ರಮ್ಯಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ 'ದಿವ್ಯ ಸ್ಪಂದನೆ'
ಪೇಲವವಾಗಿದ್ದ ಕಾಂಗ್ರೆಸ್ ನ ಸೋಶಿಯಲ್ ಮೀಡಿಯಾ ಕ್ಷೇತ್ರಕ್ಕೆ ಹೊಸ ಹುರುಪು ನೀಡಿದ್ದು ಕನ್ನಡತಿ ದಿವ್ಯ ಸ್ಪಂದನ. ರಮ್ಯಾ ಎಂಬ ಹೆಸರಿನಲ್ಲಿಯೇ ಸಹಸ್ರಾರು ಅಭಿಮಾನಿಗಳ ಮನಸ್ಸುಕದ್ದ ಮೋಹಕ ತಾರೆ, ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಅನಭಿಷಿಕ್ತ ನಾಯಕಿಯಾಗಿ ಆಳಿದವರು. ನಂತರ ಬದುಕಿನ ಹೊಸ ತಿರುವಿನಲ್ಲಿ ರಾಜಕೀಯದತ್ತ ಒಲವು ಹರಿದು, ಚೊಚ್ಚಲ ಸ್ಪರ್ಧೆಯಲ್ಲಿಯೇ(ಮಂಡ್ಯ, ಉಪಚುನಾವಣೆ) ಸಂಸದೆಯಾಗಿ ಜನಮನ ಗೆದ್ದವರು.
ಸದಾ ಹುರುಪಿನಿಂದ ಓಡಾಡುತ್ತ, ಬಹುಬೇಗ ಜನರಿಗೆ ಹತ್ತಿರವಾಗಿ, ತಮ್ಮ ಚುರುಕತನದಿಂದ ಕಾಂಗ್ರೆಸ್ ನ ಹೈಕಮಾಂಡ್ ನಾಯಕರ ಮೆಚ್ಚುಗೆಯನ್ನೂ ಗಳಿಸಿದವರು. ಜನರು ಮತ್ತು ರಾಜಕಾರಣಿಗಳ ನಡುವಿನ ಸೇತುವೆಯಾಗುವುದಕ್ಕೆ ಸಾಮಾಜಿಕ ಮಾಧ್ಯಮಗಳಿಗೆ ಮಾತ್ರ ಸಾಧ್ಯ ಎಂಬುದನ್ನು ಅರಿತ ಅವರು, ಸೋಶಿಯಲ್ ಮೀಡಿಯಾ ಮುಖ್ಯಸ್ಥೆಯಾಗಿ ಭಡ್ತಿ ಪಡೆಯುತ್ತಿದ್ದಂತೆಯೇ, ಕಾಂಗ್ರೆಸ್ ನ ಸಾಮಾಜಿಕ ಮಾಧ್ಯಮಕ್ಕೆ ಹೊಸ ದಿಕ್ಕು ತೋರಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಸಿಗುವ ಚಿಕ್ಕಪುಟ್ಟ ವಿಷಯಗಳನ್ನೂ ವಿವಾದವನ್ನಾಗಿ ಪರಿವರ್ತಿಸುವ ಚಾಕಚಕ್ಯತೆಯನ್ನು ಬಲ್ಲವರಾಗಿದ್ದ ರಮ್ಯಾ, ಅವನ್ನೆಲ್ಲ ಸಮರ್ಥವಾಗಿ ಬಳಸಿಕೊಂಡು, ಕಾಂಗ್ರೆಸ್ ನಲ್ಲಿ ಖಾಯಂ ಸ್ಥಾನವನ್ನು ಕಾದಿರಿಸಿಕೊಂಡರು.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರೊಂದಿಗಿನ ಆತ್ಮೀಯ ಒಡನಾಟ, ರಾಜಕೀಯಕ್ಕೆ ಪರಿಚಯಿಸಿದ ನಟ ಅಂಬರೀಶ್ ಅವರ ಜೊತೆಗಿನ ಮುನಿಸು, ಸಂಸದೆಯಾಗುತ್ತಿದ್ದಂತೆಯೇ ಮಂಡ್ಯ ಜನರನ್ನು ಮರೆತಿದ್ದಾರೆ ಎಂಬ ಆರೋಪ, 2014 ರ ಲೋಕಸಭಾ ಚುನಾವಣೆಯಲ್ಲಿ ಸೋಲು ಮುಂತಾದ ಹಲವು ವಿಷಯಗಳಿಂದ ರಮ್ಯಾ ಅವರು ವಿವಾದದ ಕೇಂದ್ರಬಿಂದುವೂ ಆಗಿದ್ದಾರೆ.
