ನರಭಕ್ಷಕ ಹುಲಿ 'ಅವನಿ'ಯ ಅನಾಥ ಮರಿಗಳು ಕಾಡಿನಲ್ಲೆ ಪತ್ತೆ, ರಕ್ಷಣೆ
ನರಭಕ್ಷಕ ಹುಲಿ ಅವನಿಯ ಅನಾಥ ಮರಿಗಳು ಮಹಾರಾಷ್ಟ್ರದ ಕಾಡಿನಲ್ಲಿ ಪತ್ತೆಯಾಗಿದ್ದು, ಅವುಗಳನ್ನು ರಕ್ಷಿಸಿ, ಪುನರ್ವಸತಿ ನೀಡಲಾಗಿದೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.
ಹನ್ನೆರಡಕ್ಕೂ ಹೆಚ್ಚು ಹಳ್ಳಿಗರನ್ನು ಕೊಂದಿತ್ತು ಎಂಬ ಆರೋಪ ಇದ್ದ ಹೆಣ್ಣು ಹುಲಿ ಅವನಿಯನ್ನು ನವೆಂಬರ್ ನ ಆರಂಭದಲ್ಲಿ ಕೊಲ್ಲಲಾಗಿತ್ತು. ನರಭಕ್ಷಕವಾಗಿದ್ದ ಅವನಿಯ ಈ ಬೇಟೆಯನ್ನು ಹೈ ಪ್ರೊಫೈಲ್ ಬೇಟೆ ಅಂತಲೇ ಪರಿಗಣಿಸಲಾಗಿತ್ತು. ಇದಕ್ಕೆ ಪ್ರಾಣಿ ಸಂರಕ್ಷಣಾ ಕಾರ್ಯಕರ್ತರು ಭಾರೀ ವಿರೋಧ ವ್ಯಕ್ತಪಡಿಸಿದ್ದರು.
ಈ ಹುಲಿ ಬೇಟೆಗಾಗಿ ಇನ್ನೂರು ಬೇಟೆ ಪ್ಯಾರಾಗ್ಲೈಡರ್ಸ್ ಅನ್ನು ಬಳಸಲಾಗಿತ್ತು. ಅದರ ಜತೆಗೆ ಇನ್ ಫ್ರಾರೆಡ್ ಕ್ಯಾಮೆರಾಗಳು, ಶಾರ್ಪ್ ಶೂಟರ್ ಗಳು, ಇನ್ನೂ ಆಸಕ್ತಿಕರ ಅಂದರೆ ಅವನಿಯನ್ನು ಆಕರ್ಷಿಸುವ ಸಲುವಾಗಿ ಕಾಲ್ವಿನ್ ಕ್ಲೆಯಿನ್ ಸುಗಂಧ ದ್ರವ್ಯವನ್ನು ಸಹ ಬಳಸಲಾಗಿತ್ತು. ಹೀಗೆ ಎರಡು ತಿಂಗಳ ಪ್ರಯತ್ನದ ನಂತರ ಹತ್ಯೆ ಮಾಡಲಾಗಿತ್ತು.
ನರಭಕ್ಷಕ 'ಅವನಿ' ಸಾವಿಗೆ ಹೊಸ ತಿರುವು ನೀಡಿದ ಮರಣೋತ್ತರ ಪರೀಕ್ಷೆ
ಮಹಾರಾಷ್ಟ್ರ ರಾಜ್ಯ ಅರಣ್ಯ ಇಲಾಖೆಯ ಎ.ಕೆ.ಮಿಶ್ರಾ ಮಾತನಾಡಿ, ಮರಿಗಳು ಆರೋಗ್ಯವಾಗಿವೆ ಹಾಗೂ ಚೇತರಿಸಿಕೊಳ್ಳುತ್ತಿವೆ. ತನ್ನ ತಾಯಿ ಹುಲಿ ಮೂಲಕ ಅವು ನರ ಮಾಂಸದ ರುಚಿ ನೋಡಿದ್ದವೆ ಎಂಬುದರ ಬಗ್ಗೆ ತಜ್ಞರು ನಿರ್ಧಾರ ಮಾಡುತ್ತಾರೆ ಎಂದಿದ್ದಾರೆ.
