಬಂಧನಕ್ಕೆ ಪೂರಕವಾಗಿ ಸಾಕಷ್ಟು ದಾಖಲೆಗಳಿವೆ ಎಂದು ತಿಳಿಸಿದೆ.
20 ವರ್ಷದ ಅಂಜಲಿ ಸಿಂಗ್ ಸ್ಕೂಟರ್ಗೆ ಜನವರಿ 1 ರ ಮುಂಜಾನೆ ಮಾರುತಿ ಸುಜುಕಿ ಬಲೆನೊಗೆ ಡಿಕ್ಕಿ ಹೊಡೆದಿತ್ತು. ಅಪಘಾತದ ಬಳಿಕ ಆಕೆಯ ದೇಹವು ಕಾರಿನ ಚಕ್ರಗಳಲ್ಲಿ ಸಿಲುಕಿಕೊಂಡಿತು. ಆದರೆ, ಕಾರು ನಿಲ್ಲಿಸದೇ ಆರೋಪಿಗಳು ಆಕೆಯ ದೇಹವನ್ನು ಸುಲ್ತಾನ್ಪುರಿಯಿಂದ ಕಾಂಜಾವಾಲಾಗೆ ಬರೋಬ್ಬರಿ 12 ಕಿಲೋಮೀಟರ್ ಎಳೆದುಕೊಂಡು ಹೋಗಿದ್ದರು.