ನವೆಂಬರ್ 29, 1982 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ರಮ್ಯಾ ಅವರು ಇಂದು ತಮ್ಮ 35 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಕಾಂಗ್ರೆಸ್ ನ ಬಹುಮುಖ್ಯ ಮುಖಂಡರಲ್ಲಿ ಒಬ್ಬರಾಗಿರುವ ರಮ್ಯಾ ಅವರಿಗೆ ನೂರಾರು ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಶುಭ ಹಾರೈಸಿದ್ದಾರೆ.
|
ನಿಮ್ಮ ಬದುಕಿನಲ್ಲಿ ಹೊಸಬೆಳಕು ಬರಲಿ...
ಚಂದನವನದ ರಾಣಿ, ಎಐಸಿಸಿಗೆ ಹೊಸ ಹುರುಪು ನೀಡಿದ ನಿಮಗೆ ಜನ್ಮದಿನದ ಶುಭಾಶಯಗಳು. ಈ ವರ್ಷ ನಿಮ್ಮ ಬದುಕಿನಲ್ಲಿ ಹೊಸ ಬೆಳಕು ತರಲಿ ಎಂದು ಡಾ.ಅಶ್ವಿನ್ ಸಿ ಗೌಡ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ನಿಮ್ಮ ನೇತೃತ್ವವದಲ್ಲಿ ಕಾಂಗ್ರೆಸ್ ಹೊಸ ಎತ್ತರಕ್ಕೇರಲಿ!
ದಿವ್ಯ ಸ್ಪಂದನ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ವಿಭಿನ್ನ ಕಾರ್ಯಶೈಲಿ ನಮಗೆಂದಿಗೂ ಸ್ಫೂರ್ತಿದಾಯಕ. ನಿಮ್ಮ ನೇತೃತ್ವದಲ್ಲಿ ಕಾಂಗ್ರೆಸ್ ಹೊಸ ಉತ್ತುಂಗಕ್ಕೇರಲಿ ಎಂಬುದು ನಮ್ಮ ಹಾರೈಕೆ ಎಂದು ಮಟ್ಸ್ ಎಂಬ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
|
ರಾಹುಲ್ ಅಭಿಮಾನಿಗಳಿಂದ ಶುಭಹಾರೈಕೆ
ಕಾಂಗ್ರೆಸ್ ಕುಟುಂಬದ ಸದಸ್ಯರಾದ, ಸೋಶಿಯಲ್ ಮೀಡಿಯಾ ಸೆನ್ಸೇಶನ್ ದಿವ್ಯ ಸ್ಪಂದನ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮಗೆ ದೇವರು ಒಳಿತನ್ನುಂಟುಮಾಡಲಿ. ನೀವು ನಿಜಕ್ಕೂ ಕಾಂಗ್ರೆಸ್ ಗೆ ಒಂದು ಆಸ್ತಿ. ಹಾಗೆಯೇ ದೇಶಕ್ಕೂ ಸಹ ಎಂದು ರಾಹುಲ್ ಗಾಂಧಿ ಅಭಿಮಾನಿಗಳು ಶುಭಹಾರೈಸಿದ್ದಾರೆ.
|
ನೀವು ಯಾವತ್ತಿಗೂ ನಮಗೆ ಸ್ಫೂರ್ತಿ
ಜನ್ಮದಿನದ ಶುಭಾಶಯಗಳು. ನೀವು ಯಾವತ್ತಿಗೂ ನಮಗೆ ಸ್ಫೂರ್ತಿ. ನೀವು ಇನ್ನೂ ಬಹುಕಾಲ ನಮ್ಮ ದೇಶಕ್ಕೆ, ರಾಜ್ಯಕ್ಕೆ ಉತ್ತಮ ಸೇವೆಯ ಮೂಲಕ ಕೊಡುಗೆ ನೀಡುತ್ತೀರಿ ಎಂಬ ಭರವಸೆ ಇದೆ ಎಂದು ವಿನಾಯಕ ಎಂ ಜಿ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ನಗುನಗುತಾ ಬಾಳಿ...
ನಮ್ಮ ಎಐಸಿಸಿ ಸೊಶಿಯಲ್ ಮಿಡಿಯಾ ಅಧ್ಯಕ್ಷೆ ದಿವ್ಯ ಸ್ಪಂದನ ಅವರಿಗೆ ಜನ್ಮದಿನದ ಶುಭಾಶಯಗಳು. ಯಾವಾಗಲೂ ನಗುನಗುತಾ, ಆರೋಗ್ಯವಂತರಾಗಿ ಬಾಳಿ. ಈ ವರ್ಷ ನಿಮಗೆ ಹೆಚ್ಚು ಹೆಚ್ಚು ಖುಷಿ ತರಲಿ ಎಂದು ಮಂಗಾಯ್ ಧಿಲೀಪ್ ಎನ್ನುವವರು ಟ್ವೀಟ್ ಮಾಡಿದ್ದಾರೆ.












Click it and Unblock the Notifications