ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟು; ಕಪಿಲ್ಗೆ ನಾಯಕರ ಬೆಂಬಲ
ನವದೆಹಲಿ, ಅಕ್ಟೋಬರ್ 01: ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕಾಂಗ್ರೆಸ್ ತೊರೆಯುವುದಾಗಿ ಘೋಷಣೆ ಮಾಡಿರುವುದು ಪಕ್ಷದೊಳಗಿನ ಬಿಕ್ಕಟ್ಟನ್ನು ಹೆಚ್ಚಿಸಿದೆ. ಇದರ ನಡುವೆ ಪಕ್ಷದಲ್ಲಿ ನಾಯಕತ್ವವೇ ಇಲ್ಲ ಎಂದು ಕಪಿಲ್ ಸಿಬಲ್ ಹೇಳಿಕೆ ನೀಡಿದ್ದು, ಈ ಹೇಳಿಕೆ ವಿರುದ್ಧ ಪಕ್ಷದ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯನ್ನು ಹಲವು ಕಾಂಗ್ರೆಸ್ ಮುಖಂಡರು ಟೀಕಿಸಿದ್ದಾರೆ.
"ನಮ್ಮ ಪಕ್ಷದಲ್ಲಿ ಅಧ್ಯಕ್ಷರೇ ಇಲ್ಲ. ಹಾಗಾಗಿ ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಿದ್ದಾರೆ ಎಂಬುದು ತಿಳಿದಿಲ್ಲ" ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಕಪಿಲ್ ಸಿಬಲ್ ನಿವಾಸದ ಹೊರಗೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದ್ದಾರೆ. ಈ ಬೆಳವಣಿಗೆಯನ್ನು ಕಾಂಗ್ರೆಸ್ನ ಹಿರಿಯ ನಾಯಕರು ವಿರೋಧಿಸಿದ್ದಾರೆ.
ಕಾಂಗ್ರೆಸ್ ಹಿರಿಯ ಮುಖಂಡ ಗುಲಾಬ್ ನಬಿ ಆಜಾದ್, ಬಿ.ಎಸ್. ಹೂಡಾ, ಆನಂದ್ ಶರ್ಮಾ ಹಾಗೂ ಪಿ. ಚಿದಂಬರಂ ಪ್ರತಿಭಟನೆಯನ್ನು ವಿರೋಧಿಸಿದ್ದು, ಕಪಿಲ್ ಸಿಬಿಲ್ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

'ನಾನು ಕಾಂಗ್ರೆಸ್ ತೊರೆದಿದ್ದೇನೆ. ಆದರೆ ಬಿಜೆಪಿ ಸೇರುವುದಿಲ್ಲ. ಆದರೆ ನನ್ನನ್ನು ಹೀಗೆ ನಡೆಸಿಕೊಳ್ಳಬಾರದಿತ್ತು' ಎಂದು ಗುರುವಾರ ಅಮರಿಂದರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಆದರೆ ಅಮರೀಂದರ್ ದಿಢೀರ್ ರಾಜೀನಾಮೆ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ನವಜ್ಯೋತ್ ಸಿಂಗ್ ಸಿಧು ರಾಜೀನಾಮೆ ಘೋಷಿಸಿರುವುದು ಕಾಂಗ್ರೆಸ್ ಬಿಕ್ಕಟ್ಟನ್ನು ಹೆಚ್ಚಿಸಿದೆ.
ಪಂಜಾಬ್ನಲ್ಲಿನ ಈ ಬಿಕ್ಕಟ್ಟನ್ನು ರಾಹುಲ್ ಹಾಗೂ ಪ್ರಿಯಾಂಕಾ ನಿಭಾಯಿಸಿದ ಕುರಿತು ಕಾಂಗ್ರೆಸ್ ಹಿರಿಯ ಮುಖಂಡ ಪಿ. ಚಿದಂಬರಂ ಟೀಕಿಸಿದ್ದಾರೆ. 'ಪಕ್ಷದಲ್ಲಿ ಅರ್ಥಪೂರ್ಣ ಸಂವಾದ ನಡೆಸಲು ಸಾಧ್ಯವಾಗದಿರುವ ಅಸಮಾಧಾನ ನನ್ನಲ್ಲಿದೆ. ನನ್ನ ಸಹೋದ್ಯೋಗಿ ಹಾಗೂ ಸಂಸದನ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವುದು ನೋವಿನ ಸಂಗತಿ' ಎಂದು ಟ್ವೀಟ್ ಮಾಡಿದ್ದಾರೆ. ಮನೀಶ್ ತಿವಾರಿ ಹಾಗೂ ಶಶಿ ತರೂರ್ ಅವರು ಸಿಬಲ್ ಬೆಂಬಲಕ್ಕೆ ನಿಂತಿದ್ದಾರೆ.
