4 states Counting: 4 ರಾಜ್ಯಗಳಲ್ಲಿ ಮತ ಎಣಿಕೆ: ಡಿ.6ಕ್ಕೆ I.N.D.I.A ಮೈತ್ರಿಕೂಟ ಸಭೆಗೆ ಖರ್ಗೆ ಕರೆ
ದೆಹಲಿ ಡಿಸೆಂಬರ್ 3: 4 ರಾಜ್ಯಗಳ ಮತ ಎಣಿಕೆ ಇಂದು ನಡೆಯುತ್ತಿದೆ. ಈ ರಾಜ್ಯಗಳಲ್ಲಿ ಪ್ರಬಲ ಪಕ್ಷಗಳ ರಾಜಕೀಯ ಭವಿಷ್ಯ ಈಗಾಗಲೇ ಕಾಣಿಸುತ್ತಿದೆ. ಹೀಗೆ ಮತ ಎಣಿಕೆ ನಡೆಯುತ್ತಿರುವಾಗಲೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು I.N.D.I.A ಮೈತ್ರಿಕೂಟದ ನಾಯಕರಿಗೆ ಕರೆ ಮಾಡಿ ಡಿಸೆಂಬರ್ 6ರಂದು ಸಭೆ ನಡೆಸುವಂತೆ ಸೂಚಿಸಿದ್ದಾರೆ.
ನವದೆಹಲಿಯಲ್ಲಿರುವ ಖರ್ಗೆ ಅವರ ನಿವಾಸದಲ್ಲಿ ಡಿಸೆಂಬರ್ 6ರಂದು ಸಂಜೆ 6 ಗಂಟೆಗೆ ಸಭೆ ನಡೆಸಲು ನಿರ್ಧರಿಸಲಾಗಿದೆ. ಸದ್ಯದ ಮಾಹಿತಿ ಪ್ರಕಾರ, ಛತ್ತೀಸ್ಗಢದಲ್ಲಿ ನೆಕ್ ಟು ನೆಕ್ ಫೈಟ್ ಮಾಡುತ್ತಿರುವ ಕಾಂಗ್ರೆಸ್ ಮಧ್ಯಪ್ರದೇಶ ಮತ್ತು ರಾಜಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ತೆಲಂಗಾಣದಲ್ಲಿ ಬೆಳಿಗ್ಗೆ 10.45 ಕ್ಕೆ ಭಾರತೀಯ ರಾಷ್ಟ್ರ ಸಮಿತಿ (ಬಿಆರ್ಎಸ್) ವಿರುದ್ಧ ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸಿದ್ದು, ಈವರೆಗೂ ಗೆಲ್ಲುವ ವಿಶ್ವಾಸವನ್ನು ಕಳೆದುಕೊಂಡಿಲ್ಲ.
ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಜಯ ಸಾಧಿಸುವುದು ಖಚಿತ ಎಂದು ಹೇಳಲಾಗುತ್ತಿದ್ದು, ಈ ನಡುವೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು I.N.D.I.A ಮೈತ್ರಿಕೂಟದ ಸಭೆ ಕರೆದಿರುವುದು ಭಾರೀ ಕುತೂಹಲವನ್ನು ಮೂಡಿಸಿದೆ. ಭಾರತ ಮೈತ್ರಿಕೂಟದ ಕೊನೆಯ ಸಭೆ ಸೆಪ್ಟೆಂಬರ್ನಲ್ಲಿ ನಡೆದಿತ್ತು. ಕಾಂಗ್ರೆಸ್ ರಾಜಕೀಯ ವಲಯದ ಪ್ರಕಾರ, ಇತರ ಮೈತ್ರಿ ಪಾಲುದಾರರೊಂದಿಗೆ ಸೀಟು ಹಂಚಿಕೆಯ ಮಾತುಕತೆಯನ್ನು ಪ್ರಾರಂಭಿಸುವ ಮೊದಲು ಪಕ್ಷವು ನಾಲ್ಕು ವಿಧಾನಸಭಾ ಚುನಾವಣೆಗಳ ಫಲಿತಾಂಶಕ್ಕಾಗಿ ಕಾಯುತ್ತಿದೆ.
ಛತ್ತೀಸ್ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣದ ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಮೈತ್ರಿ ಪಾಲುದಾರರಾದ ಸಮಾಜವಾದಿ ಪಾರ್ಟಿ (ಎಸ್ಪಿ) ಯೊಂದಿಗೆ ಸಮಸ್ಯೆಗಳನ್ನು ಎದುರಿಸಿತು. ದೆಹಲಿ ಮತ್ತು ಪಂಜಾಬ್ನಲ್ಲಿ ಆಮ್ ಆದ್ಮಿ ಪಾರ್ಟಿ (ಎಎಪಿ) ಯೊಂದಿಗೆ ಸೀಟು ಹಂಚಿಕೆಯ ವಿಷಯದಲ್ಲಿ ಪಕ್ಷವು ಮನಸ್ತಾಪದಲ್ಲಿದೆ.
ಜೊತೆಗೆ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಕೂಡ ಕಾಂಗ್ರೆಸ್ನೊಂದಿಗೆ ಯಾವುದೇ ಸ್ಥಾನಗಳನ್ನು ಹಂಚಿಕೊಳ್ಳಲು ಸಿದ್ಧವಾಗಿಲ್ಲ. ದೇಶಾದ್ಯಂತ ಬಿಜೆಪಿಯ ವಿರುದ್ಧ ಒಬ್ಬ ವಿರೋಧ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು I.N.D.I.A ಮೈತ್ರಿಯ ಕಲ್ಪನೆಯಾಗಿದೆ. ಒಂದು ವೇಳೆ ತೆಲಂಗಾಣದಲ್ಲಿ ಕಾಂಗ್ರೆಸ್ ಜಯಗಳಿಸಿದರೆ I.N.D.I.A ಮೈತ್ರಿಕೂಟದ ಸಭೆಯಲ್ಲಿ ಸಾಕಷ್ಟು ವಿಷಯಗಳು ಚರ್ಚೆಯಾಗಲಿವೆ. ಜೊತೆಗೆ ಆಪರೇಷನ್ ಕಮಲದ ಬಗ್ಗೆಯೂ ಜಾಗೃತಿ ಸಭೆ ಕೂಡ ಇದಾಗಿರುವ ಸಾಧ್ಯತೆಗಳಿವೆ.












Click it and Unblock the Notifications