Cyclone Fengal: ತಿರುವಣ್ಣಾಮಲೈನಲ್ಲಿ ಫೆಂಗಲ್ ಚಂಡಮಾರುತಕ್ಕೆ 7 ಜನ ಬಲಿ: 5 ಲಕ್ಷ ಪರಿಹಾರ- ಈ ರಾಜ್ಯಗಳಿಗೆ ರೆಡ್ ಅಲರ್ಟ್!
ತಿರುವಣ್ಣಾಮಲೈ ಡಿಸೆಂಬರ್ 3: ಫೆಂಗಲ್ ಚಂಡಮಾರುತದ ಪರಿಣಾಮ ನೆರೆ ರಾಜ್ಯ ತಮಿಳುನಾಡು ಹೆಚ್ಚು ಹಾನಿಗೊಳಗಾಗಿದ್ದು, ತಿರುವಣ್ಣಾಮಲೈ ವಿಯುಸಿಯಲ್ಲಿ ಭೂಕುಸಿತ ಉಂಟಾಗಿ 7 ಜನ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಫೆಂಗಲ್ ಸೈಕ್ಲೋನ್ ತಮಿಳುನಾಡಿನ ಜನರನ್ನು ಹೆಚ್ಚು ಬಾದಿಸಿದ್ದು ಮನೆ ಹಾಗೂ ರಸ್ತೆಗಳು ಜಲಾವೃತಗೊಂಡು ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ನೂರಾರು ಮರಗಳು, ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು ಜನ ಜೀವನವೇ ಅಸ್ತವ್ಯಸ್ತಗೊಂಡಿದೆ. ಇನ್ನೂ ಘಟನಾ ಸ್ಥಳಕ್ಕೆ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ಹೌದು... ತಿರುವಣ್ಣಾಮಲೈನ ವಿಯುಸಿ ನಗರದಲ್ಲಿ ಬಂಡೆಗಳು ನೆಲಕ್ಕೆ ಉರುಳಿ ಬಿದ್ದ ಪರಿಣಾಮ ಹಲವು ಮನೆಯೊಂದು ಸಮಾಧಿಯಾಗಿದ್ದು ಹಲವು ಮನೆಗಳಿಗೆ ಸಾಕಷ್ಟು ಹಾನಿಯಾಗಿದೆ. ಇದರಿಂದಾಗಿ ಮನೆಯಲ್ಲಿದ್ದ 5 ಮಕ್ಕಳು ಸೇರಿದಂತೆ 7 ಮಂದಿ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಸಿಲುಕಿಕೊಂಡವರಿಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ 18 ಗಂಟೆಗಳಿಗೂ ಹೆಚ್ಚು ಕಾಲ ಶ್ರಮಿಸಿದರೂ ಅವರನ್ನು ಜೀವಂತವಾಗಿ ರಕ್ಷಿಸಲು ಸಾಧ್ಯವಾಗಲಿಲ್ಲ. ಮಣ್ಣಲ್ಲಿ ಸಿಲುಕಿಕೊಂಡ ಏಳು ಜನರೂ ಸಾವನ್ನಪ್ಪಿದ್ದು ಅವರ ಮೃತ ದೇಹಗಳನ್ನು ಹೊರಗೆ ತೆಗೆಯಲಾಗಿದೆ.

ರಾಜ್ಕುಮಾರ್ (ವಯಸ್ಸು 32), ಮೀನಾ (26), ಗೌತಮ್ (9), ಇನಿಯಾ (7), ಮಹಾ (12), ವಿನೋದಿನಿ (14), ರಮ್ಯಾ (12) ಎಂಬುವವರು ಭೂಕುಸಿತದಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಪರ್ವತದಿಂದ ಮಳೆ ನೀರು ಮತ್ತು ಬಂಡೆಗಳು ಏಕಾಏಕಿ ಉರುಳಿದ ಪರಿಣಾಮ ಬೀದಿಯಲ್ಲಿ ಆಡುತ್ತಿದ್ದ ಐದು ಮಕ್ಕಳು ಗಾಬರಿಗೊಂಡು ಮನೆ ಸೇರಿದ್ದಾರೆ. ಅದೇ ಮನೆಯ ಮೇಲೆ ಬಂಡೆಗಳು ಉರುಳಿದ್ದು ಐದು ಮಕ್ಕಳು ಹಾಗೂ ದಂಪತಿ ಮಣ್ಣಲ್ಲಿ ಸಿಲುಕು ಪ್ರಾಣ ಬಿಟ್ಟಿದ್ದಾರೆ.
ವಿಪತ್ತು ರಕ್ಷಣಾ ತಂಡ, ಅಗ್ನಿಶಾಮಕ ದಳ 18 ಗಂಟೆಗಳ ಕಷ್ಟಕರವಾದ ರಕ್ಷಣಾ ಕಾರ್ಯಾಚರಣೆಯ ನಂತರ ಮಣ್ಣು, ಬಂಡೆಗಳು, ಮನೆಗಳ ಅವಶೇಷಗಳಿಂದ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಅಲ್ಲದೆ ಫೆಂಗಲ್ ಚಂಡಮಾರುತದಿಂದ ತಮಿಳುನಾಡು, ಪುದುಚೇರಿ, ಕರ್ನಾಟಕ ಮತ್ತು ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು ಜನರು ತೊಂದರೆ ಅನುಭವಿಸುವಂತಾಗಿದೆ.
ಕರ್ನಾಟಕದಲ್ಲಿ ಡಿಸೆಂಬರ್ 3ರಂದು ಭಾರೀ ಮಳೆ- ಶಾಲೆಗಳಿಗೆ ರಜೆ
ಕಳೆದೆರಡು ದಿನಗಳಿಂದ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಮತ್ತು ಪುದುಚೇರಿಯ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಫೆಂಗಲ್ ಚಂಡಮಾರುತದಿಂದ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ಡಿಸೆಂಬರ್ 3ರಂದು ಕರ್ನಾಟಕದ ಕೋಲಾರ, ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ಒಟ್ಟು 9 ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.
ಅಲ್ಲದೆ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಕೊಡಗು, ಮಂಡ್ಯ, ಚಾಮರಾಜನಗರ, ಮೈಸೂರು, ರಾಮನಗರ ಸೇರಿದಂತೆ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿಂದು ರೆಡ್ ಅಲರ್ಟ್ ಘೋಷಿಸಲಾಗಿದೆ.