ಪಂಜಾಬ್ನಲ್ಲಿನ ಕಾಂಗ್ರೆಸ್ ಬಿಕ್ಕಟ್ಟಿನ ಕುರಿತು ಕಪಿಲ್ ಸಿಬಲ್ ಪ್ರತಿಕ್ರಿಯಿಸಿದ್ದು, 'ನಮ್ಮ ಪಕ್ಷದಲ್ಲಿ ಅಧ್ಯಕ್ಷರೇ ಇಲ್ಲ. ಹಾಗಾಗಿ ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿದಿಲ್ಲ' ಎಂದಿದ್ದರು. 'ಪಕ್ಷ ಬಿಟ್ಟು ಹೋದವರು ವಾಪಸಾಗಬೇಕು. ದೇಶದ ಪ್ರತಿ ಕಾಂಗ್ರೆಸಿಗ ಪಕ್ಷ ಬಲವರ್ಧನೆ ಬಗ್ಗೆ ಯೋಚಿಸಬೇಕು. ಕಾಂಗ್ರೆಸ್ ಮಾತ್ರವೇ ಈ ಗಣರಾಜ್ಯವನ್ನು ಉಳಿಸಲು ಸಾಧ್ಯ" ಎಂದು ಹೇಳಿದ್ದರು. 'ದೇಶದ ಗಡಿರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇಂಥ ಸ್ಥಿತಿ ಎದುರಾಗಿದೆ ಎಂದರೆ ಏನರ್ಥ?' ಎಂದು ಆತಂಕ ವ್ಯಕ್ತಪಡಿಸಿದ್ದರು. ಅವರ ಹೇಳಿಕೆ ಕೆಲವು ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.

ತನ್ನ ಪಕ್ಷದ ಕಾರ್ಯಕರ್ತರೇ ತನ್ನ ವಿರುದ್ದ ಪ್ರತಿಭಟನೆ ನಡೆಸಿರುವ ಬಗ್ಗೆ ಮಾತನಾಡಿದ ಕಪಿಲ್ ಸಿಬಲ್, "ನಾನು ಈ ಬೆಳವಣಿಗೆಯಿಂದ ಗಲಿಬಿಲಿಗೊಳ್ಳುವುದಿಲ್ಲ. ತುಂಬಾ ಜಾಗರೂಕವಾಗಿಯೇ ಮಾತನಾಡಿದ್ದೇನೆ. ನನ್ನ ಮಾತಿಗೆ ನಾನು ಬದ್ಧ" ಎಂದು ಸಮರ್ಥಿಸಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕತ್ವದ ಕುರಿತು ಈ ಹಿಂದೆಯೂ ಕಪಿಲ್ ಸಿಬಲ್ ಆರೋಪ ಮಾಡಿದ್ದರು.
ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಬುಧವಾರವಷ್ಟೇ ಭೇಟಿಯಾಗಿದ್ದಾರೆ. ಅಮರೀಂದರ್ ಸಿಂಗ್ ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಬಿಜೆಪಿ ಸೇರುತ್ತಾರೆಯೇ ಎಂಬ ಅನುಮಾನಗಳಿಗೆ ಈ ಭೇಟಿ ನೀರೆರೆದಿತ್ತು. ಆದರೆ ಈ ಊಹಾಪೋಹಗಳಿಗೆ ತೆರೆ ಎಳೆದಿರುವ ಕಾಪ್ಟನ್ ಅಮರೀಂದರ್ ಸಿಂಗ್ "ನಾನು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ," ಎಂದು ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications