ಬಂತು ಬಂತು ಓಮಿಕ್ರಾನ್: ಭಾರತದಲ್ಲಿ ಶುರುವಾಗಿದೆಯಾ ಕೊರೊನಾ ಮೂರನೇ ಅಲೆ!?
ನವದೆಹಲಿ, ಡಿಸೆಂಬರ್ 22: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯು ಡಿಸೆಂಬರ್ ತಿಂಗಳ ಮಧ್ಯಭಾಗದಿಂದಲೇ ಶುರುವಾಗಿದೆ ಎಂದು ದೇಶದ ಕೆಲವು ವೈದ್ಯಕೀಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಒಂದೇ ದಿನ ಹರಿಯಾಣದಲ್ಲಿ ಇಬ್ಬರು ಹಾಗೂ ಕೇರಳದಲ್ಲಿ 9 ಮಂದಿಗೆ ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ತಗುಲಿರುವುದು ಜೀನೋಮ್ ಸೀಕ್ವೆನ್ಸಿಂಗ್ ವೇಳೆ ದೃಢಪಟ್ಟಿದೆ.
ಕರ್ನಾಲ್ನಲ್ಲಿ ಪೋರ್ಚುಗಲ್ನಿಂದ ಆಗಮಿಸಿದ 33 ವರ್ಷದ ವ್ಯಕ್ತಿಯೊಬ್ಬರಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಫರಿದಾಬಾದ್ನಲ್ಲಿ ಕೆನಡಾಗೆ ಭೇಟಿ ನೀಡಿದ್ದ ವ್ಯಕ್ತಿಗೂ ಓಮಿಕ್ರಾನ್ ಸೋಂಕು ಅಂಟಿಕೊಂಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಖಾತ್ರಿಯಾಗಿದೆ. ಆ ಮೂಲಕ ಹರಿಯಾಣದಲ್ಲಿ ಬುಧವಾರ ಒಂದೇ ದಿನ ಎರಡು ಹೊಸ ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿವೆ.

ಕೇರಳದಲ್ಲಿ ಒಂದೇ ದಿನ 9 ಮಂದಿಗೆ ಅಂಟಿದ ಓಮಿಕ್ರಾನ್
ಬುಧವಾರ ಒಂದೇ ದಿನ ಕೇರಳದಲ್ಲಿ ಒಟ್ಟು 9 ಮಂದಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಎರ್ನಾಕುಲಂನಲ್ಲಿ ಆರು ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದರೆ, ತಿರುವನಂತಪುರಂನಲ್ಲಿ ಮೂವರಿಗೆ ಓಮಿಕ್ರಾನ್ ಸೋಂಕು ಅಂಟಿಕೊಂಡಿರುವುದು ಖಾತ್ರಿಯಾಗಿದೆ. ಎಲ್ಲ ಸೋಂಕಿತರು ವಿದೇಶಗಳಿಗೆ ಪ್ರಯಾಣಿಸಿದ ಹಿನ್ನೆಲೆಯನ್ನು ಹೊಂದಿರುವುದು ಗೊತ್ತಾಗಿದೆ.