ಕರ್ನಾಟಕದಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ಫೆಂಗಲ್ ಚಂಡಮಾರುತ ಕರ್ನಾಟಕದ ಹಲವೆಡೆ ಸಾಕಷ್ಟು ತೊಂದರೆಯನ್ನುಂಡು ಮಾಡಿದೆ. ಕಳೆದ ದಿನ ಮಲೆ ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಗುಡ್ಡ ಕುಸಿದು ಮರಗಳು ಉರುಳಿ ಬಿದ್ದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ಚಾಮರಾಜನಗರದಲ್ಲಿ ಮನೆಯೊಂದಕ್ಕೆ ಗೋಡೆ ಕುಸಿದು ಹಾನಿಯಾಗಿದ್ದು, ಪನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಉಳ್ಳಾಲ ತಾಲೂಕಿನ ಟಿಂಬರ್ ಮಿಲ್ ಮತ್ತಿತರ ಪ್ರದೇಶಗಳು ಜಲಾವೃತವಾಗಿದ್ದು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೀರು ನಿಂತಿದ್ದರಿಂದ ವಾಹನ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ.

ತಮಿಳುನಾಡಿನಲ್ಲಿ ಪರಿಸ್ಥಿತಿ:
ಇತ್ತ ಉತ್ತರ ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದರಿಂದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಪ್ರಧಾನಿ ಮೋದಿ ಅವರಿಗೆ 2000 ಕೋಟಿ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ತಮಿಳುನಾಡಿನ ತಿರುವರೂರ್, ನಾಗಪಟ್ಟಿಣಂ, ಚೆನ್ನೈ, ವಿಲ್ಲುಪುರಂ, ತಂಜಾವೂರು ಮತ್ತು ತಿರುಪತ್ತೂರ್ ಹೆಚ್ಚು ಹಾನಿಯನ್ನು ಅನುಭವಿಸಿವೆ.
ಪುದುಚೇರಿಯಲ್ಲಿ ಮೂರು ದಶಕಗಳ ದಾಖಲೆ ಮುರಿದ ಮಳೆ
ಪುದುಚೇರಿಯಲ್ಲಿ ಚಂಡಮಾರುತದಿಂದ ಅನಿರೀಕ್ಷಿತ ಮಳೆಯಾಗಿದೆ. ಹೀಗಾಗಿ ಎಲ್ಲಾ ಶಾಲಾ-ಕಾಲೇಜುಗಳನ್ನು ಡಿಸೆಂಬರ್ 3ರವರೆಗೆ ರಜೆ ಘೋಷಿಸಲಾಗಿದೆ. ಶಂಕರಪರಣಿ ನದಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ 200ಕ್ಕೂ ಹೆಚ್ಚು ಮನೆಗಳು ಮುಳುಗಿವೆ. ಅಲ್ಲದೆ ಸಂತ್ರಸ್ತ ಕುಟುಂಬಗಳಿಗೆ ಪುದುಚೇರಿ ಸರ್ಕಾರ 5000 ಪರಿಹಾರ ಘೋಷಿಸಿದೆ.
ಅಲ್ಲದೆ ಫಂಗಲ್ ಚಂಡಮಾರುತದಿಂದಾಗಿ ಪುದುಚೇರಿಯಲ್ಲಿ ಶನಿವಾರ ಮತ್ತು ಭಾನುವಾರ ಮಳೆ 30 ವರ್ಷಗಳ ದಾಖಲೆಯನ್ನು ಮುರಿದಿದೆ. ಶನಿವಾರ ಪುದುಚೇರಿ ತಲುಪಿದ 'ಫಂಗಲ್' ಚಂಡಮಾರುತ ಭಾನುವಾರ ದುರ್ಬಲಗೊಂಡಿತು. ಆದರೆ ಇದರ ಪ್ರಭಾವದಿಂದ ಕೇಂದ್ರಾಡಳಿತ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಹಲವಾರು ಜನ ಸಿಲುಕಿದ್ದಾರೆ.
ಕೇರಳದಲ್ಲಿ ಪರಿಸ್ಥಿತಿ:
ಜೊತೆಗೆ ಕೇರಳದಲ್ಲಿ ಚಂಡಮಾರುತ ದುರ್ಬಲಗೊಂಡಿದ್ದರೂ ಸೋಮವಾರ ಮತ್ತು ಮಂಗಳವಾರ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಕೇರಳದ ಕಾಸರಗೋಡು, ಕಣ್ಣೂರು, ವಯನಾಡ್, ಕೋಝಿಕ್ಕೋಡ್ ಮತ್ತು ಮಲಪ್ಪುರಂನಲ್ಲಿ ರೆಡ್ ಅಲರ್ಟ್ ಹಾಗೂ ಪಾಲಕ್ಕಾಡ್, ತ್ರಿಶೂರ್ ಮತ್ತು ಎರ್ನಾಕುಲಂನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.












Click it and Unblock the Notifications