ಬೇಟೆ ವೇಳೆ ಎಷ್ಟು ದೂರದಲ್ಲಿದ್ದವು ಎಂಬುದರ ಮೇಲೆ ನಿರ್ಧಾರ
ಮರಿಗಳು ನರಭಕ್ಷಕ ಆಗಿರಬಹುದು ಅಥವಾ ಆಗದೆಯೂ ಇರಬಹುದು. ಅವನಿಯು ಮನುಷ್ಯರ ಮೇಲೆ ದಾಳಿ ನಡೆಸುವಾಗ ಅವುಗಳು ಅದೆಷ್ಟು ದೂರದಲ್ಲಿದ್ದವು ಎಂಬುದರ ಮೇಲೆ ಆಧಾರ ಪಟ್ಟಿರುತ್ತದೆ. ಆದರೆ ಅವುಗಳನ್ನು ರಕ್ಷಿಸುತ್ತೇವೆ, ಪುನರ್ವಸತಿ ಒದಗಿಸುತ್ತೇವೆ ಎಂದು ನಂಬಿಕೆ ಇಟ್ಟಿದ್ದೇವೆ ಎಂದಿದ್ದಾರೆ.
ಗುಂಡಿಟ್ಟು ಕೊಲ್ಲಬಹುದು ಎಂಬ ಆದೇಶ
ಅರಿವಳಿಕೆ ನೀಡುವುದರಲ್ಲಿ ವಿಫಲವಾದರೆ ಹುಲಿಯನ್ನು ಗುಂಡಿಟ್ಟು ಕೊಲ್ಲಬಹುದು ಎಂದು ಸೆಪ್ಟೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು. ತನ್ನ ಮರಿಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ ಅವನಿ ಹೀಗೆ ವರ್ತಿಸುತ್ತಿದೆ ಎಂದು ಪ್ರಾಣಿ ರಕ್ಷಣಾ ಕಾರ್ಯಕರ್ತರು ವಾದ ಮಂಡಿಸಿದ್ದರು.
ಹಳ್ಳಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು
ಹುಲಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ರೀತಿಗೆ ಬಹಳ ಆಕ್ಷೇಪ ಹಾಗೂ ಸಿಟ್ಟು ವ್ಯಕ್ತವಾಗಿತ್ತು. ಅವನಿಯನ್ನು ಅಸ್ಘರ್ ಆಲಿ ಖಾನ್ ರ ಮಗ, ಭಾರತದ ಹೆಸರಾಂತ ಬೇಟೆಗಾರ ನವಾಬ್ ಶಫತ್ ಆಲಿ ಖಾನ್ ಗುಂಡಿಟ್ಟು ಕೊಂದಿದ್ದಾರೆ. ಮಹಾರಾಷ್ಟ್ರ ಜಿಲ್ಲೆಯ ಹಳ್ಳಿಗರು ಪಟಾಕಿ ಸಿಡಿಸಿ, ಸಂಭ್ರಮ ಆಚರಿಸಿದರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಒಡಿಶಾದಲ್ಲಿ ಉರುಳಿಗೆ ಸಿಲುಕಿ ಹುಲಿ ಸಾವು
2014ರ ಗಣತಿ ಪ್ರಕಾರ ಹುಲಿಗಳು 2200ಕ್ಕೂ ಹೆಚ್ಚಾಗಿವೆ. ಅದಕ್ಕೂ ಮುನ್ನ ಅವುಗಳ ಸಂಖ್ಯೆ 1500ಕ್ಕೂ ಕಡಿಮೆ ಆಗಿತ್ತು. ಭಾರತದಲ್ಲಿ ಆನೆ ಹಾಗೂ ಹುಲಿಗಳು ಸರಾಸರಿ ದಿನಕ್ಕೆ ಒಬ್ಬರನ್ನು ಕೊಲ್ಲುತ್ತಿವೆ ಎಂದು ಸರಕಾರ ಲೆಕ್ಕ ಮುಂದಿಟ್ಟಿದೆ. ಮೂರು ವರ್ಷದ ಹುಲಿಯೊಂದು ಗುರುವಾರ ಒಡಿಶಾದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಉರುಳಿಗೆ ಸಿಲುಕಿ ಸಾವನ್ನಪ್ಪಿದೆ.