ಹರಿಯಾಣದಲ್ಲಿ ಲಸಿಕೆ ಪಡೆದವರಿಗಷ್ಟೇ ಸಂಚಾರಕ್ಕೆ ಅನುಮತಿ
ಕೊರೊನಾವೈರಸ್ ಹಾಗೂ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆ ನಡುವೆ ಹರಿಯಾಣದಲ್ಲಿ ಶಿಸ್ತುಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಕೊವಿಡ್-19 ಲಸಿಕೆ ಪಡೆದುಕೊಳ್ಳದವರು ಮಾಲ್, ರೆಸ್ಟೋರೆಂಟ್, ಬ್ಯಾಂಕ್ ಮತ್ತು ಕಚೇರಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದಕ್ಕೆ ಅನುಮತಿ ಇರುವುದಿಲ್ಲ," ಎಂದು ಆರೋಗ್ಯ ಸಚಿವ ಅನಿಲ್ ವಿಜ್ ಹೇಳಿದ್ದಾರೆ. ಅಲ್ಲದೇ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟ ವಾರಿಯರ್ಸ್ ಭಾವಚಿತ್ರವನ್ನು ಆರೋಗ್ಯ ಇಲಾಖೆ ಕೇಂದ್ರ ಕಚೇರಿಯಲ್ಲಿ ನಿರ್ಮಿಸಿದ ನೆನಪಿನ ಗೋಡೆ ಮೇಲೆ ಹಾಕಲಾಗುವುದು. ರಾಜ್ಯದಲ್ಲಿ ಈವರೆಗೂ ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ 28 ಮಂದಿ ವಾರಿಯರ್ಸ್ ಮೃತಪಟ್ಟಿದ್ದಾರೆ," ಎಂದು ಅವರು ತಿಳಿಸಿದ್ದಾರೆ.
ಹರಿಯಾಣದಲ್ಲಿ ಓಮಿಕ್ರಾನ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಕೊವಿಡ್-19 ಎರಡನೇ ಅಲೆಯ ಸಂದರ್ಭದಲ್ಲೂ ರಾಜ್ಯವು ಸಮರ್ಥವಾಗಿ ಪರಿಸ್ಥಿತಿ ಅನ್ನು ನಿರ್ವಹಣೆ ಮಾಡಿತ್ತು. ಕಳೆದ ಬಾರಿಯೂ ಸೋಂಕಿತರಲ್ಲಿ ಶೇ.30ರಷ್ಟು ಮಂದಿ ಹೊರರಾಜ್ಯ ಮತ್ತು ಹೊರ ರಾಷ್ಟ್ರದ ನಂಟು ಹೊಂದಿದ್ದಾರೆ. ಆದರೆ ನಾವು ಅವರ ಜೀವವನ್ನು ಉಳಿಸುವ ನಿಟ್ಟಿನಲ್ಲಿ ಶ್ರಮ ವಹಿಸುತ್ತಿದ್ದೇವೆ. ಪಾಣಿಪತ್ ಮತ್ತು ಹಿಸಾರ್ ಪ್ರದೇಶದಲ್ಲಿ ಸರ್ಕಾರವು 500 ಹಾಸಿಗೆಯುಳ್ಳ ಆಸ್ಪತ್ರೆಯನ್ನು ನಿರ್ಮಿಸುತ್ತಿದೆ," ಎಂದು ಆರೋಗ್ಯ ಸಚಿವ ಅನಿಲ್ ವಿಜು ಹೇಳಿದ್ದಾರೆ.

ಕೇರಳದಲ್ಲಿ ಓಮಿಕ್ರಾನ್ ಸಂಖ್ಯೆ 24ಕ್ಕೆ ಏರಿಕೆ
ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಕೇರಳದಲ್ಲಿ 24ಕ್ಕೆ ಏರಿಕೆಯಾಗಿದೆ. ಬುಧವಾರವೊಂದೇ ದಿನ 9 ಮಂದಿಗೆ ಓಮಿಕ್ರಾನ್ ಸೋಂಕು ತಗುಲಿರುವ ಬಗ್ಗೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸ್ಪಷ್ಟಪಡಿಸಿದ್ದಾರೆ. ಎರ್ನಾಕುಲಂನಲ್ಲಿ ಯುಕೆಯಿಂದ ಆಗಮಿಸಿದ ಇಬ್ಬರು, ತಾಂಜಾನಿಯಾದಿಂದ ಆಗಮಿಸಿದ ತಾಯಿ ಮತ್ತು ಮಗು, ಘಾನಾದಿಂದ ಆಗಮಿಸಿದ ಒಬ್ಬ ಮಹಿಳೆ ಮತ್ತು ನೆದರ್ಲೆಂಡ್ ನಿಂದ ಆಗಮಿಸಿದ ಒಬ್ಬ ಮಹಿಳೆಗೆ ಓಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ. ತಿರುವನಂತಪುರಂನಲ್ಲಿ ನೈಜಿರಿಯಾದಿಂದ ಆಗಮಿಸಿದ ಪತಿ-ಪತ್ನಿ ಹಾಗೂ ಮತ್ತೊಬ್ಬ ಮಹಿಳೆಯಲ್ಲಿ ಓಮಿಕ್ರಾನ್ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ. ವಿದೇಶಗಳಿಂದ ಆಗಮಿಸುವ ಪ್ರತಿಯೊಬ್ಬ ಪ್ರಯಾಣಿಕರು ಸೆಲ್ಫ ಕ್ವಾರೆಂಟೇನ್ ಆಗುವಂತೆ ರಾಜ್ಯ ಸರ್ಕಾರವು ನಿಯಮವನ್ನು ವಿಧಿಸಿದೆ.

ಭಾರತದಲ್ಲಿ ಓಮಿಕ್ರಾನ್ ಸೋಂಕಿತ ಪ್ರಕರಣಗಳೆಷ್ಟು?
ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆ ಏರುಮುಖವಾಗಿ ಸಾಗುತ್ತಿದೆ. ಡಿಸೆಂಬರ್ 22ರ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ 224 ಮಂದಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ಜಿನೋಮ್ ಸೀಕ್ವೆನ್ಸಿಂಗ್ ವೇಳೆ ದೃಢಪಟ್ಟಿದೆ. ಮಹಾರಾಷ್ಟ್ರದಲ್ಲಿ 54, ನವದೆಹಲಿಯಲ್ಲಿ 57 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ ಒಟ್ಟು 6,317 ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications