ಗೋರಖ್ ಲ್ಯಾಂಡ್ ಗಾಗಿ ಡಾರ್ಜಿಲಿಂಗ್ ನಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ
ಡಾರ್ಜಿಲಿಂಗ್, ಸೆಪ್ಟೆಂಬರ್ 16: ಗೋರಖ್ ಲ್ಯಾಂಡ್ ಎಂಬ ಪ್ರತ್ಯೇಕ ರಾಜ್ಯ ರಚನೆಗೆ ಆಗ್ರಹಿಸಿ ಎರಡು ತಿಂಗಳುಗಳ ಹಿಂದೆ ಡಾರ್ಜಿಲಿಂಗ್ ನಲ್ಲಿ ನಡೆದಿದ್ದ ಹಿಂಸಾಚಾರ, ಪ್ರತಿಭಟನೆ ಶುಕ್ರವಾರ (ಸೆ. 16) ಮತ್ತೆ ಭುಗಿಲೆದ್ದಿದೆ.
ಪಶ್ಚಿಮ ಬಂಗಾಳ ಸರ್ಕಾರವು ಆ ರಾಜ್ಯದ ಉತ್ತರ ಭಾಗದ ಜನರನ್ನು 2ನೇ ದರ್ಜೆಯ ನಾಗರಿಕರಂತೆ ನೋಡುತ್ತಿದೆ ಎಂದು ಆಕ್ಷೇಪಿಸಿರುವ ಉದ್ರಿಕ್ತರ ದೊಡ್ಡ ಗುಂಪೊಂದು ಶುಕ್ರವಾರ ಇದ್ದಕ್ಕಿದ್ದಂತೆಯೇ ಪ್ರತಿಭಟನೆಗೆ ಮುಂದಾಯಿತು.

ಮಾರುಕಟ್ಟೆಯಲ್ಲಿನ ಅಂಗಡಿಗಳನ್ನು ಬಂದ್ ಮಾಡಲಾಯಿತು. ರಸ್ತೆಗಳಲ್ಲಿ ಟೈರ್ ಸುಟ್ಟು ಪ್ರತಿಭಟನೆ ನಡೆಸಲಾಯಿತು. ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ನೋಡ ನೋಡುತ್ತಿದ್ದಂತೆ ಈ ಹಿಂಸಾಚಾರ ಡಾರ್ಜಿಲಿಂಗ್ ನ ಎಲ್ಲಾ ಕಡೆಗೆ ಹಬ್ಬಿತು. ಸುದ್ದಿ ತಿಳಿದ ಸ್ಥಳೀಯ ಪೊಲೀಸರು ಹಾಗೂ ಅರೆಸೇನಾ ಪಡೆಗಳು ಪ್ರತಿಭಟನೆಯನ್ನು ಹತ್ತಿಕ್ಕಲು ಬೀದಿಗಿಳಿದವು.
ಏತನ್ಮಧ್ಯೆ, ಡಾರ್ಜಿಲಿಂಗ್ ನ ಸೇಂಟ್ ಅಗಸ್ಟಿನ್ ಶಾಲೆಗೆ ಸೇರಿದ ವಾಹನದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿರುವುದಾಗಿ ವರದಿಯಾಗಿದೆ. ಆ ಶಾಲೆಯಲ್ಲಿ ಓದುತ್ತಿರುವ ಥಾಯ್ಲೆಂಡ್ ನ ರಚಾಟಾ ಬುರಿವಾಂಗ್ ಎಂಬ ವಿದ್ಯಾರ್ಥಿಗೆ ಅನಾರೋಗ್ಯ ಕಾಡಿದ್ದರಿಂದ ಆಕೆಯನ್ನು ಎಸ್ ಯುವಿ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ, ಮಾರ್ಗ ಮಧ್ಯೆ ದಂಬಾರ್ ಚೌಕ್ ಎಂಬಲ್ಲಿ ಆ ಕಾರನ್ನು ನಿಲ್ಲಿಸಿದ ದುಷ್ಕರ್ಮಿಗಳು ಕಾರಿನ ಗಾಜುಗಳನ್ನು ಒಡೆದು ಒಳಗಿದ್ದವರನ್ನು ಹೊರ ಹಾಕಿ, ಕಾರಿಗೆ ಭಾರೀ ಹಾನಿ ಮಾಡಿದರು.
ಹೀಗೆ, ಪ್ರತಿಭಟನಾಕಾರರ ಕಿಚ್ಚಿಗೆ ಸುಮಾರು ವಾಹನಗಳು, ಸಾರ್ವಜನಿಕರು ತೊಂದರೆಗೆ ಒಳಗಾಗಿದ್ದಾರೆ.












Click it and Unblock the Notifications