ಕೊರೊನಾ ವೈರಸ್ ಕೊರಗು: ಚೀನಾದಿಂದ ಭಾರತಕ್ಕೆ ಬಂದ 645 ಮಂದಿ ನಿಟ್ಟುಸಿರು
ನವದೆಹಲಿ, ಫೆಬ್ರವರಿ.06: ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ಭಾರತಕ್ಕೂ ಲಗ್ಗೆ ಇಟ್ಟಾಗಿದೆ. ಕೇರಳದಲ್ಲಿ ಮೂವರಿಗೆ ಸೋಂಕು ತಗಲಿರುವ ಬಗ್ಗೆ ಈಗಾಗಲೇ ವರದಿಯಾಗಿದ್ದು, ತೆಲಂಗಾಣದಲ್ಲಿ ಸಾಲು ಸಾಲಾಗಿ ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
ಭಾರತದಲ್ಲಿ ಕೊರೊನಾ ವೈರಸ್ ಪತ್ತೆಯಾದ ಬೆನ್ನಲ್ಲೇ ತೆಲಂಗಾಣದಲ್ಲಿ ಜನರು ಆಸ್ಪತ್ರೆಗಳತ್ತ ಧಾವಿಸಿ ಬರುತ್ತಿದ್ದಾರೆ. ಜ್ವರ, ನಿಶಕ್ತಿ, ಮತ್ತು ಶೀತ, ಉಸಿರಾಟ ತೊಂದರೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಒಂದೇ ದಿನ 63 ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಹಲೋ.. 104.. ಕರ್ನಾಟಕದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿತಾ ಹೆಂಗೆ?
63 ರೋಗಿಗಳಿಗೆ ಕೊರೊನಾ ವೈರಸ್ ತಗಲಿರುವ ಬಗ್ಗೆ ಶಂಕೆ ವ್ಯಕ್ತವಾಗಿತತು. ಈ ಹಿನ್ನೆಲೆಯಲ್ಲಿ ಪರೀಕ್ಷೆಗೊಳಪಡಿಸಿದಾಗ 34 ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿಲ್ಲ ಎಂದು ತೆಲಂಗಾಣದ ಆರೋಗ್ಯ ಇಲಾಖೆ ನಿರ್ದೇಶಕ ಶ್ರೀನಿವಾಸ್ ಸ್ಪಷ್ಟಪಡಿಸಿದ್ದಾರೆ.
ಚೀನಾದಿಂದ ಭಾರತಕ್ಕೆ ಬಂದವರು ಸೋಂಕಿತರಲ್ಲ:
ಚೀನಾದಲ್ಲಿ ಕೊರೊನಾ ವೈರಸ್ ಗೆ 560ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ ಇಳಿಸಲು ಸರ್ಕಾರ ಹೊಸ ಆಸ್ಪತ್ರೆಯನ್ನೇ ತೆರೆದಿದೆ. 1,500 ಬೆಡ್ ಹಾಗೂ 1,000 ಬೆಡ್ ಆಸ್ಪತ್ರೆಗಳನ್ನು ತೆರೆದಿದ್ದು, ಅಲ್ಲಿ ಸೋಂಕಿತರಿಗೆ ವಿಶೇಷವಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನೊಂದೆಡೆ ಚೀನಾದಲ್ಲಿದ್ದ ಭಾರತೀಯರನ್ನು ದೇಶಕ್ಕೆ ವಾಪಸ್ ಕರೆಯಿಸಲಾಗುತ್ತಿದೆ. ಹೀಗೆ ದೇಶಕ್ಕೆ ವಾಪಸ್ ಆಗಮಿಸಿದ 645 ಮಂದಿ ಭಾರತೀಯರಲ್ಲಿ ಕೊರೊನಾ ವೈರಸ್ ಪತ್ತೆಯಾಗಿಲ್ಲ ಎಂದು ವೈದ್ಯಕೀಯ ಪರೀಕ್ಷೆ ವೇಳೆ ಸ್ಪಷ್ಟವಾಗಿದೆ. ಈ ಬಗ್ಗೆ ಭಾರತೀಯ ಆರೋಗ್ಯ ಸಚಿವಾಲಯ ಕೂಡಾ ಸ್ಪಷ್ಟನೆ ನೀಡಿದೆ.