ಹುಷಾರ್: ದೀಪಾವಳಿಗೆ ಪಟಾಕಿ ಹೊಡೆದರೆ 200 ರೂಪಾಯಿ ದಂಡ, 6 ತಿಂಗಳು ಜೈಲು!
ನವದೆಹಲಿ, ಅಕ್ಟೋಬರ್ 19: ದೀಪಾವಳಿ ಆಚರಣೆಗೆ ತುದಿಗಾಲ ಮೇಲೆ ನಿಂತಿದ್ದ, ಪಟಾಕಿ ಸಿಡಿಸುವ ನಿರೀಕ್ಷೆಯಲ್ಲಿದ್ದ ಮಂದಿಗೆ ದೆಹಲಿ ಸರ್ಕಾರ ಶಾಕ್ ಕೊಟ್ಟಿದೆ. ರಾಷ್ಟ್ರ ರಾಜಧಾನಿಯಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ.
ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರವು ನಗರದಲ್ಲಿ ಪಟಾಕಿಗಳನ್ನು ಖರೀದಿಸುವುದನ್ನು ಮತ್ತು ಸಿಡಿಸುವುದನ್ನು ನಿರ್ಬಂಧಿಸಿದೆ. ದೀಪಾವಳಿಯಂದು ಪರಿಸರ ಸಚಿವ ಗೋಪಾಲ್ ರೈ ಪಟಾಕಿ ಸಿಡಿಸಿದರೆ ಆರು ತಿಂಗಳವರೆಗೆ ಜೈಲು ಶಿಕ್ಷೆಯ ಜೊತೆಗೆ 200 ರೂಪಾಯಿ ದಂಡ ವಿಧಿಸಲಾಗುತ್ತಿದೆ.
ಈ ಕುರಿತು ಮಾತನಾಡಿದ ಅವರು, ರಾಜಧಾನಿಯಲ್ಲಿ ಪಟಾಕಿ ಉತ್ಪಾದನೆ, ಶೇಖರಣೆ ಮತ್ತು ಮಾರಾಟಕ್ಕೆ 5 ಸಾವಿರ ರೂಪಾಯಿ ದಂಡ ವಿಧಿಸುವುದರ ಜೊತೆಗೆ ಸ್ಫೋಟಕ ಕಾಯ್ದೆಯ ಸೆಕ್ಷನ್ 9 ಬಿ ಅಡಿಯಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಪರಿಸರ ಸಚಿವ ಗೋಪಾಲ್ ರೈ ತಿಳಿಸಿದ್ದಾರೆ.

ದೆಹಲಿಯಲ್ಲಿ ಪಟಾಕಿ ಹೊಡೆದರೆ ಜೈಲು ಶಿಕ್ಷೆ ಪಕ್ಕಾ!
ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ಸಿಡಿಸುವುದಕ್ಕೆ ನಿಯಂತ್ರಣ ಹೇರಲಾಗುತ್ತಿದೆ. ದೀಪಾವಳಿಯಲ್ಲೂ ಪಟಾಕಿ ಸಿಡಿಸುವಂತಿಲ್ಲ ಎಂದು ಸರ್ಕಾರ ಕಠಿಣ ನಿಯಮವನ್ನು ಜಾರಿಗೊಳಿಸಿದೆ. ರಾಜ್ಯ ಸರ್ಕಾರದ ನಿಯಮಗಳನ್ನು ಯಾವುದೇ ವ್ಯಕ್ತಿಯು ಅಥವಾ ವ್ಯಾಪಾರಿಯು ಉಲ್ಲಂಘನೆ ಮಾಡುವಂತಿಲ್ಲ. ಒಂದು ವೇಳೆ ಸರ್ಕಾರದ ನಿಯಮವನ್ನು ಉಲ್ಲಂಘಿಸಿದರೆ 200 ರೂಪಾಯಿ ದಂಡದ ಜೊತೆಗೆ 6 ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂದು ತಿಳಿಸಿದೆ.

408 ವಿಶೇಷ ತಂಡಗಳಿಂದ ಪಟಾಕಿ ನಿಷೇಧದ ಮೇಲೆ ನಿಗಾ
ನವದೆಹಲಿಯಲ್ಲಿ ಪಟಾಕಿ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಶಿಸ್ತುಕ್ರಮಗಳನ್ನು ತೆಗೆದುಕೊಂಡಿದೆ. ಸಾರ್ವಜನಿಕವಾಗಿ ಪಟಾಕಿ ಹಾರಿಸುವುದರ ಮೇಲಿನ ನಿರ್ಬಂಧ ಉಲ್ಲಂಘನೆ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಅದಕ್ಕಾಗಿ ರಾಷ್ಟ್ರ ರಾಜಧಾನಿಯಲ್ಲಿ 408 ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ದೆಹಲಿ ಪೊಲೀಸರು ಸಹಾಯಕ ಪೊಲೀಸ್ ಆಯುಕ್ತರ ಅಡಿಯಲ್ಲಿ 210 ತಂಡಗಳನ್ನು ರಚಿಸಿದ್ದರೆ, ಕಂದಾಯ ಇಲಾಖೆ 165 ತಂಡಗಳನ್ನು ರಚಿಸಿದೆ. ಅದೇ ರೀತಿ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯು 33 ತಂಡಗಳನ್ನು ರಚಿಸಿದೆ.

ನವದೆಹಲಿಯಲ್ಲಿ 2917 ಕೆಜಿ ಪಟಾಕಿ ವಶ
ನವದೆಹಲಿಯಲ್ಲಿ ಪಟಾಕಿ ನಿಷೇಧಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಾರ್ಯಾಚರಣೆ ಅನ್ನು ಪ್ರಾರಂಭಿಸಲಾಗಿದೆ. ಸರ್ಕಾರದ ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ಪ್ರಕರಣವನ್ನೂ ದಾಖಲು ಮಾಡಿಕೊಳ್ಳಲಾಗುತ್ತಿದೆ. ಕಳೆದ ಅಕ್ಟೋಬರ್ 16ರವರೆಗೆ ಒಟ್ಟು 188 ಮಂದಿ ವಿರುದ್ಧ ನಿಯಮ ಉಲ್ಲಂಘನೆ ಕೇಸ್ ದಾಖಲಿಸಿಕೊಳ್ಳಲಾಗಿದೆ. ಇದರ ಜೊತೆಗೆ 2917 ಕೆಜಿ ಪಟಾಕಿ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಸೆಪ್ಟೆಂಬರ್ನಿಂದ ಪಟಾಕಿ ಮೇಲೆ ನಿರ್ಬಂಧ
ನವದೆಹಲಿಯಲ್ಲಿ ಸೆಪ್ಟೆಂಬರ್ನಿಂದ ಜನವರಿ 1ರವರೆಗೂ ಪಟಾಕಿಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ. ದೀಪಾವಳಿ ಸಮಯದಲ್ಲೂ ಪಟಾಕಿ ಸಿಡಿಸದಂತೆ ನಿಷೇಧ ಹೇರಲಾಗಿದೆ. ಕಳೆದ ಎರಡು ವರ್ಷಗಳಿಂದ ಸೆಪ್ಟೆಂಬರ್ನಿಂದಲೇ ಈ ನಿಷೇಧದ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ. ಅಕ್ಟೋಬರ್ 21ರಂದು "ದಿಯೇ ಜಲವೋ ಪತಾಖೆ ನಹಿ" ಎಂಬ ಸಾರ್ವಜನಿಕ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ.












Click it and Unblock the Notifications