ಅಂತರಾಷ್ಟ್ರೀಯ ವಿಮಾನಯಾನದ ಮೇಲಿನ ನಿರ್ಬಂಧ ಜುಲೈ 31 ರವರೆಗೆ ವಿಸ್ತರಣೆ
ನವದೆಹಲಿ, ಜೂ.30: ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಬುಧವಾರ ದೇಶಕ್ಕೆ ಬರುವ ಹಾಗೂ ಹೊರ ಹೋಗುವ ವಿಮಾನಯಾನಗಳ ನಿಷೇಧವನ್ನು ಜುಲೈ 31 ರವರೆಗೆ ವಿಸ್ತರಿಸಿದೆ. 2020 ರ ಮಾರ್ಚ್ನಿಂದ ಸರಕು / ವಾಪಸಾತಿ / ಪರಿಹಾರ ಸೇವೆಗಳನ್ನು ಹೊರತುಪಡಿಸಿ ಭಾರತಕ್ಕೆ ಬರುವ ನಿಗದಿತ ಅಂತರರಾಷ್ಟ್ರೀಯ ವಿಮಾನಯಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಪ್ರಾಧಿಕಾರವು 2021 ರ ಜುಲೈ 31 ರಂದು ಭಾರತದಿಂದ ಹೊರ ಹೋಗುವ ಹಾಗೂ ಭಾರತಕ್ಕೆ ಬರುವ ನಿಗದಿತ ಅಂತರರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಗಳಿಗೆ ಸಂಬಂಧಿಸಿದಂತೆ ವಿಸ್ತರಿಸರಣೆಯನ್ನು ಸುತ್ತೋಲೆಯ ಮೂಲಕ ತಿಳಿಸಿದೆ.
''ಈ ನಿರ್ಬಂಧವು ಅಂತರರಾಷ್ಟ್ರೀಯ ಆಲ್-ಕಾರ್ಗೋ ಕಾರ್ಯಾಚರಣೆಗಳು ಮತ್ತು ಡಿಜಿಸಿಎ ನಿರ್ದಿಷ್ಟವಾಗಿ ಅನುಮೋದಿಸಿದ ವಿಮಾನಗಳಿಗೆ ಅನ್ವಯಿಸುವುದಿಲ್ಲ,'' ಎಂದು ನಾಗರಿಕ ವಿಮಾನಯಾನ ನಿಯಂತ್ರಕದ ಜಂಟಿ ಮಹಾನಿರ್ದೇಶಕ ಸುನಿಲ್ ಕುಮಾರ್ ಹಸ್ತಾಕ್ಷರವಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

"ಆದಾಗ್ಯೂ, ಆಯ್ದ ಮಾರ್ಗಗಳಲ್ಲಿ ಪ್ರಾಧಿಕಾರವು ಕೇಸ್-ಟು-ಕೇಸ್ ಆಧಾರದ ಮೇಲೆ ಅಂತರರಾಷ್ಟ್ರೀಯ ನಿಗದಿತ ವಿಮಾನಗಳನ್ನು ಅನುಮತಿಸಬಹುದು," ಎಂದು ಅಧಿಸೂಚನೆಯು ಹೇಳಿದೆ.
ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಅಧಿಕವಾಗುತ್ತಿದ್ದ ಕಾರಣ ಮೇ 28 ರಂದು ಅಂತರರಾಷ್ಟ್ರೀಯ ವಿಮಾನಯಾನ ನಿಷೇಧವನ್ನು ಜೂನ್ 30 ರವರೆಗೆ ವಿಸ್ತರಿಸಲಾಗಿದೆ. ಅದಕ್ಕೂ ಮುನ್ನ ಮೇ 31ರವರೆಗೆ ನಿರ್ಬಂಧ ಹೇರಲಾಗಿತ್ತು.
ಕಳೆದ ಮಾರ್ಚ್ ಅಂತ್ಯದಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ಆರಂಭದಲ್ಲಿ ಹರಡುವಿಕೆ ತಡೆಯಲು ಮೊದಲ ಲಾಕ್ಡೌನ್ ಘೋಷಿಸಿದಾಗ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. ಆದಾಗ್ಯೂ, ಮೇ ತಿಂಗಳಲ್ಲಿ, ದೇಶೀಯ ಮಾರ್ಗಗಳಲ್ಲಿ ಸೇವೆಗಳನ್ನು ಪುನರಾರಂಭಿಸಲು ಅವಕಾಶ ನೀಡಲಾಗಿದ್ದರೂ ಅಂತರರಾಷ್ಟ್ರೀಯ ವಿಮಾನಗಳ ನಿಷೇಧವು ಇಂದಿಗೂ ಮುಂದುವರೆದಿದೆ.
ಅಂತರರಾಷ್ಟ್ರೀಯ ವಿಮಾನಯಾನ ನಿಷೇಧವು ಮುಂದುವರೆದಿದ್ದರೂ, ''ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಭಾರತಕ್ಕೆ ಭೇಟಿ ನೀಡಲು ಸಾಧ್ಯವಾದಾಗ, ಮೊದಲು 500,000 ಪ್ರವಾಸಿಗರಿಗೆ ಉಚಿತವಾಗಿ ವೀಸಾ ನೀಡಲಾಗುವುದು,'' ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸೋಮವಾರ ಪ್ರಕಟಿಸಿದ್ದರು.
ಆರೋಗ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡಿ ಕೋವಿಡ್ -19 ನಿಂದ ಪೆಟ್ಟು ತಿಂದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಸೀತಾರಾಮನ್ ಘೋಷಿಸಿದ ಎಂಟು ಯೋಜನೆಗಳಲ್ಲಿ ಇದು ಒಂದಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications