ತಿತ್ಲಿ ಚಂಡಮಾರುತದ ರೌದ್ರಾವತಾರಕ್ಕೆ ಒಡಿಶಾದಲ್ಲಿ 52 ಮಂದಿ ಬಲಿ
Recommended Video

ಭುವನೇಶ್ವರ, ಅಕ್ಟೋಬರ್ 17: ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯಭಾರ ಕುಸಿತದಿಂದ ಎದ್ದಿರುವ ತಿತ್ಲಿ ಚಂಡಮಾರುತಕ್ಕೆ ಒಡಿಶಾ ರಾಜ್ಯವೊಂದರಲ್ಲೇ ಸಾವಿಗೀಡಾದವರ ಸಂಖ್ಯೆ 52 ಕ್ಕೆ ಏರಿದೆ.
ಹತ್ತಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದು, ಅವರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸುಮಾರು 2,200 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ ನಾಶವಾಗಿದೆ ಎಂದು ವರದಿಗಳು ತಿಳಿಸಿವೆ.
ಒಡಿಶಾ, ಆಂಧ್ರಪ್ರದೇಶ ಮತ್ತು ಪಶ್ಚಿಮಬಂಗಾಳ ರಾಜ್ಯಗಳಲ್ಲಿ ತಿತ್ಲಿ ರೌದ್ರಾವತಾರ ಹೆಚ್ಚಿದ್ದು, ಗಂಟೆಗೆ 120 ರಿಂದ 140 ಕಿ.ಮೀ. ವೇಗದಲ್ಲಿ ಗಾಳಿ ಚಲಿಸುತ್ತಿದೆ.

ಒಡಿಶಾದಲ್ಲಿ 52ಕ್ಕೇರಿದ ಮೃತರ ಸಂಖ್ಯೆ
ಒಡಿಶಾದಲ್ಲಿ ತಿತ್ಲಿ ಆರ್ಭಟಕ್ಕೆ ಬಲಿಯಾದವರ ಸಂಖ್ಯೆ 52 ಕ್ಕೇರಿದೆ. ಆಂಧ್ರ ಪ್ರದೇಶದಲ್ಲಿ ತಿತ್ಲಿ ಚಂಡಮಾರುತಕ್ಕೆ ಎಂಟಕ್ಕೂ ಹೆಚ್ಚು ಜನ ಬಲಿಯಾಗಿದ್ದರೆ, ಪಶ್ಚಿಮ ಬಂಗಾಳದಲ್ಲಿ ಯಾವುದೇ ಅಹಿತಕರ ಘಟನೆಯ ವರದಿಯಾಗಿಲ್ಲ. ಒಡಿಶಾದ ಹತ್ತಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದು, ಅವರ ಕುರಿತು ಯಾವುದೇ ಮಾಹಿತಿ ಇನ್ನೂ ಲಭ್ಯವಾಗದಿರುವುದು ಕುಟುಂಬಸ್ಥರಲ್ಲಿ ಆತಂಕ ಸೃಷ್ಟಿಸಿದೆ.

ಗುಹೆಯಲ್ಲಿ ಆಶ್ರಯ ಪಡೆದಿದ್ದ 12 ಜನರ ಸಾವು
ತಿತ್ಲಿ ಚಂಡಮಾರುತಕ್ಕೆ ಹೆದರಿ ಒಡಿಶಾದ ಗುಹೆಯೊಂದರಲ್ಲಿ ಅಡಗಿ ಕುಳಿತಿದ್ದ 12 ಜನರ ಮೇಲೆ ಗುಹೆಯೇ ಕುಸಿದುಬಿದ್ದ ಪರಿಣಾಮ ಸ್ಥಳದಲ್ಲಿಯೇ ಎಲ್ಲರೂ ಮೃತರಾದ ಘಟನೆ ಅ.13 ರಂದು ನಡೆದಿತ್ತು. ಒಡಿಶಾದ ಗಜಪತಿ ಜಿಲ್ಲೆಯ ರಾಯಗಡ ಎಂಬಲ್ಲಿ ಘಟನೆ ನಡೆದಿತ್ತು.

ನಾಸಾದಲ್ಲಿ ತಿತ್ಲಿ ಮತ್ತು ಲುಬಾನ್ ಚಿತ್ರ
ತಿತ್ಲಿ ಮತ್ತು ಲುಬಾನ್ ಚಂಡಮಾರುತದ ಭೀಕರತೆಯನ್ನು ತೋರಿಸುವ ಉಪಗ್ರಹ ಚಿತ್ರವನ್ನು ಇತ್ತೀಚೆಗಷ್ಟೇ ನಾಸಾ ಬಿಡುಗಡೆ ಮಾಡಿತ್ತು. ಗಂಟೆಗೆ ಈ ಚಂಡಮಾರುತದಿಂದಾಗಿ ಭಾರತದ ಪೂರ್ವ ಭಾಗ ಮತ್ತು ದಕ್ಷಿಣ ಭಾಗದಲ್ಲಿ ಅಲ್ಲಲ್ಲಿ ಮಳೆ ಸುರಿಯುತ್ತಲೇ ಇದ್ದು, ಹವಾಮಾನ ವೈಪರೀತ್ಯವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯಭಾರ ಕುಸಿತದಿಂದಾಗಿ ಈ ಚಂಡಮಾರುತ ಎದ್ದಿದೆ. ಗಂಟೆಗೆ 120 ರಿಂದ 140 ಕಿಮೀ ವೇಗದಲ್ಲಿ ಚಲಿಸುವ ಈ ಚಂಡಮಾರುತ ಆಂಧ್ರಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಆರ್ಭಟಿಸುತ್ತಿದೆ. ತಿತ್ಲಿಯಿಂದಾಗಿ ಪಶ್ಚಿಮ ಬಂಗಾಳದ ಪ್ರಸಿದ್ಧ ದಸರಾ ಉತ್ಸವಕ್ಕೂ ಕಳೆ ಇಲ್ಲದಂತಾಗಿದೆ.












Click it and Unblock the Notifications