ಬಿಜೆಪಿ ಸಿಎಂ ಟೀಕಿಸಿದ ಕಾಂಗ್ರೆಸ್ ವಕ್ತಾರನಿಗೆ ಎರಡು ವರ್ಷ ಜೈಲು
ಮಧ್ಯಪ್ರದೇಶ, ನವೆಂಬರ್ 17: ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದ ರಾಜ್ಯ ಕಾಂಗ್ರೆಸ್ ವಕ್ತಾರ ಕೆ.ಕೆ ಮಿಶ್ರಾಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ವಿಶೇಷ ಕೋರ್ಟ್ ಈ ಜೈಲು ಶಿಕ್ಷೆ ವಿಧಿಸಿದ್ದು, ಅವರು ತಕ್ಷಣವೇ ಜಾಮೀನು ಪಡೆದುಕೊಂಡಿದ್ದಾರೆ.
ದೇಶದಾದ್ಯಂತ ಸದ್ದು ಮಾಡಿದ ವ್ಯಾಪಂ ಹಗರಣದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಅವರ ಪತ್ನಿ ಸಾಧನಾ ಸಿಂಗ್ ಅವರೂ ಪಾಲ್ಗೊಂಡಿದ್ದಾರೆ ಎಂದು ಕೆ.ಕೆ ಮಿಶ್ರಾ ಹೇಳಿಕೆ ನೀಡಿದ್ದರು.

ಸಾರಿಗೆ ಇಲಾಖೆಯಲ್ಲಿ ಸಾಧನಾ ಸಿಂಗ್ ಅವರ ತವರು ಗೊಂಡಿಯಾದ ಅಭ್ಯರ್ಥಿಗಳನ್ನು ಕಾನೂನಿಗೆ ವಿರುದ್ಧವಾಗಿ ಕನ್ಸ್ಟೇಬಲ್ ಗಳಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಮಿಶ್ರಾ ದೂರಿದ್ದರು. ಈ ಹೇಳಿಕೆ ವಿರುದ್ಧ 2014ರ ಜೂನ್ ನಲ್ಲಿ ಚೌಹಾಣ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ, ಆಧಾರ ರಹಿತ ಆರೋಪಗಳನ್ನು ಮಾಡುವ ಮೂಲಕ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯ ಘನತೆಗೆ ಮಿಶ್ರಾ ಧಕ್ಕೆ ತಂದಿದ್ದಾರೆ ಎಂದು ತೀರ್ಪು ನೀಡಿತ್ತು.
ಮತ್ತು ಸುಳ್ಳು ಹೇಳಿಕೆ ನೀಡಿದ ಮಿಶ್ರಾಗೆ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ 25 ಸಾವಿರ ರೂಪಾಯಿಗಳ ದಂಡ ವಿಧಿಸಿತ್ತು. ತೀರ್ಪು ಬಂದ ತಕ್ಷಣ ಮಿಶ್ರಾ ಜಾಮೀನು ಪಡೆದುಕೊಂಡಿದ್ದು ಸದ್ಯಕ್ಕೆ ಜೈಲು ಶಿಕ್ಷೆಯಿಂದ ಪಾರಾಗಿದ್ದಾರೆ.












Click it and Unblock the Notifications