Cyclone Biparjoy: ಗುಜರಾತ್ನಲ್ಲಿ ಬಿಪರ್ಜಾಯ್ ಅಬ್ಬರ: 21,000 ಜನರ ಸ್ಥಳಾಂತರ
ಅಪಾರ ಪ್ರಮಾಣದ ಹಾನಿಯುಂಟುಮಾಡುವ ಸಾಮರ್ಥ್ಯ ಹೊಂದಿರುವ ' ಬಿಪರ್ಜಾಯ್' ಚಂಡಮಾರುತ ಗುರುವಾರ ಸಂಜೆ ಗುಜರಾತ್ನ ಕಚ್ ಜಿಲ್ಲೆಯ ಜಖೌ ಬಂದರಿಗೆ ಅಪ್ಪಳಿಸುವ ಸಾಧ್ಯತೆ ಇರುವುದರಿಂದ, ಸರ್ಕಾರವು ಕರಾವಳಿ ಜಿಲ್ಲೆಯ ಪ್ರದೇಶಗಳಿಂದ 21,000 ಮಂದಿಯನ್ನು ತಾತ್ಕಾಲಿಕ ಶಿಬಿರಗಳಿಗೆ ಸ್ಥಳಾಂತರ ಮಾಡಿದೆ.
ಕರಾವಳಿ ಪ್ರದೇಶದ 10 ಕಿಮೀ ವ್ಯಾಪ್ತಿಯಲ್ಲಿ ಇರುವ ಜನರನ್ನು ಗುರುತಿಸಿ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ. ಜಖೌ ಬಂದರಿನ ಬಳಿ ತೀವ್ರ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ, ಈ ಸಂದರ್ಭದಲ್ಲಿ ಗಾಳಿಯ ವೇಗ ಗಂಟೆಗೆ 150 ಕಿಲೋಮೀಟರ್ (ಕಿಮೀ) ವರೆಗೆ ತಲುಪುತ್ತದೆ ಎಂದು ಹೇಳಲಾಗಿದೆ. ಚಂಡಮಾರುತವು ಗುಜರಾತ್ನ ಕಚ್, ದೇವಭೂಮಿ ದ್ವಾರಕಾ ಮತ್ತು ಜಾಮ್ನಗರ ಜಿಲ್ಲೆಗಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ.

"ಕರಾವಳಿಯ ಸಮೀಪದಲ್ಲಿ ವಾಸಿಸುವ ಜನರ ಮೇಲೆ ಚಂಡಮಾರುತದ ಸಮಯದಲ್ಲಿ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ. ಆದ್ದರಿಂದ ಇದುವರೆಗೆ, ವಿವಿಧ ಜಿಲ್ಲಾಡಳಿತಗಳು ಸುಮಾರು 21,000 ಜನರನ್ನು ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಿಸಿವೆ. ಸ್ಥಳಾಂತರಿಸುವ ಪ್ರಕ್ರಿಯೆಯು ಇನ್ನೂ ಮುಂದುವರೆದಿದೆ, ಮಂಗಳವಾರ ಸಂಜೆಯೊಳಗಾಗಿ ಎಲ್ಲರನ್ನೂ ಸುರಕ್ಷಿಯ ಸ್ಥಳಕ್ಕೆ ಸ್ಥಳಾಂತಿಸಲಾಗುವುದು ಎಂದು" ರಾಜ್ಯ ಪರಿಹಾರ ಆಯುಕ್ತ ಅಲೋಕ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಯಾವ ಜಿಲ್ಲೆಗಳಿಂದ ಎಷ್ಟು ಜನರ ಸ್ಥಳಾಂತರ
ಇದುವರೆಗೂ 21 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದು, ಇದರಲ್ಲಿ ಕಛ್ ಜಿಲ್ಲೆಯೊಂದರಿಂದಲೇ ಸುಮಾರು 6500 ಜನರನ್ನು ಸ್ಥಳಾಂತರಿಸಲಾಗಿದೆ. ದ್ವಾರಕಾದಿಂದ 5000 ಜನ, ರಾಜ್ಕೋಟ್ನಿಂದ 4000 ಜನ, ಮೋರ್ಬಿಯಲ್ಲಿ 2000, ಜಾಮ್ ನಗರದಲ್ಲಿ 1500 ಮತ್ತು ಪೋರಬಂದರ್ ಜಿಲ್ಲೆಯಲ್ಲಿ 550 ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ವರದಿಯಾಗಿದೆ.
ಭಾರತೀಯ ಕೋಸ್ಟ್ ಗಾರ್ಡ್ (ICG) ಚಂಡಮಾರುತದಿಂದಾಗಿ ಪ್ರತಿಕೂಲ ಹವಾಮಾನದ ನಡುವೂ ರಾತ್ರಿಯ ಕಾರ್ಯಾಚರಣೆ ನಡೆಸಿ ದ್ವಾರಕಾ ಕರಾವಳಿಯಿಂದ 40 ಕಿಮೀ ದೂರದಲ್ಲಿರುವ ತೈಲ ರಿಗ್ನಿಂದ 50 ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದೆ ಎಂದು ಕಡಲ ಏಜೆನ್ಸಿ ಮಂಗಳವಾರ ತಿಳಿಸಿದೆ. ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ALH) ಮತ್ತು ಹಡಗನ್ನು ಬಳಸಿ ಕಾರ್ಯಾಚರಣೆ ಮಾಡಲಾಗಿದೆ.
ವಸತಿ, ಆಹಾರ ಮತ್ತು ಔಷಧಿಗಳ ವ್ಯವಸ್ಥೆ
ಹವಾಮಾನ ವೈಪರೀತ್ಯದಿಂದ ಯಾವುದೇ ಜೀವಹಾನಿಯಾಗದಂತೆ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಪಾಂಡೆ ಹೇಳಿದರು. ಎರಡು ಹಂತಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸಮುದ್ರ ತೀರದಿಂದ 0 ರಿಂದ 5 ಕಿ.ಮೀ ದೂರದಲ್ಲಿರುವ ಜನರನ್ನು ಮೊದಲು ಸ್ಥಳಾಂತರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ನಂತರ ಕರಾವಳಿಯಿಂದ 5 ರಿಂದ 10 ಕಿ.ಮೀ ಅಂತರದಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು, ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರಿಗೆ ಆದ್ಯತೆ ನೀಡಲಾಗುವುದು.
ಚಂಡಮಾರುತದಿಂದ ಹಾನಿಗೊಳಗಾಗುವ ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ತಲಾ 12 ತಂಡಗಳನ್ನು ನಿಯೋಜಿಸಲಾಗಿದ್ದು, ಸ್ಥಳಾಂತರ ಮಾಡಿದ ಜನರಿಗಾಗಿ ವಸತಿ, ಆಹಾರ ಮತ್ತು ಔಷಧಕ್ಕಾಗಿ ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications