ಎಡರಂಗದ ಪ್ರಮುಖ ನಾಯಕ ಎ ಬಿ ಬರ್ಧನ್ ಇನ್ನಿಲ್ಲ
ನವದೆಹಲಿ, ಜನವರಿ, 03: ಎಡರಂಗದ ಪ್ರಮುಖ ನಾಯಕ ಸಿಪಿಐ ಮುಖಂಡ ಎ.ಬಿ. ಬರ್ಧನ್ (92) ಅವರು ಶನಿವಾರ ತಡರಾತ್ರಿ ನಿಧನರಾಗಿದ್ದಾರೆ. ಪಾರ್ಶ್ವವಾಯುಗೆ ತುತ್ತಾಗಿದ್ದ ಬರ್ಧನ್ ಅವರನ್ನು ಡಿಸೆಂಬರ್ 7ರಂದು ಜೆ ಬಿ ಪಂತ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಉಸಿರಾಟ ಸಹಜವಾಗಿತ್ತಾದರೂ, ಶನಿವಾರ ಬೆಳಗ್ಗೆ ರಕ್ತದೊತ್ತಡ ತೀವ್ರವಾಗಿ ಕುಸಿದು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ವ್ಯಾಪಾರ ಸಂಘಟನೆಗಳ ಚಳವಳಿಯಲ್ಲಿ ಬರ್ಧನ್ ಪ್ರಮುಖ ಪಾತ್ರವಹಿಸಿ ವಾಣಿಜ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರು.[2015ರಲ್ಲಿ ನಮ್ಮಗಲಿದ ಗಣ್ಯರು, ರಾಜಕಾರಣಿಗಳು]

ದೇಶದ ಅತ್ಯಂತ ಹಳೆಯ ವಾಣಿಜ್ಯ ಮಂಡಳಿ "ಟ್ರೇಡ್ ಯೂನಿಯನ್ ಕಾಂಗ್ರೆಸ್'ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಮಹಾರಾಷ್ಟ್ರದ 1957ರ ವಿಧಾನಸಭಾ ಚುನಾ ವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಶಾಸಕರಾಗಿದ್ದರು. ನಂತರ ಸಿಪಿಐ ಸೇರಿದ್ದರು, 1996ರಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ವಿದ್ಯಾರ್ಥಿ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಬರ್ಧನ್ ನಂತರ ರಾಜಕಾರಣದ ಮುಖ್ಯ ವಾಹಿನಿಗೆ ಬಂದಿದ್ದರು.
ಬರ್ಧನ್ ನಿಧನಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಎಡರಂಗದ ನಾಯಕರು ಶೋಕ ವ್ಯಕ್ತಪಡಿಸಿದ್ದಾರೆ.












Click it and Unblock the Notifications